ವಿಕಸಿತ ಭಾರತ ಸಂಕಲ್ಪ ಯಾತ್ರೆಗೆ ಶಾಸಕ ಟೆಂಗಿನಕಾಯಿ ಚಾಲನೆ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಈ ದೇಶದ ಪ್ರತಿ ಹಳ್ಳಿಯೂ ಅಭಿವೃದ್ಧಿಯಾದರೆ ಮಾತ್ರವೇ ದೇಶ ಅಭಿವೃದ್ಧಿಯಾಗಲು ಸಾಧ್ಯ. ಈ ಪರಿಕಲ್ಪನೆಯನ್ನು ಇಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಕಳೆದ ಒಂಬತ್ತೂವರೆ ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.ಮಂಗಳವಾರ ನಗರದ ಘಂಟಿಕೇರಿ ಓಣಿಯಲ್ಲಿ ಮೋದಿ ಸರ್ಕಾರ ಗ್ಯಾರಂಟಿ ನಮ್ಮ ಸಂಕಲ್ಪ ವಿಕಸಿತ ಭಾರತ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಕನಸು ಈ ದೇಶದ ಕಟ್ಟಕಡೆಯ ವ್ಯಕ್ತಿಗೂ ಕೇಂದ್ರ ಸರ್ಕಾರದ ಸವಲತ್ತು ದೊರಕಬೇಕು ಎಂಬುದು. ಸ್ವಾತಂತ್ರ್ಯಬಂದ 58 ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ 3 ಕೋಟಿ ಆವಾಸ್ ಯೋಜನೆ ನೀಡಿದೆ. ಆದರೆ, ನರೇಂದ್ರ ಮೋದಿ ಸರ್ಕಾರ ಕೇವಲ 9 ವರ್ಷಗಳಲ್ಲಿ 3,500 ಪ್ರಧಾನ ಮಂತ್ರಿ ಆವಾಸ್ ಯೋಜನೆ ನೀಡಿದೆ. ದೇಶದಲ್ಲಿ 9 ವರ್ಷದಲ್ಲಿ ವಿಮಾನ ಮತ್ತು ರೈಲ್ವೆ ನಿಲ್ದಾಣಗಳು, ಗುಣಮಟ್ಟದ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣವಾಗಿವೆ.ದೇಶದ ಬಡವರ ಸಂಕಷ್ಟ, ರೈತರ ಸಮಸ್ಯೆಗಳನ್ನು ಅರಿತು ಪಿಎಂ ಕೃಷಿ ಸಮ್ಮಾನ್, ಫಸಲ್ ಬಿಮಾ, ರಸಾಯನಿಕ ಗೊಬ್ಬರದ ಸಬ್ಸಿಡಿ, ಪ್ರತಿ ಮನೆಗೂ ಶೌಚಾಲಯ, ಪಿಎಂ ಆವಾಸ್ ಯೋಜನೆ, ಉಜ್ವಲ ಯೋಜನೆಯ ಅಡಿ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. ಕೇಂದ್ರ ಸರ್ಕಾರದ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಹಾಗೂ ನಗರ ಪ್ರದೇಶದವರಿಗೆ ತಲುಪಿಸುವ ಉದ್ದೇಶದಿಂದ ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಜನತೆ ಇದರ ಲಾಭ ಪಡೆಯಬೇಕು ಎಂದು ತಿಳಿಸಿದರು.
ಈ ವೇಳೆ ಹು-ಧಾ ಪೂರ್ವ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಪ್ರಭು ನವಲಗುಂದಮಠ, ಡಾ. ಕ್ರಾಂತಿ ಕಿರಣ, ಗುರಯ್ಯ ಸಾಲಿಮಠ, ಬಸವರಾಜ ಜಾಬೀನ, ಲಕ್ಷ್ಮೀಕಾಂತ ಘೋಡಕೆ, ನೀಲಕಂಠ ತಡಸದಮಠ, ಗಣೇಶ ಅಮರಾವತಿ, ಪದ್ಮಾವತಿ ಚಿಗನಾಂಪಲ್ಲಿ, ಮಧು ಉಪ್ಪಿನ, ಪೂಜಾ ರುದ್ರಾಪೂರ, ಶಿವಾನಂದ ಅಂಬಿಗೇರ ಸೇರಿದಂತೆ ಹಲವರಿದ್ದರು.