ಮಾಗಡಿ: ನವಂಬರ್ ತಿಂಗಳಿಗೆ ಮಾತ್ರ ರಾಜ್ಯೋತ್ಸವ ಆಚರಣೆ ಮಾಡುವ ಬದಲು 365 ದಿನವೂ ಕನ್ನಡಾಂಬೆಯ ಆರಾಧನೆ ಮಾಡಬೇಕು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಹೇಳಿದರು.
ಪಟ್ಟಣದ ಕೆಂಪೇಗೌಡ ವೃತ್ತದ ಬಳಿ ಕರ್ನಾಟಕ ನವ ನಿರ್ಮಾಣ ವೇದಿಕೆ ವತಿಯಿಂದ 9ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಕರ್ನಾಟಕಕ್ಕೆ ಅನ್ಯಾಯವಾದರೆ ಹಲವು ಸಂಘಟನೆಗಳು ಕನ್ನಡ ಪರವಾಗಿ ಹೋರಾಟ ಮಾಡುತ್ತಿರುವುದರಿಂದ ನಮ್ಮ ರಾಜ್ಯದ ಮೇಲೆ ದಬ್ಬಾಳಿಕೆ ಮಾಡುವುದು ಕಡಿಮೆ ಆಗುತ್ತಿದೆ. ನಿಷ್ಪಕ್ಷಪಾತವಾಗಿ ಸಂಘಟನೆಗಳು ಹೋರಾಟ ಮಾಡಿದರೆ ಕನ್ನಡ ಜನತೆಗೆ ನ್ಯಾಯ ಕೊಡಿಸುವ ಕೆಲಸ ಆಗಲಿದೆ ಎಂದು ಹೇಳಿದರು.ಕನ್ನಡಿಗರಾದವರು ನಾವು ವ್ಯವಹಾರಕ್ಕೆ ಬೇರೆ ಭಾಷೆಯನ್ನು ಕಲಿತು ನಮ್ಮ ಕನ್ನಡ ಭಾಷೆಯನ್ನು ಗೌರವಿಸುವ ಕೆಲಸವನ್ನು ಮಾಡಿದಾಗ ಮಾತ್ರ ಕನ್ನಡ ಭಾಷೆ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ. ಮಾಗಡಿ ಪಟ್ಟಣದಲ್ಲಿ ಕನ್ನಡ ಭವನ ಮತ್ತು ಪತ್ರಿಕಾ ಭವನ ನಿರ್ಮಾಣಕ್ಕೆ ಈಗಾಗಲೇ ಜಾಗ ನಿಗದಿ ಮಾಡಿದ್ದು, ಕಟ್ಟಡ ನಿರ್ಮಾಣಕ್ಕೂ ಸಹಾಯ ಮಾಡುವ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ ಎಂದು ತಿಳಿಸಿದರು.
ನಮ್ಮ ಕರ್ನಾಟಕ ನವ ನಿರ್ಮಾಣ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಶ್ರೀಪತಿಹಳ್ಳಿ ರಾಜಣ್ಣ ಮಾತನಾಡಿ, ನಮ್ಮ ಸಂಘಟನೆ ಕನ್ನಡ ಭಾಷೆ, ನೆಲ, ಜಲ ವಿರುದ್ಧ ಅನ್ಯಾಯವಾದರೆ ಹೋರಾಟಕ್ಕೆ ಸಿದ್ಧರಾಗಿದ್ದು, ಹಲವು ಹೋರಾಟಗಳಲ್ಲಿ ನಮ್ಮ ವೇದಿಕೆಯ ಸದಸ್ಯರು ಭಾಗವಹಿಸಿ ನ್ಯಾಯ ಕೊಡಿಸುವ ಕೆಲಸವನ್ನು ಮಾಡಲಾಗಿದೆ. ಎಲ್ಲಿ ಅನ್ಯಾಯ ನಡೆಯುತ್ತದೆಯೋ ಅಲ್ಲಿ ನಮ್ಮ ಸಂಘಟನೆ ಬಡವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದೆ. 9 ವರ್ಷಗಳಿಂದಲೂ ಸತತವಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದು ರಾಜ್ಯೋತ್ಸವಕ್ಕೆ ಗಣ್ಯರ ಸಹಕಾರದಿಂದ ನಡೆಸಲಾಗುತ್ತಿದೆ ಇದೇ ರೀತಿ ಕನ್ನಡ ಸೇವೆಯನ್ನು ಮುಂದುವರಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು.ಪಟ್ಟಣದ ಕಲ್ಯಾಗೇಟ್ ವಿನಾಯಕ ಸ್ವಾಮಿ ದೇವಸ್ಥಾನದಿಂದ ಡಾ. ರಾಜಕುಮಾರ್ ರಸ್ತೆ ಮೂಲಕ ಡೂಮ್ ಲೈಟ್ ವೃತ್ತದಿಂದ ಕೆಂಪೇಗೌಡ ವೃತ್ತದವರೆಗೂ ಬೆಳ್ಳಿ ರಥದಲ್ಲಿ ಭುವನೇಶ್ವರಿ ತಾಯಿಯ ಭಾವಚಿತ್ರವನ್ನು ಮೆರವಣಿಗೆಗೆ ಗಾರಡಿ ಗೊಂಬೆ, ಪಟ್ಟದ ಕುಣಿತ, ವೀರಗಾಸೆ, ಡೊಳ್ಳು ಕುಣಿತ, ತಮಟೆ ವಾದ್ಯದೊಂದಿಗೆ ಮೆರವಣಿಗೆ ನಡೆಯಿತು. ಖ್ಯಾತ ಗಾಯಕರಿಂದ ರಸಮಂಜರಿ ಕಾರ್ಯಕ್ರಮ ಮೂಲಕ ರಂಜಿಸಲಾಯಿತು.
ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ರಮ್ಯಾ ನರಸಿಂಹಮೂರ್ತಿ, ಸದಸ್ಯ ಪುರುಷೋತ್ತಮ್, ಜುಟ್ಟನಹಳ್ಳಿ ವಿಎಸ್ಎಸ್ ಎನ್ ಅಧ್ಯಕ್ಷ ಜೆ.ಪಿ. ಚಂದ್ರೇಗೌಡ, ಗ್ಯಾರಂಟಿ ಅನುಷ್ಠಾನದ ತಾಲೂಕು ಅಧ್ಯಕ್ಷ ಕಲ್ಕೆರೆ ಶಿವಣ್ಣ, ಕಾಂಗ್ರೆಸ್ ಯುವ ಮುಖಂಡ ಶಶಾಂಕ್ ರೇವಣ್ಣ, ಕಾಂಗ್ರೆಸ್ ಮಹಿಳಾ ಸದಸ್ಯರಾದ ಶೈಲಜಾ, ವನಜ, ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದ ಅರ್ಚಕರಾದ ನಾರಾಯಣಪ್ಪ, ರೈತ ಸಂಘದ ತಾಲೂಕು ಅಧ್ಯಕ್ಷ ಹೊಸಪಾಳ್ಯ ಲೋಕೇಶ್, ಕಾರ್ಮಿಕ ಘಟಕದ ಅಧ್ಯಕ್ಷ ಪ್ರಸನ್ನ ಗೌಡ, ನವನಿರ್ಮಾಣ ವೇದಿಕೆ ಗೌರವಾಧ್ಯಕ್ಷ ಮಾಹಾಂತೇಶ್, ರಾಜ್ಯ ಉಪಾಧ್ಯಕ್ಷ ಪುರುಷೋತ್ತಮ್, ಕಾರ್ಮಿಕ ಘಟಕದ ಅಧ್ಯಕ್ಷ ಸಂಪತ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.