ಸೃಷ್ಟಿಯಲ್ಲಿ ಯಾರು ಏನಾದರೂ ಆಗಿ ಹುಟ್ಟಬಹುದು - ಬದುಕುವ ಹಕ್ಕನ್ನು ಕಸಿದುಕೊಳ್ಳಬೇಡಿ : ಮಂಜಮ್ಮ ಜೋಗತಿ

KannadaprabhaNewsNetwork |  
Published : Sep 13, 2024, 01:41 AM ISTUpdated : Sep 13, 2024, 01:05 PM IST
ಬಳ್ಳಾರಿಯಲ್ಲಿ ಗುರುವಾರ ಜರುಗಿದ ಜಿಲ್ಲಾ ಕ್ರೈಸ್‌ ವಸತಿ ಶಾಲೆಗಳ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪದ್ಮಶ್ರೀ ಮಂಜಮ್ಮ ಜೋಗತಿ ಅವರು ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು.  | Kannada Prabha

ಸಾರಾಂಶ

ಸೃಷ್ಟಿಯಲ್ಲಿ ಯಾರು ಏನಾದರೂ ಆಗಿ ಹುಟ್ಟಬಹುದು. ಮನುಷ್ಯ ಸೇರಿದಂತೆ ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಯಾರು ಕಸಿದುಕೊಳ್ಳಬೇಡಿ ಎಂದು ಪದ್ಮಶ್ರೀ ಪುರಸ್ಕೃತ ಕಲಾವಿದೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ಬಳ್ಳಾರಿ: ಸೃಷ್ಟಿಯಲ್ಲಿ ಯಾರು ಏನಾದರೂ ಆಗಿ ಹುಟ್ಟಬಹುದು. ಮನುಷ್ಯ ಸೇರಿದಂತೆ ಪ್ರತಿ ಪ್ರಾಣಿಗೂ ಬದುಕುವ ಹಕ್ಕಿದೆ. ಆ ಹಕ್ಕನ್ನು ಯಾರು ಕಸಿದುಕೊಳ್ಳಬೇಡಿ ಎಂದು ಪದ್ಮಶ್ರೀ ಪುರಸ್ಕೃತ ಕಲಾವಿದೆ ಡಾ.ಮಾತಾ ಬಿ.ಮಂಜಮ್ಮ ಜೋಗತಿ ಅಭಿಪ್ರಾಯಪಟ್ಟರು.

ಸಮಾಜ ಕಲ್ಯಾಣ ಇಲಾಖೆ, ರಾಜ್ಯ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಗರದ ವಾಲ್ಮೀಕಿ ಭವನದಲ್ಲಿ ಗುರುವಾರ ಏರ್ಪಡಿಸಿದ್ದ ಬಳ್ಳಾರಿ ಜಿಲ್ಲಾ ಕ್ರೈಸ್‌ ವಸತಿ ಶಾಲೆಗಳ ಶಿಕ್ಷಕರ ದಿನಾಚರಣೆ ಹಾಗೂ ಸ್ಮರಣ ಸಂಚಿಕೆ ಅನಾವರಣ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದಲ್ಲಿ ನಾವು ಹೀಗೆ ಆಗಬೇಕು. ಹೀಗೆ ಹುಟ್ಟಬೇಕು ಎಂದು ಯಾರಿಗೂ ಗೊತ್ತಾಗುವುದಿಲ್ಲ. ನಾನು ಹೆಣ್ಣಾಗಿ ಪರಿವರ್ತನೆಯಾಗಿ ಸಮಾಜದಲ್ಲಿ ಸಾಕಷ್ಟು ನೋವು, ಅವಮಾನ ಅನುಭವಿಸಿದ್ದೇನೆ ಎಂದು ಬದುಕಿನ ಸತ್ಯ ಬಿಚ್ಚಿಟ್ಟರು.

ಗಂಡಾಗಲಿ, ಹೆಣ್ಣಾಗಲಿ, ಯಾರೇ ಆಗಲಿ ಪ್ರತಿಯೊಬ್ಬರಿಗೂ ಒಂದು ಬದುಕಿದೆ. ಅದನ್ನು ಹುಡುಕಿಕೊಂಡು ಧೈರ್ಯವಾಗಿ ಬದುಕು ಕಟ್ಟಿಕೊಳ್ಳಬೇಕಿದೆ. ಪೋಷಕರು ಆಸೆ, ಆಕಾಂಕ್ಷೆ ಬದಿಗೊತ್ತಿ ಮಕ್ಕಳಿಗಾಗಿ ಜೀವನ ಸವೆಸುತ್ತಾರೆ. ಅದಕ್ಕೆ ಮೋಸ ಮಾಡಬಾರದು. ಕುಟುಂಬದಿಂದ ತಿರಸ್ಕೃತ ಆದ ಮೇಲೆ ಗುರುಗಳ ಆಶೀರ್ವಾದದೊಂದಿಗೆ ಹಳ್ಳಿಯಿಂದ ದೆಹಲಿವರೆಗೆ ಹೋಗಿ ಪದ್ಮಶ್ರೀ ಪ್ರಶಸ್ತಿ ಪಡೆದ ಹಾದಿ ಬಗ್ಗೆ ವಿವರಿಸಿದರು.

ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಮಾತನಾಡಿ, ಅಂದಿನ ಶಿಕ್ಷಣಕ್ಕೂ ಇಂದಿನ ಶಿಕ್ಷಣಕ್ಕೂ ತುಂಬ ವ್ಯತ್ಯಾಸವಿದೆ. ಮುಂದೆ ಉನ್ನತ ಶಿಕ್ಷಣದ ಜತೆಗೆ ಕೌಶಲ್ಯ ಆಧಾರಿತ ಶಿಕ್ಷಣಬೇಕಿದೆ. ಹಾಗಾಗಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಅಂದಾಗ ಮಕ್ಕಳು ಗುರಿ ಹೊಂದುತ್ತಾರೆ. ಗುರಿ ಸರಿಯಾಗಿದ್ದರೆ ಸಾಧನೆ ಮಾಡಬಹುದು ಎಂಬುದಕ್ಕೆ ಮಂಜಮ್ಮ ಜೋಗತಿ ಉದಾಹರಣೆ ಎಂದು ತಿಳಿಸಿದರು.

ವಸತಿ ಶಾಲೆಗಳಲ್ಲಿ ಎಲ್ಲ ಮೂಲಭೂತ ಸೌಕರ್ಯಗಳಿದ್ದು, ಶಿಕ್ಷಕರ ವ್ಯಕ್ತಿತ್ವವು ವಿದ್ಯಾರ್ಥಿಗಳಿಗೆ ಮಾದರಿಯಾಗಬೇಕು. ವಸತಿ ಶಾಲೆಗಳಲ್ಲಿ ಅಭ್ಯಸಿಸಿದ ಮಕ್ಕಳು ಎಲ್ಲಾ ರಂಗಗಳಲ್ಲಿ ಬೆಳೆದಿದ್ದಾರೆ. ಆ ವಿಧದಲ್ಲಿ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಎಲ್ಲ ವಸತಿ ಶಾಲೆಗಳ ಸಂಕ್ಷಿಪ್ತ ಮಾಹಿತಿಯುಳ್ಳ ಸ್ಮರಣ ಸಂಚಿಕೆ ಪುಸ್ತಕವನ್ನು ಗಣ್ಯರು ಬಿಡುಗಡೆ ಮಾಡಿದರು.

ಇದಕ್ಕೂ ಮುನ್ನ ಸಂಡೂರು ತಾಲೂಕಿನ ಮೆಟ್ರಿಕಿ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಮಕ್ಕಳಿಂದ ಸಾಂಸ್ಕೃತಿಕ ಸೊಬಗಿನ ಸ್ವಾಗತ ನೃತ್ಯ ನಡೆಸಿಕೊಟ್ಟರು.

ಹಂಪಿ ಕನ್ನಡ ವಿವಿಯ ಅಧ್ಯಯನಾಂಗದ ನಿರ್ದೇಶಕ ಡಾ.ಅಮರೇಶ ಯತಗಲ್ ವಿಶೇಷ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನಿಸಲಾಯಿತು. ಬಳಿಕ 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಎಸ್ಪಿ ನವೀನ್‌ಕುಮಾರ್, ರಾಜ್ಯ ಕ್ರೈಸ್ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಜಗದೀಶ ಕಣಕಾಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಜಲಾಲಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ದಿವಾಕರ, ಜಿಲ್ಲಾ ಸಮನ್ವಯಾಧಿಕಾರಿ ಹಾಗೂ ಬಂಡ್ರಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲ ಪ್ರಸನ್ನಕುಮಾರ್ ಟಿ.ವೈ. ಉಪಸ್ಥಿತರಿದ್ದರು.

PREV

Recommended Stories

ಆಹಾರೋದ್ಯಮಿಯಾಗಲು ಹಣಕಾಸು ನೆರವು ಸಿಗೋದೆಲ್ಲಿ? ಪಡೆಯೋದು ಹೇಗೆ?
ಆಹಾರ ಉದ್ದಿಮೆಗಳ ರಫ್ತು ಹೆಚ್ಚಿಸಲು ವಿಶೇಷ ಯೋಜನೆ ರೂಪಿಸುತ್ತೇವೆ: ಹರೀಶ್​​