ಭಾರತಪ್ರಪಂಚವಿಶೇಷರಾಜಕೀಯಮನರಂಜನೆಅಪರಾಧಕ್ರೀಡೆಕರ್ನಾಟಕಇ- ಪೇಪರ್

ನೋಂದಣಿಗೊಂಡ ಖೇಣಿದಾರರು ಸಂಘಟಿತರಾಗಲಿ: ವೀರಭದ್ರಪ್ಪ

KannadaprabhaNewsNetwork | Published : Jun 11, 2025 11:23 AM

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅಡಕೆ ಖೇಣಿದಾರರ ಅಭಿವೃದ್ಧಿ ಸಂಘ ಸಂಘಟನೆಗೊಂಡು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ನೋಂದಣಿಗೊಂಡ ಖೇಣಿದಾರರು ಸಂಘಟಿತರಾದಾಗ ಮಾತ್ರ ಖೇಣಿದಾರರ ಕೆಲಸಕ್ಕೆ ಮಾನ್ಯತೆ ಸಿಗಲಿದೆ ಎಂದು ದಾವಣಗೆರೆ ಜಿಲ್ಲಾ ಖೇಣಿದಾರರ ಸಂಘದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ಹೇಳಿದ್ದಾರೆ.

- ಚನ್ನಗಿರಿ ತಾಲೂಕು ಅಡಕೆ ಖೇಣಿದಾರರ ಅಭಿವೃದ್ಧಿ ಸಂಘದಿಂದ ಕುಂದುಕೊರತೆ ಸಭೆ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅಡಕೆ ಖೇಣಿದಾರರ ಅಭಿವೃದ್ಧಿ ಸಂಘ ಸಂಘಟನೆಗೊಂಡು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ನೋಂದಣಿಗೊಂಡ ಖೇಣಿದಾರರು ಸಂಘಟಿತರಾದಾಗ ಮಾತ್ರ ಖೇಣಿದಾರರ ಕೆಲಸಕ್ಕೆ ಮಾನ್ಯತೆ ಸಿಗಲಿದೆ ಎಂದು ದಾವಣಗೆರೆ ಜಿಲ್ಲಾ ಖೇಣಿದಾರರ ಸಂಘದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ಹೇಳಿದರು.

ಪಟ್ಟಣದ ಚನ್ನಮ್ಮಾಜಿ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ತಾಲೂಕು ಅಡಕೆ ಖೇಣಿದಾರರ ಅಭಿವೃದ್ಧಿ ಸಂಘದ ಕುಂದುಕೊರತೆ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಆಗಸ್ಟ್ ತಿಂಗಳಿನಿಂದ ಅಡಕೆ ಕಟಾವು ಆರಂಭವಾಗಲಿದೆ. ಖೇಣಿದಾರರು ಅನುಸರಿಸಬೇಕಾದ ಕ್ರಮಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು. ಅಡಕೆ ಖೇಣಿ ಸಿಗಲಿ ಎಂಬ ಉದ್ದೇಶದಿಂದ ಅವಸರಪಟ್ಟು ಮುಂದೆ ಹೋದರೆ ಖೇಣಿಯಲ್ಲಿ ನಷ್ಟ ನುಭವಿಸಬೇಕಾದಿತು ಎಂದು ತಿಳಿಸಿದರು.

ಪ್ರತಿಯೊಬ್ಬ ಖೇಣಿದಾರನಿಗೂ ತಾನು ಹಣವಂತನಾಗಬೇಕು ಎಂಬ ಆಸೆ ಇರುತ್ತದೆ. ಆದರೆ ಅಧಿಕ ಬೆಲೆಗೆ ಅಡಕೆ ತೋಟದ ಮಾಲೀಕರಿಂದ ಖರೀದಿ ಮಾಡಿ, ಅವರಿಗೆ ಮಾತು ಕೊಟ್ಟಂತೆ ಹಣ ನ್ನು ನೀಡಲು ಆಗದೇ ಇದ್ದಾಗ ಸಾಲಗಾರರಾಗುವ ಪರಿಸ್ಥಿತಿ ಎದುರಾಗಲಿದೆ. ಈ ಬಗ್ಗೆ ಖೇಣಿದಾರರು ಎಚ್ಚರಿಕೆ ವಹಿಸಬೇಕು ಎಂದರು.

ಸೆಕೆಂಡ್ ಅಡಕೆ ಮಿಶ್ರಣ ಮಾಡ್ಬೇಡಿ:

ಚಿತ್ರದುರ್ಗದ ಪ್ರಕಾಶ್ ಮಾತನಾಡಿ, ನಾವು ಎಷ್ಟು ಎಕರೆಗಳಲ್ಲಿ ಅಡಕೆ ಖೇಣಿ ಮಾಡುತ್ತೇವೆ ಎನ್ನುವುದು ಮುಖ್ಯವಲ್ಲ ಖೇಣಿ ಮಾಡಿದ ನಂತರ ನಿಭಾಯಿಸುವ ಶಕ್ತಿ ಇದೆಯೋ, ಇಲ್ಲವೋ ಎಂದು ತಿಳಿದುಕೊಳ್ಳಬೇಕು. ಖೇಣಿದಾರರು ವ್ಯಾಪಾರಸ್ಥರಲ್ಲ, ಅವರು ನಮ್ಮಂತೆ ರೈತರೇ ಆಗಿರುತ್ತಾರೆ. ಇಂದು ಮಾರುಕಟ್ಟೆಯಲ್ಲಿ ಅಡಕೆಗೆ ಉತ್ತಮ ಧಾರಣೆ ಸಿಗುತ್ತಿದೆ ಎಂದ ಅವರು, ಖೇಣಿದಾರರು ಶುದ್ಧ ಅಡಕೆಯಲ್ಲಿ ಸೆಕೆಂಡ್ ಅಡಕೆಯನ್ನು ಮಿಶ್ರಣ ಮಾಡಲು ಹೋಗಬೇಡಿ ಎಂದು ಸಲಹೆ ನೀಡಿದರು.

ಸಭೆಯಲ್ಲಿ ಖೇಣಿದಾರರ ಸಂಘದ ಪ್ರಮುಖರಾದ ಸುಣಿಗೆರೆ ಬಸವರಾಜಪ್ಪ, ನಟರಾಜ್, ಶಿವಕುಮಾರ್, ಮಂಜುನಾಥ್, ಬಿಲ್ಲಹಳ್ಳಿ ಸಿದ್ದೇಶ್, ಸಿರಾಜ್, ಮಾಲತೇಶ್, ಮದನ್ ಸಾಗರ್ ಉಪಸ್ಥಿತರಿದ್ದರು.

- - -

(ಬಾಕ್ಸ್‌)

* ಖೇಣಿದಾರರಲ್ಲಿ ಒಮ್ಮತ ಬೇಕು

ದಿಗ್ಗೇನಹಳ್ಳಿ ನಾಗರಾಜ್ ಮಾತನಾಡಿ, ಈ ಹಿಂದೆ ಖೇಣಿದಾರರು ಒಂದು ಕ್ವಿಂಟಲ್ ಹಸಿ ಅಡಕೆಗೆ 13.5 ಕೆ.ಜಿ. ಒಣ ಅಡಕೆಯನ್ನು ನೀಡುತ್ತಿದ್ದರು. ಪ್ರಸ್ತುತ ಅಡಕೆ ತೂಕ ಬರುತ್ತಿಲ್ಲದ ಕಾರಣ ಖೇಣಿದಾರರು ನಷ್ಟ ಅನುಭವಿಸುವಂತಾಗಿದೆ. ಪ್ರಸಕ್ತ ವರ್ಷದಿಂದ ಖೇಣಿದಾರರು ಒಮ್ಮತದಿಂದ 1 ಕ್ವಿಂ. ಹಸಿ ಅಡಕೆಗೆ 11 ಕೆ.ಜಿ. ಒಣ ಅಡಕೆ ಕೊಡುವಂತೆ ತೋಟದ ಮಾಲೀಕರೊಂದಿಗೆ ಮಾತನಾಡಿ, ಖೇಣಿ ಹಿಡಿದುಕೊಳ್ಳಬೇಕು. ಈ ಬಗ್ಗೆ ಎಲ್ಲ ಖೇಣಿದಾರರು ಒಮ್ಮತದಿಂದ ಇರಬೇಕು ಎಂದರು.)

- - -

-10ಕೆಸಿಎನ್‌ಜಿ2.ಜೆಪಿಜಿ:

ಜಿಲ್ಲಾ ಖೇಣಿದಾರರ ಸಂಘದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ಕುಂದುಕೊರತೆ ಸಭೆ ಉದ್ಘಾಟಿಸಿದರು.