ಹಳಿಯಾಳ ತಾಲೂಕಿನಾದ್ಯಂತ ಸಂಭ್ರಮದ ಹಬ್ಬ ಆಚರಣೆ
ಕನ್ನಡಪ್ರಭ ವಾರ್ತೆ ಹಳಿಯಾಳ
ತಾಲೂಕಿನೆಲ್ಲೆಡೆ ಮುಸ್ಲಿಮರು ಶನಿವಾರ ರಂಜಾನ್ ಹಬ್ಬವನ್ನು ಭಕ್ತಿಶ್ರದ್ಧೆಯಿಂದ ಆಚರಿಸಿದರು.ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸುವ ಮುನ್ನ ಪಟ್ಟಣದ ವಿವಿಧ ಬಡಾವಣೆ(ಮೊಹಲ್ಲಾ)ಗಳ ಮುಸ್ಲಿಂ ಬಾಂಧವರು ಇಲ್ಲಿನ ಅರ್ಬನ್ ಬ್ಯಾಂಕ್ ಬಳಿಯಿರುವ ಅಂಜುಮನ್ ಸಂಸ್ಥೆಯ ಬಳಿ ಜಮಾಯಿಸಿದರು. ತದನಂತರ ಅಲ್ಲಿಂದ ಪವಿತ್ರ ಶ್ಲೋಕಗಳನ್ನು ಪಠಣ ಮಾಡುತ್ತಾ ಮೆರವಣಿಗೆಯಲ್ಲಿ ಹಬ್ಬದ ಸಾಮೂಹಿಕ ಪ್ರಾರ್ಥನೆ(ನಮಾಜ್) ಸಲ್ಲಿಸುವ ಮರಡಿಗುಡ್ಡದ ಈದ್ಗಾ ಮೈದಾನಕ್ಕೆ ಬಂದು ಜಮಾಯಿಸಿದರು.ತದನಂತರ ಹಬ್ಬದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಪ್ತಿ ಮುಷ್ತಾಕ್ ಗೋಲೆಹಳ್ಳಿ ಹಬ್ಬದ ಪ್ರಾರ್ಥನಾ ವಿಧಿ ನಡೆಸಿದರು. ತದನಂತರ ಮುಪ್ತಿ ಫಯಾಜ್ ಅಹ್ಮದ್ ಇಟ್ಟಂಗಿವಾಲೆಯವರು ರಂಜಾನ್ ಹಬ್ಬದ ಸಂದೇಶ ನೀಡಿ, ರಂಜಾನ್ ಪ್ರಯುಕ್ತ ಉಪವಾಸ ಕೈಗೊಂಡು ಕೆಡುಕಿನಿಂದ ಪರಿವರ್ತನೆಗೊಂಡು ಒಳಿತನ್ನು ಬದುಕಿಗೆ ಅಳವಡಿಸಿಕೊಳ್ಳೋಣ ಎಂದರು.
ಈ ಸಂದರ್ಭ ಪಟ್ಟಣದಲ್ಲಿ ಸರ್ಕಾರಿ ಬಾಲಕಿಯರ ಉರ್ದು ಶಾಲೆಯ ನವೀಕರಣಕ್ಕಾಗಿ ಅಂದಾಜು 15 ಗುಂಟೆ ಹೊಸ ಜಮೀನನ್ನು ಲೀಜ್ ಮೇಲೆ ನೀಡುವುದರ ಜೊತೆಯಲ್ಲಿ ಲೀಜ್ ಪಡೆಯಲು ಅನುದಾನವನ್ನು ಮಂಜೂರು ಮಾಡಿದ ಶಾಸಕ ದೇಶಪಾಂಡೆಯವರನ್ನು ಅಭಿನಂದಿಸಿ ಕೃತಜ್ಞತೆ ಸಲ್ಲಿಸಲಾಯಿತು. ಮುಸ್ಲಿಂ ಸಮುದಾಯದ ಪ್ರಮುಖರಾದ ಉದ್ಯಮಿ ರಫೀಕ್ ಎಂ. ಬಸರಿಕಟ್ಟಿ, ಅಂಜುಮನ್ ಸಂಸ್ಥೆಯ ಮಾಜಿ ಅಧ್ಯಕ್ಷ ಅಲಿಂ ಬಸರಿಕಟ್ಟಿ, ಪುರಸಭಾ ಮಾಜಿ ಅಧ್ಯಕ್ಷ ಅಜರ್ ಬಸರಿಕಟ್ಟಿ, ಜಿಲ್ಲಾ ವಕ್ಪ್ ಮಂಡಳಿಯ ಮಾಜಿ ಅಧ್ಯಕ್ಷ ಮಹಮದ್ ಖಯ್ಯಾಂ ಮುಗದ, ಯೂಸೂಪ ಜಂಗೂಬಾಯಿ, ಪ್ರಮುಖರಾದ ಎಂ.ಎ. ಕಾಗದ, ಫಯಾಜ್ ಶೇಖ್, ಇಮ್ತಿಯಾಜ್ ಶೇಖ್, ರಿಜ್ವಾನ ಕಿಲ್ಲೆದಾರ, ಇಮ್ತಿಯಾಜ್ ಮನಿಯಾರ್, ಫಾರೂಖ್ ಬೇಪಾರಿ, ಸುಭಾನಿ ಗೋರಿಖಾನ್, ಸಿಕಂದರ್ ಮುಜಾವರ, ದುರ್ಗಾಡಿ, ಜಂಗೂಬಾಯಿ ಹಾಗೂ ಲತೀಪಣ್ಣನವರ ಕುಟುಂಬದವರು ಪ್ರಾರ್ಥನೆಯಲ್ಲಿ ಪಾಲ್ಗೊಂಡರು.ಹಬ್ಬದ ಪ್ರಾರ್ಥನೆಯ ಸಮಾರೋಪದಲ್ಲಿ ಮುಪ್ತಿ ಮುಷ್ತಾಕ್ ಜಾಗತಿಕ ಶಾಂತಿ ಹಾಗೂ ಸಾಮರಸ್ಯತೆಗಾಗಿ ಪ್ರಾರ್ಥಿಸಿದರು.ಸಿಹಿ ಪಾಯಸ್:ಹಬ್ಬದ ಸಾಮೂಹಿಕ ಪ್ರಾರ್ಥನೆಯ ನಂತರ ಪ್ರತಿಯೊಬ್ಬರು ಒಬ್ಬರನ್ನೊಬ್ಬರನ್ನು ಅಲಂಗಿಸಿಕೊಂಡು ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ತದನಂತರ ಮನೆಗೆ ತರಳಿ ತಮ್ಮ ನೆರಹೊರೆಯವರಿಗೆ, ಸ್ನೇಹಿತರಿಗೆ, ಪರಿಚಯಸ್ಥರಿಗೆ ಹಬ್ಬದ ಸಿಹಿ ಪಾಯಸ(ಸುರ್ಕುರ್ಮಾ)ವನ್ನು ಹಬ್ಬಕ್ಕಾಗಿ ಸಿದ್ಧಪಡಿಸಿದ ಭೋಜನವನ್ನು ಪರಸ್ಪರ ವಿನಿಮಯ ಮಾಡಿಕೊಂಡು ಸಂಭ್ರಮಿಸಿದರು.ಗ್ರಾಮೀಣ ಭಾಗಗಳಲ್ಲಿಯೂ ರಂಜಾನ್:ಇನ್ನೂ ಗ್ರಾಮಾಂತರ ಭಾಗಗಳಾದ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿರುವ ಗ್ರಾಮಗಳಾದ ಗೋಲೆಹಳ್ಳಿ, ಜೋಗನಕೊಪ್ಪ, ಜಾವಳ್ಳಿ, ತಟ್ಟಿಗೇರಾ, ಭಾಗವತಿ ಮೊದಲಾದೆಡೆ ರಂಜಾನ್ ಹಬ್ಬವನ್ನು ಬಾರಿ ಸಡಗರದಿಂದ ಆಚರಿಸಲಾಯಿತು.