ಸಮೃದ್ಧ ನಾಡು ನಿರ್ಮಾಣಕ್ಕೆ ಬದ್ಧರಾಗೋಣ

KannadaprabhaNewsNetwork | Published : Nov 2, 2023 1:00 AM

ಸಾರಾಂಶ

ನಾಡಿನ ನೆಲ, ಜಲ, ಸಂಸ್ಕೃತಿಯ ವೈಭವವನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ರಾಜ್ಯ ಸರ್ಕಾರ ಬದ್ಧತೆ ಹೊಂದಿದೆ. ಸಮೃದ್ಧ, ಸ್ವಾಭಿಮಾನಿ ಕನ್ನಡ ನಾಡು ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ೬೮ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಹಾವೇರಿ ಜಿಲ್ಲೆ ಕೊಡುಗೆ ಅಪಾರ । ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ

ಕನ್ನಡಪ್ರಭ ವಾರ್ತೆ ಹಾವೇರಿ

ನಾಡಿನ ನೆಲ, ಜಲ, ಸಂಸ್ಕೃತಿಯ ವೈಭವವನ್ನು ಮತ್ತಷ್ಟು ಉತ್ತುಂಗಕ್ಕೇರಿಸಲು ರಾಜ್ಯ ಸರ್ಕಾರ ಬದ್ಧತೆ ಹೊಂದಿದೆ. ಸಮೃದ್ಧ, ಸ್ವಾಭಿಮಾನಿ ಕನ್ನಡ ನಾಡು ನಿರ್ಮಾಣಕ್ಕೆ ಬದ್ಧರಾಗೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಹೇಳಿದರು.

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ೬೮ನೇ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ಕನ್ನಡ ಸಾಂಸ್ಕೃತಿಕ ಇತಿಹಾಸಕ್ಕೆ ಜಿಲ್ಲೆಯು ಮಹೋನ್ನತ ಕೊಡುಗೆ ನೀಡಿದ್ದು, ಕನ್ನಡ ನಾಡು ಹಾಗೂ ಭಾಷೆ ತನ್ನದೇ ಆದ ವಿಶಿಷ್ಟ ಇತಿಹಾಸ ಹೊಂದಿದೆ. ಮೈಸೂರು ರಾಜ್ಯ ಎಂಬ ನಾಮಕರಣ ಬದಲಾಯಿಸಿ ೧೯೭೩ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು ಇದೀಗ ೫೦ ವರ್ಷಗಳು ಪೂರ್ಣಗೊಂಡಿವೆ. ನಮ್ಮ ಸರ್ಕಾರ ಕರ್ನಾಟಕ-೫೦ರ ಸಂಭ್ರಮವನ್ನು ವರ್ಷವಿಡಿ ವಿಶೇಷವಾಗಿ ಆಚರಿಸಲು ಯೋಜಿಸಲಾಗಿದೆ ಎಂದರು.

ತ್ರಿಪದಿ ಕವಿ ಸರ್ವಜ್ಞ, ದಾಸಶ್ರೇಷ್ಠರಾದ ಕನಕದಾಸರು, ವಚನಕಾರರಾದ ಅಂಬಿಗರ ಚೌಡಯ್ಯ, ಶಿಶುನಾಳ ಷರೀಫರು, ಗಾನಯೋಗಿ ಪುಟ್ಟರಾಜ ಗವಾಯಿಗಳು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರಾದ ವಿ.ಕೃ. ಗೋಕಾಕ ಸೇರಿದಂತೆ ಇತರರು ಕನ್ನಡ ಭಾಷೆ, ಸಂಸ್ಕೃತಿಯ ಶ್ರೀಮಂತಿಕೆಗೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ಸಾಹಿತ್ಯ ಕ್ಷೇತ್ರದಿಂದ ಆಯ್ಕೆಯಾದ ಹಾವೇರಿಯ ಸತೀಶ ಕುಲಕರ್ಣಿ ಹಾಗೂ ಜಿಲ್ಲಾಡಳಿತ ಸನ್ಮಾನಿಸುತ್ತಿರುವ ಜಿಲ್ಲೆಯ ವಿವಿಧ ಕ್ಷೇತ್ರದ ೧೧ ಸಾಧಕರನ್ನು ಅಭಿನಂದಿಸಿದರು.

೨೦೨೩-೨೪ನೇ ಸಾಲಿನ ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ೪,೪೪,೧೦೮ ರೈತರಿಗೆ ೧೨೬.೮೯ ಕೋಟಿ ರು. ಮಧ್ಯಂತರ ಬೆಳೆ ವಿಮೆ ಪರಿಹಾರ ಮಂಜೂರಾಗಿದ್ದು, ಸದ್ಯದಲ್ಲೇ ಪರಿಹಾರ ವಿತರಣೆ ಮಾಡಲಾಗುವುದು. ಮಳೆಯ ಕೊರತೆಯಿಂದಾಗಿ ಜಿಲ್ಲೆಯಲ್ಲಿ ೨,೬೪,೪೭೭ ಹೆಕ್ಟೇರ್ ಬೆಳೆಹಾನಿಯಾಗಿದೆ. ೨೪೭.೫೮ ಕೋಟಿ ರು. ಬೆಳೆ ಪರಿಹಾರ ನೀಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಮಹಿಳೆಯರಿಗೆ ಉಚಿತ ಸಾರಿಗೆ ಪ್ರಯಾಣದ ಶಕ್ತಿಯೋಜನೆಯಡಿ ಜಿಲ್ಲೆಯಲ್ಲಿ ಈವರೆಗೆ ೨.೧೦ ಕೋಟಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸಿದ್ದಾರೆ. ಅನ್ನಭಾಗ್ಯ ಯೋಜನೆಯಡಿ ಜಿಲ್ಲೆಯಲ್ಲಿ ೪೬,೯೧೩ ಅಂತ್ಯೋದಯ ಹಾಗೂ ೩,೪೫,೬೭೦ ಬಿಪಿಎಲ್ ಪಡಿತರ ಕುಟುಂಬದ ಪ್ರತಿ ಸದಸ್ಯರಿಗೆ ತಲಾ ಐದು ಕೆಜಿಯಂತೆ ೪೯.೪೧ ಲಕ್ಷ ಕ್ವಿಂಟಲ್ ಅಕ್ಕಿ ವಿತರಿಸಲಾಗಿದೆ. ತುಂಗಾ ಮೇಲ್ದಂಡೆ ಯೋಜನೆಯಡಿ ಎರಡು ಏತ ನೀರಾವರಿ, 9 ಕೆರೆ ತುಂಬಿಸುವ ಯೋಜನೆಗಳಿಂದ ಜಿಲ್ಲೆಯ ೨೦೫ ಕೆರೆಗಳಿಗೆ ನೀರನ್ನು ತುಂಬಿಸಲಾಗುತ್ತಿದೆ ಎಂದರು.

ಬರ ನಿರ್ವಹಣೆಗೆ ಆದ್ಯತೆ:ಪ್ರಾಕೃತಿಕ ವಿಕೋಪ ನಮ್ಮನ್ನು ಕಾಡುತ್ತಿದೆ. ಜಿಲ್ಲೆಯಲ್ಲಿ ಮಳೆಯ ಕೊರತೆಯಿಂದ ಬರಗಾಲ ಎದುರಾಗಿದೆ. ಜಿಲ್ಲೆಯ ೮ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಲಾಗಿದೆ. ಬರ ಪರಿಸ್ಥಿತಿ ನಿಭಾಯಿಸಲು ಜಿಲ್ಲಾಡಳಿತ ಎಲ್ಲ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಖಾಸಗಿ ಕೊಳವೆಬಾವಿ ಗುರುತಿಸಲಾಗಿದೆ. ಜಾನುವಾರುಗಳಿಗೆ ಮೇವು, ಜನರಿಗೆ ಉದ್ಯೋಗ ನೀಡುವ ನಿಟ್ಟಿನಲ್ಲಿ ಈಗಾಗಲೇ ತಾಲೂಕಾವಾರು ಸಿದ್ಧತೆ ಕೈಗೊಂಡಿದೆ. ಬೆಳೆಹಾನಿ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಪರಿಹಾರದ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಹೇಳಿದರು.

ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿ, ಜಿಲ್ಲಾಧಿಕಾರಿ ರಘುನಂದನ್ ಮೂರ್ತಿ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶಿವಕುಮಾರ ಗುಣಾರೆ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ನಗರಸಭೆ ಸದಸ್ಯ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ ಇತರರು ಇದ್ದರು.

ಸಮೂಹ ಗಾಯನ:

ಕರ್ನಾಟಕ ೫೦ರ ಸಂಭ್ರಮದ ಅಂಗವಾಗಿ ನಾಡಿನ ಪ್ರಖ್ಯಾತ ಕವಿಗಳು ರಚಿತ ಐದು ಕನ್ನಡ ಸಂಸ್ಕೃತಿ, ನುಡಿ-ನಾಡಿನ ಬಣ್ಣನೆಯ ಐದು ಗೀತೆಗಳನ್ನು ಸಂಗೀತ ತಂಡಗಳೊಂದಿಗೆ ೫೦ ವಿದ್ಯಾರ್ಥಿಗಳು ಹಾಡಿದರು. ಇದೇ ಸಂದರ್ಭದಲ್ಲಿ ಕನ್ನಡ ಗೀತೆಗಳಿಗೆ ಆಕರ್ಷಕ ನೃತ್ಯವನ್ನು ವಿದ್ಯಾರ್ಥಿಗಳು ನಡೆಸಿಕೊಟ್ಟರು.

ಶಿಸ್ತುಬದ್ಧ ಪಥಸಂಚಲನ:

ಸಶಸ್ತ್ರ ಮೀಸಲು ಪಡೆ, ಅರಣ್ಯ ರಕ್ಷಕ ಪಡೆ, ಗೃಹ ರಕ್ಷಕದಳ, ಅಬಕಾರಿ ಇಲಾಖೆ ಪಡೆ, ನಾಗರೀಕರ ರಕ್ಷಣಾ ಪಡೆ, ಎನ್.ಸಿ.ಸಿ ತಂಡ, ಸ್ಕೌಟ್ಸ್ ಮತ್ತು ಗೈಡ್ಸ್ ತಂಡ ಒಳಗೊಂಡಂತೆ ೧೪ ತಂಡಗಳಿಂದ ಶಿಸ್ತುಬದ್ಧ ಪಥಸಂಚಲನ ಜರಗಿತು. ಪಾರಂಪರಿಕ ಸೊಬಗಿನ ಬಿಳಿ ಕಚ್ಚೆಪಂಚೆ, ಬಿಳಿ ಜುಬ್ಬಾ ಧರಿಸಿದ ಅಧಿಕಾರಿಗಳು ಕನ್ನಡ ನಾಡ ಹಬ್ಬದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯಿತು.೧೧ ಸಾಧಕರು, ೫೫ ಚಾಲಕರಿಗೆ ಸನ್ಮಾನ:

ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹಾವೇರಿ ವಿಭಾಗದಲ್ಲಿ ಅಪಘಾತ ರಹಿತವಾಗಿ ಚಾಲನೆ ಮಾಡಿದ ೫೫ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜಿಲ್ಲೆಯ ೧೧ ಮಹನೀಯರನ್ನು ಜಿಲ್ಲಾಡಳಿತದಿಂದ ಸನ್ಮಾನಿಸಲಾಯಿತು.೧೧ ಸಾಧಕರು: ಸಾಹಿತ್ಯ ಕ್ಷೇತ್ರದಿಂದ ರಾಣಿಬೆನ್ನೂರಿನ ಪ್ರೊ. ಎನ್.ಕೆ. ರಾಮಚಂದ್ರಪ್ಪ, ಸಮಾಜ ಸೇವಾ ಕ್ಷೇತ್ರದಲ್ಲಿ ಬ್ಯಾಡಗಿ ಜೈತುನಬಿ ಸೌದಾಗರ ಹಾಗೂ ಹಾವೇರಿಯ ಅಬ್ದುಲ್‌ಖಾದರ ಧಾರವಾಡ, ಜಾನಪದ ಕಲಾ ವಿಭಾಗದಲ್ಲಿ ಹಾವೇರಿ ತಾಲೂಕು ನಾಗನೂರಿನ ಪುರವಂತಿಕೆ ಸಂಗಮೇಶ ಪರಿಶೆಟ್ಟಿ, ಸಂಗೀತ ಕ್ಷೇತ್ರದಲ್ಲಿ ಶಿಗ್ಗಾಂವಿ ತಾಲೂಕು ತಡಸದ ಗಾಯತ್ರಿ ಪತ್ತಾರ, ವಾದ್ಯ ವಿಭಾಗದಲ್ಲಿ ಹಾನಗಲ್ಲ ತಾಲೂಕು ಬಾಳಂಬೀಡ ಗ್ರಾಮದ ಬಸವರಾಜ ಕೋಳೂರ, ರಂಗಭೂಮಿ ಕ್ಷೇತ್ರದಿಂದ ರಾಣಿಬೆನ್ನೂರು ತಾಲೂಕಿನ ಬೆನಕೊಂಡದ ರೇವಣಪ್ಪ ಮೆಗಳಮನಿ, ನೃತ್ಯ ವಿಭಾಗದಲ್ಲಿ ಶಿಗಾಂವಿಯ ಮಲ್ಲಿಕಾರ್ಜುನ ನಗರದ ಶರಣು ಬಡ್ಡಿ, ಚಿತ್ರಕಲಾ ವಿಭಾಗದಲ್ಲಿ ಗುಡಿಸಲಕೊಪ್ಪದ ಪರಮೇಶ ಬಂಡಿ, ಕರಕುಶಲ ಕ್ಷೇತ್ರದಲ್ಲಿ ಹಾವೇರಿಯ ಅಲ್‌ಹಾಜ್ ಉಸ್ಮಾನ್‌ಸಾಹೇಬ ಪಠವೇಗಾರ ಹಾಗೂ ಸಂಘ-ಸಂಸ್ಥೆ ವಿಭಾಗದಲ್ಲಿ ರಾಣೆಬೆನ್ನೂರಿನ ಅಂಧರ ಜೀವ ಬೆಳಕು ಸಂಸ್ಥೆಗೆ ೨೦೨೩ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಲಾಯಿತು.

Share this article