ಕನ್ನಡಪ್ರಭ ವಾರ್ತೆ ಮೂಲ್ಕಿ ಕಟೀಲು ಸಮೀಪದ ಕೊಂಡೆಮೂಲ ನಿವಾಸಿ ರತ್ನ (56) ಎಂಬುವರನ್ನು ಅವರ ಮಗ ರವಿರಾಜ್ ಶೆಟ್ಟಿ (33) ಎಂಬಾತ ಅ. 26 ರಾತ್ರಿ ಕೊಂದ ಪ್ರಕರಣದ ತನಿಖೆಯನ್ನು ಬಜಪೆ ಪೊಲೀಸರು ನಡೆಸುತ್ತಿದ್ದು ಆರೋಪಿಯು ಮಾದಕ ವ್ಯಸನಿಯಾಗಿದ್ದು ತಾಯಿ ಮೇಲೆಯೇ ಅತ್ಯಾಚಾರ ನಡೆಸಿದ್ದು ಬೆಳಕಿಗೆ ಬಂದಿದೆ. ಬಜಪೆ ಪೊಲೀಸರು ಆರೋಪಿಯನ್ನು ಸೋಮವಾರ ಬಂಧಿಸಿದ್ದು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕಟೀಲು ಸಮೀಪದ ಕೊಂಡೆಮೂಲ ನಿವಾಸಿ ರತ್ನ ಎಂಬವನ ಅವರ ಮಗ ರವಿರಾಜ್ ಶೆಟ್ಟಿ ಮಾದಕ ವ್ಯಸನಯಾಗಿದ್ದ. ಅ. 26 ರಾತ್ರಿ ತಾಯಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ. ಆಕೆ ಪ್ರತಿರೋಧ ತೋರಿದಾಗ, ಮೂಗು ಒತ್ತಿ ಹಿಡಿದು ಬಾಯಿಗೆ ಟೊಮೆಟೊ ಹಣ್ಣುಗಳನ್ನು ತುರುಕಿಸಿ ಉಸಿರು ಕಟ್ಟಿಸಿ ಕೊಂದಿದ್ದಾನೆ. ಬಳಿಕ ಅತ್ಯಾಚಾರ ಎಸಗಿದ್ದಾಗಿ ವಿಚಾರಣೆ ವೇಳೆ ಹೇಳಿಕೊಂಡಿದ್ದಾನೆ. ಮೃತದೇಹವನ್ನು ಸ್ಥಳಾಂತರಿಸಲು ಸಾಧ್ಯವಾಗದೆ, ದುಷ್ಕೃತ್ಯದ ಬಳಿಕ ಮನೆಗೆ ಬೀಗ ಹಾಕಿ ಕಿನ್ನಿಗೋಳಿಯ ವಸತಿಗೃಹದಲ್ಲಿ ಉಳಿದುಕೊಂಡಿದ್ದ. ಅಕ್ಕಪಕ್ಕದ ಮನೆಯವರಿಗೆ ಮನೆಯೊಳಗೆ ಸಾವು ಸಂಭವಿಸಿದ್ದು ತಡವಾಗಿ ತಿಳಿದಿದ್ದು, ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾಯಿಯನ್ನು ಕೊಂದಿರುವುದು ತಾನೇ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ರತ್ನ ಅವರ ಪತಿ ದಯಾನಂದ ಶೆಟ್ಟಿ ಅವರು 7 ವರ್ಷದ ಹಿಂದೆ ಮೃತಪಟ್ಟಿದ್ದು ಬಳಿಕ ತಾಯಿ, ಮಗ ಇಬ್ಬರೇ ಕೊಂಡೆಮೂಲದ ಮನೆಯಲ್ಲಿ ವಾಸವಾಗಿದ್ದರು. ಆರೋಪಿ ಗಾಂಜಾ ವ್ಯಸನಿಯಾಗಿದ್ದ ಎನ್ನಲಾಗಿದ್ದು, ಗಾಂಜಾ ಅಮಲಿನಲ್ಲಿ ತಾಯಿಯ ಮೇಲೆ ಅತ್ಯಾಚಾರ ಎಸಗಿರಬಹುದೆಂದು ಶಂಕಿಸಲಾಗಿದೆ. ಮುಖಕ್ಕೆ ಬಟ್ಟೆ ಕಟ್ಟಿ, ಕೈಕಾಲುಗಳಿಗೆ ನೈಲಾನ್ ಹಗ್ಗದಿಂದ ಬಿಗಿದು, ಬಾಯಿಗೆ ಟೊಮೆಟೊ ತುರುಕಿ ಅತ್ಯಾಚಾರ ಎಸಗಿ ಕೊಂದಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ. ಡ್ರಗ್ಸ್, ಗಾಂಜಾ ಸೇವನೆ ಹಾಗೂ ಅತ್ಯಾಚಾರ ಎಸಗಿರುವ ಬಗ್ಗೆ ಆರೋಪಿ ರವಿರಾಜ್ ಶೆಟ್ಟಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ವೈದ್ಯಕೀಯ ವರದಿ ಬಳಿಕವೇ ಅತ್ಯಾಚಾರವನ್ನು ದೃಢಪಡಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಜಪೆ ಠಾಣಾದಿಕಾರಿ ಸಂದೀಪ್ ಮತ್ತು ಅವರ ತಂಡ ಪ್ರಕರಣದ ತನಿಖೆ ಮುಂದುವರಿಸಿದೆ.