ಶಿಗ್ಗಾಂವಿ: ಇಂದಿನ ದಿನಗಳಲ್ಲಿ ಜಾತಿ, ಮತ, ಧರ್ಮ ಹಾಗೂ ಕೋಮುವಾದದಿಂದ ಸಮಾಜ ಕಲುಷಿತಗೊಳ್ಳುತ್ತಿದೆ. ಶಿಕ್ಷಕರು ಪ್ರಜಾಪ್ರಭುತ್ವದ ಆಶಯಗಳಿಗೆ ತಕ್ಕಂತೆ ಯುವ ಪೀಳಿಗೆಗೆ ಶಿಕ್ಷಣದ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಇದರಿಂದ ಉತ್ತಮ ಸಮಾಜ ಹಾಗೂ ಬಲಿಷ್ಠ ರಾಷ್ಟ್ರ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಶಾಸಕ ಯಾಸೀರ್ಅಹ್ಮದ ಖಾನ್ ಪಠಾಣ ಹೇಳಿದರು.
ಶಾಸಕನಾಗಿ ಮೊದಲ ಆದ್ಯತೆಯನ್ನು ಶಿಕ್ಷಣಕ್ಕೆ ನೀಡಿದ್ದು, ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಅನುಕೂಲ-ಅನಾನುಕೂಲಗಳನ್ನು ಪರಿಶೀಲಿಸಿದ್ದೇನೆ. ತಾಲೂಕಿನ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸಿ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಶಿಗ್ಗಾಂವಿ ತಾಲೂಕನ್ನು ರಾಜ್ಯದಲ್ಲೇ ಮಾದರಿ ಕ್ಷೇತ್ರವನ್ನಾಗಿ ಮಾಡಬೇಕು ಎಂಬುದು ನನ್ನ ಕನಸಾಗಿತ್ತು. ಆದರೆ ಈ ಕನಸು ಇಷ್ಟು ಬೇಗ ನನಸಾಗುತ್ತದೆ ಎಂದುಕೊಂಡಿರಲಿಲ್ಲ ಎಂದರು.
ಹಾವೇರಿ ಜಿಲ್ಲೆಯಲ್ಲಿ ನಡೆದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಿಗ್ಗಾಂವಿ ತಾಲೂಕು ಪ್ರಥಮ ಹಾಗೂ ಸವಣೂರು ತಾಲೂಕು ದ್ವಿತೀಯ ಸ್ಥಾನ ಪಡೆದಿರುವುದು ತಾಲೂಕಿನ ಶಿಕ್ಷಕರ ಪರಿಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ ಎಂದರು.ಶಿಕ್ಷಕರ ಬೇಡಿಕೆಯಂತೆ ಶಿಗ್ಗಾಂವಿ ಹಾಗೂ ಸವಣೂರು ತಾಲೂಕಿನಲ್ಲಿ ಗುರುಭವನ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಲ್ಲಿಕಾರ್ಜುನ ಅಂಬಿಗೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸವಣೂರು ತಾಲೂಕಿನ ಚಳ್ಯಾಳ ಗ್ರಾಮದ ಶಿಕ್ಷಕಿ ರೂಪಾ ಸಜ್ಜನ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ತಾಲೂಕಿನ ನಿವೃತ್ತ ಹಾಗೂ ಪ್ರಶಸ್ತಿ ಪುರಸ್ಕೃತ ಶಿಕ್ಷಕರನ್ನು ಸನ್ಮಾನಿಸಲಾಯಿತು.
ಇದಕ್ಕೂ ಪೂರ್ವದಲ್ಲಿ ಮಾಜಿ ಶಾಸಕ ಹಾಗೂ ಹೆಸ್ಕಾಂ ಅಧ್ಯಕ್ಷ ಎಸ್.ಎ. ಖಾದ್ರಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.