ಲಕ್ಷ್ಮೇಶ್ವರ: ದೇಶದ ಪುರಾತನ ಸಂಸ್ಕೃತಿ, ಸಂಪ್ರದಾಯ, ಕಲೆಗಳನ್ನು ಉಳಿಸಿ ಮುಂದಿನ ಪೀಳಿಗೆಗೆ ಹಂಚುವ ಕಾರ್ಯವನ್ನು ಮಾಡಬೇಕು ಎಂದು ಶಾಸಕ ಡಾ. ಚಂದ್ರು ಲಮಾಣಿ ತಿಳಿಸಿದರು.
ಜನಪದ ಕಲೆ ಸಂಸ್ಕೃತಿಗಳು ಅವನತಿಯ ಅಂಚಿನಲ್ಲಿವೆ. ಡೊಳ್ಳಿನ ಪದಗಳು, ಹಂತಿಯ ಪದಗಳು, ತೊಗಲು ಗೊಂಬೆಯಾಟ, ದೊಡ್ಡಾಟಗಳು, ಪೌರಾಣಿಕ ಕತೆಗಳ ನಾಟಕಗಳು ಸೇರಿದಂತೆ ವಿವಿಧ ಕಲೆಗಳು, ಸಂಸ್ಕೃತಿ ನಮ್ಮಿಂದ ಕಣ್ಮರೆಯಾಗುತ್ತಿವೆ. ಇಂತಹ ಅಮೂಲ್ಯ ಕಲೆಯನ್ನು ಉಳಿಸಿ ಬೆಳೆಸಿ ಅವುಗಳನ್ನು ನಮ್ಮ ಮುಂದಿನ ತಲೆಮಾರಿಗೆ ಪರಿಚಯಿಸುವುದು ಅಗತ್ಯವಾಗಿದೆ ಎಂದರು.
ನಮ್ಮ ಹಿರಿಯರು ತಮ್ಮ ಮಕ್ಕಳಿಗೆ ನಮ್ಮ ಸಂಸ್ಕೃತಿ ಕಲಿಸಿಕೊಡುವ ಕಾರ್ಯ ಮಾಡುತ್ತಿದ್ದರು. ಆದರೆ ಇಂದು ಆಧುನಿಕತೆಯ ಹೊಡೆತಕ್ಕೆ ಸಿಲುಕಿ ನಮ್ಮ ಸಂಸ್ಕೃತಿ ಸಂಪ್ರದಾಯ ನಶಿಸಿ ಹೋಗುತ್ತಿದೆ. ಇಂತಹ ಜಾತ್ರಾ ಮಹೋತ್ಸವಗಳಲ್ಲಿ ಕಲೆಗಳ ಪ್ರದರ್ಶನ ಏರ್ಪಡಿಸುವ ಮೂಲಕ ಪುರಾತನ ಕಲೆಗಳನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮಾಡುತ್ತಿರುವುದು ಶ್ಲಾಘನೀಯ ಎಂದರು.ಜಿಪಂ ಮಾಜಿ ಸದಸ್ಯ ಎಂ.ಎಸ್. ದೊಡ್ಡಗೌಡರ ಮಾತನಾಡಿ, ಜಾನಪದ ಕಲೆಗಳು ಪ್ರಾಚೀನ ಪರಂಪರೆಯ ಕೊಂಡಿಗಳಾಗಿವೆ. ಅವುಗಳಿಗೆ ಪ್ರೋತ್ಸಾಹ ನೀಡುವ ಕಾರ್ಯ ಮಾಡುತ್ತಿರುವುದು ಮೆಚ್ಚುವ ಸಂಗತಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ನಮ್ಮ ಜನಪದ ಕಲೆಗಳಿಗೆ ಜೀವ ತುಂಬುವ ಕಾರ್ಯ ಮಾಡುತ್ತಿದೆ. ಜನಪದ ಕಲೆಯನ್ನು ಮಕ್ಕಳಿಗೆ ಕಲಿಸುವ ಮೂಲಕ ಪುರಾತನ ಸಂಸ್ಕೃತಿ ಕಾಪಾಡುವ ಕಾರ್ಯ ಮಾಡಬೇಕು ಎಂದರು. ಗ್ರಾಪಂ ಅಧ್ಯಕ್ಷ ಮಂಜುನಾಥ ಚಲವಾದಿ ಹಾಗೂ ಜಾನಪದ ಕಲಾವಿದ ಸಂಕ್ರಣ್ಣ ಸಂಕಣ್ಣವರ ಮಾತನಾಡಿದರು. ಸಭೆಯಲ್ಲಿ ಉಪಾಧ್ಯಕ್ಷ ಮಹಾಂತಗೌಡ ಪಾಟೀಲ, ರಮೇಶ ದನದಮನಿ, ಬಸವರಾಜ ಸಂಶಿ, ಶಂಭುಲಿಂಗಪ್ಪ ಸೊರಟೂರ, ಗಂಗಾಧರ ಮೆಣಸಿನಕಾಯಿ, ಕರಿನಿಂಗಣ್ಣವರ, ಬಸವರಾಜ ದನದಮನಿ ಇದ್ದರು.ಸಾಂಸ್ಕೃತಿಕ ಸೌರಭ ಕಾರ್ಯಕ್ರಮದಲ್ಲಿ ಆಕಾಶವಾಣಿ ಕಲಾವಿದೆ ಸಾವಿತ್ರಿ ಲಮಾಣಿ ಅವರು ಸುಗಮ ಸಂಗೀತದಲ್ಲಿ ಬಸವಣ್ಣನವರ ವಚನ ಹಾಗೂ ಸಂತ ಶಿಸುನಾಳ ಶರೀಫರ ತತ್ವಪದ ಹಾಡಿ ಮನರಂಜಿಸಿದರು. ರಾಚಯ್ಯ ಮುಧೋಳ ಅವರ ಜೋಗತಿ ನೃತ್ಯವು ನೆರೆದಿದ್ದವರಲ್ಲಿ ರೋಮಾಂಚನ ಉಂಟು ಮಾಡಿತು.
ವಿರುಪಾಕ್ಷಪ್ಪ ಕ್ಷತ್ರೀಯ ಅವರು ನಡೆಸಿಕೊಟ್ಟ ತೊಗಲು ಗೊಂಬೆಯಾಟ, ಅಶೋಕ ಸುತಾರ ಅವರ ದೊಡ್ಡಾಟವು ಗಮನ ಸೆಳೆಯಿತು. ಸಮೂಹ ನೃತ್ಯ, ಗೀಗಿ ಪದ, ಲಾವಣಿ ಪದ, ಡೊಳ್ಳಿನ ಪದಗಳನ್ನು ಹಾಡುವ ಮೂಲಕ ಸಂಸ್ಕೃತಿಯ ಪರಿಚಯಿಸುವ ಕಾರ್ಯ ಮಾಡಿದರು. ಸಮಾರಂಭದಲ್ಲಿ ೧೪ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು.ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜಕುಮಾರ ಸಪಡ್ಲ, ನವೀನ ಪತ್ತಾಠ ಇದ್ದರು. ಬಸವರಾಜ ಈರನವರ, ಕಾರ್ಯಕ್ರಮ ನಿರ್ವಹಿಸಿದರು.