ರಟ್ಟೀಹಳ್ಳಿ: ರಟ್ಟೀಹಳ್ಳಿ- ಹಿರೇಕೆರೂರು ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಪರೇಷನ್ ಸಿಂದೂರ ಬೆಂಬಲಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಿರಂಗಾ ಯಾತ್ರೆ ಹಾಗೂ ಸೈನಿಕರಿಗೆ ಒಳಿತಾಗಲಿ ಎಂದು ವೀರಭದ್ರೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಕಾಂಗ್ರೆಸ್ ಆಫೀಸ್ನಿಂದ ಪ್ರಾರಂಭವಾದ ತಿರಂಗಾ ಯಾತ್ರೆ ಹಳೇ ಬಸ್ ನಿಲ್ದಾಣದ ಮೂಲಕ, ಸಂಗೊಳ್ಳಿ ರಾಯಣ್ಣ ವೃತ್ತ, ಮಹಾಲಕ್ಷ್ಮೀ ವೃತ್ತ, ಭಗತ್ಸಿಂಗ್ ಸರ್ಕಲ್, ಶಿವಾಜಿ ಸರ್ಕಲ್ ಮೂಲಕ ವೀರಭದ್ರೇಶ್ವರ ದೇವಸ್ಥಾನದವರೆಗೆ ತಿರಂಗಾ ಯಾತ್ರೆ ನಡೆಯಿತು.ನಂತರ ಮಾತನಾಡಿದ ಶಾಸಕ ಯು.ಬಿ. ಬಣಕಾರ ಅವರು, ಪಹಲ್ಗಾಂನಲ್ಲಿ ನಡೆದ 26 ಅಮಾಯಕ ಪ್ರವಾಸಿಗರ ಹತ್ಯೆಗೆ ಪ್ರತೀಕಾರವಾಗಿ ಉಗ್ರಗಾಮಿಗಳ ನಿರ್ಮೂಲನೆಗೆ ಕೇಂದ್ರ ಸರ್ಕಾರ ತೆಗೆದುಕೊಂಡ ಕ್ರಮವನ್ನು ಎಲ್ಲ ರಾಜ್ಯ ಸರ್ಕಾರಗಳು ಬೆಂಬಲ ಸೂಚಿಸಿದ್ದು, ಅದೇ ರೀತಿ ರಾಜ್ಯ ಸರ್ಕಾರ ಬೆಂಬಲ ಸೂಚಿಸಿ ಹಾಗೂ ಸೈನಿಕರ ಆತ್ಮಸ್ಥೈರ್ಯ ಹೆಚ್ಚಿಸುವ ನಿಟ್ಟಿನಲ್ಲಿ ವಿವಿಧ ಕಡೆ ಆಪರೇಷನ್ ಸಿಂದೂರ ಬೆಂಬಲಿಸಿ ತಿರಂಗಾ ಯಾತ್ರೆ ಕೈಗೊಂಡಿದ್ದು, ಅತ್ಯಂತ ಸೂಕ್ತ ನಿರ್ಧಾರವಾಗಿದೆ. ದೇಶದ ವಿಷಯ ಬಂದಾಗ ಪಕ್ಷಾತೀತ, ಜಾತ್ಯತೀತ ಹಾಗೂ ಧರ್ಮಾತೀತವಾಗಿ ಕೇಂದ್ರ ಸರ್ಕಾರದ ಬೆಂಬಲಕ್ಕೆ ನಿಂತಿರುವುದು ನಮ್ಮೆಲ್ಲರಿಗೂ ಹುಮ್ಮಸ್ಸು ನೀಡಿದೆ ಎಂದರು.ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಡಿ. ಬಸನಗೌಡ್ರ ಮಾತನಾಡಿ, ಜಮ್ಮು ಕಾಶ್ಮೀರದ ಪಹಲ್ಗಾಂನಲ್ಲಿ ನಡೆದ ಅಮಾಯಕ 26 ಅಮಾಯಕ ಪ್ರವಾಸಿಗರನ್ನು ಹತ್ಯೆ ಮಾಡಿ ನಮ್ಮ ಹೆಣ್ಣುಮಕ್ಕಳ ಸಿಂದೂರ ಕಸಿದ ಉಗ್ರಗಾಮಿಗಳ ನಿರ್ಮೂಲನೆಗೆ ಭಾರತ ಸರ್ಕಾರ ಆಪರೇಶನ್ ಸಿಂದೂರದ ಮೂಲಕ ಉಗ್ರಗಾಮಿಗಳ ಹುಟ್ಟಡಗಿಸುವ ನಿರ್ಧಾರಕ್ಕೆ ಕಾಂಗ್ರೆಸ್ ಸರ್ಕಾರ ಸಂಪೂರ್ಣ ಬೆಂಬಲಿಸಿ ದೇಶಾಭಿಮಾನ ಮೆರೆದಿದೆ ಎಂದರು.ಹಿರೇಕೆರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಸಾಹಿತಿ ನಿಂಗಪ್ಪ ಚಳಗೇರಿ, ಕೆಎಂಎಫ್ ನಿರ್ದೇಶಕ ಎ.ಕೆ. ಪಾಟೀಲ್, ವಸಂತ ದ್ಯಾವಕ್ಕಳವರ, ರಮೇಶ ಭೀಮಪ್ಪನವರ, ಕಿರಣಕುಮಾರ ವಾಲ್ಮೀಕಿ, ನಾಗನಗೌಡ ಕೋಣ್ತಿ, ಮಂಜು ಮಾಸೂರ, ಮಹೇಶ ಗುಬ್ಬಿ, ಬೀರೇಶ ಕರಡೆಣ್ಣನವರ, ನಾರಾಯಣಪ್ಪ ಗೌರಕ್ಕನವರ, ಮಂಜು ಅಸ್ವಾಲಿ, ಎಂ.ಪಿ. ಪ್ರಕಾಶ, ನಾಗರಾಜ ಸುಣಗಾರ, ಮಕಬುಲ್ ಸಾಬ್ ಹಳಿಯಾಳ ಹಾಗೂ ಮುಂತಾದವರು ಇದ್ದರು.ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
ಹಾವೇರಿ: ದೇವಗಿರಿ ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್ಸೆಟಿಯಲ್ಲಿ ನಿರುದ್ಯೋಗಿ ಯುವಕರಿಗೆ ಮೇ 28ರಿಂದ 30 ದಿನಗಳ ಉಚಿತ ಮೊಬೈಲ್ ರಿಪೇರಿ ಮತ್ತು ಸರ್ವಿಸ್ ತರಬೇತಿ ಆಯೋಜಿಸಲಾಗಿದೆ. ಜಿಲ್ಲೆಯ 18ರಿಂದ 45 ವರ್ಷದೊಳಗಿನ ಅಭ್ಯರ್ಥಿಗಳು ಈ ತರಬೇತಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ನಿರ್ದೇಶಕರು, ಬ್ಯಾಂಕ್ ಆಫ್ ಬರೋಡಾ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ವಿಬ್ಸೆಟಿ, ಡಿಸಿ ಆಫೀಸ್ ಕಟ್ಟಡದ ಹಿಂಭಾಗ, ದೇವಗಿರಿ- ಹಾವೇರಿ ಮೊ. 8660219375 ಹಾಗೂ 9611645907 ಸಂಪರ್ಕಿಸಲು ಕೋರಲಾಗಿದೆ.