ರಾಜ್ಯಮಟ್ಟದ ಸಂಸ್ಕೃತೋತ್ಸವದ ಸಮಾರೋಪ ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ ಶಿರಸಿವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವನೆ ಬೆಳೆದಾಗ ಓದುವ ರೂಢಿ ಹೆಚ್ಚುತ್ತದೆ. ಪ್ರತಿಯೊಬ್ಬರು ಒಂದು ಸ್ಪರ್ಧೆಯಲ್ಲಾದರೂ ಭಾಗವಹಿಸಬೇಕು ಎಂದು ಸ್ವರ್ಣವಲ್ಲೀಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ನುಡಿದರು.
ತಾಲೂಕಿನ ಸ್ಬರ್ಣವಲ್ಲೀ ಮಹಾಸಂಸ್ಥಾನದಲ್ಲಿ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಎರಡು ದಿನಗಳಿಂದ ನಡೆದ ರಾಜ್ಯಮಟ್ಟದ ಸಂಸ್ಕೃತೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನುಡಿದರು.ಓದುವ ವಿಷಯದಲ್ಲಿ ವಿದ್ಯಾರ್ಥಿಗಳ ಉತ್ಸಾಹ ವರ್ಧಿಸಲು ಈ ರೀತಿಯಾದ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ಪ್ರತಿಯೊಂದು ವಿದ್ಯಾರ್ಥಿಗಳು ಒಂದು ಸ್ಪರ್ಧೆಯಲ್ಲಿ ಆದರೂ ಭಾಗವಹಿಸುವ ಸಲುವಾಗಿ ಹೆಚ್ಚಿಗೆ ಸ್ಪರ್ಧೆ ಮಾಡಲಾಗುತ್ತದೆ. ಮುಂದಿನ ವರ್ಷಗಳಲ್ಲಿ ನಾನು ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ತೆಗೆದುಕೊಳ್ಳಬೇಕು ಎಂಬ ಮನಸ್ಸು ವಿದ್ಯಾರ್ಥಿಗಳಲ್ಲಿ ಈಗಲೇ ಬರಬೇಕು. ಈ ರೀತಿಯಾದ ಮನಸ್ಸು ಬಂದರೆ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಓದುವ ರೂಢಿ ಬಂದೇ ಬರುತ್ತದೆ. ಅವರಿಗೆ ಓದುವ ವಿಷಯದಲ್ಲಿ ಉತ್ತೇಜನ ನೀಡುವ ಸಲುವಾಗಿ ಸ್ಪರ್ಧೆಗಳನ್ನು ಪ್ರತಿವರ್ಷ ಆಯೋಜಿಸಲಾಗುತ್ತಿದೆ ಎಂದರು.
ಆನಂದಬೋಧೇಂದ್ರ ಸರಸ್ವತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಶ್ರೀ ಮಠದ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಸ್ವರ್ಣಗಂಗಾ ಎಂಬ ಪತ್ರಿಕೆಯನ್ನು ಶ್ರೀಗಳು ಬಿಡುಗಡೆಗೊಳಿಸಿದರು.
ಸಂಸ್ಕೃತ ಮತ್ತು ವೇದ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗುಂಡ್ಮಿಯ ವಿದ್ವಾನ್ ಗಣಪತಿ ಹೊಳ್ಳ ಅವರನ್ನು ಶ್ರೀಗಳು ಸಮ್ಮಾನಿಸಿ, ಗೌರವಿಸಿದರು. ರಾಜ್ಯದ ಬೇರೆ ಬೇರೆ ಪಾಠಶಾಲೆ, ಕಾಲೇಜು ಪ್ರೌಢಶಾಲೆಯ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿ ಪಾರಿತೋಷಕ ಪಡೆದರು.ವಿದ್ಯಾರ್ಥಿಗಳಿಗಾಗಿ ನಡೆದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಾಳುಗಳಿಗೆ ಶ್ರೀಗಳು ಆಶೀರ್ವಾದ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.
ಡಾ. ಸೂರ್ಯನಾರಾಯಣ ಭಟ್ ಹಿತ್ಲಳ್ಳಿ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಪರವಾಗಿ ಗೋಕರ್ಣ ವಿದ್ಯಾಲಯದ ವಿದ್ವಾನ್ ಮಂಜುನಾಥ ಭಟ್ ಸ್ಪರ್ಧೆಗೆ ನಿರ್ಣಾಯಕರಾಗಿ ಕಾರ್ಯನಿರ್ವಹಿಸಿದರು.ಪ್ರಾಚಾರ್ಯ ವಿದ್ವಾನ್ ಕೃಷ್ಣ ಜೋಶಿ, ವಿದ್ಯಾಸಂಸ್ಥೆಯ ಪದಾಧಿಕಾರಿಗಳಾದ ಎಂ.ಜಿ. ಹೆಗಡೆ, ಶಿವರಾಮ ಭಟ್ ಇದ್ದರು. ವಿದ್ವಾನ್ ಶಂಕರ ಭಟ್ ಉಂಚಳ್ಳಿ ಕಾರ್ಯಕ್ರಮ ನಿರ್ವಹಿಸಿದರು.