- ಬಿಐಇಟಿ ಪ್ಲೇಸ್ಮೆಂಟ್ ಸೆಮಿನಾರ್ ಹಾಲ್ನಲ್ಲಿ ರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ನಗರದ ಬಾಪೂಜಿ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ (ಬಿಐಇಟಿ)ದ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ವಿಭಾಗದಿಂದ ಸ್ಮಾರ್ಟ್ ಎಲೆಕ್ಟ್ರಿಕಲ್ಸ್ ಸಿಸ್ಟಮ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಉದಯೋನ್ಮುಖ ಸುಸ್ಥಿರ ತಂತ್ರಜ್ಞಾನಗಳು **(SEEST-2026)** ಕುರಿತ 2 ದಿನಗಳ ಕಾಲ ಆಯೋಜಿಸಿದ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಶುಕ್ರವಾರ ಕಾಲೇಜಿನ ಪ್ಲೇಸ್ಮೆಂಟ್ ಸೆಮಿನಾರ್ ಹಾಲ್ನಲ್ಲಿ ನಡೆಯಿತು.ಪುಣೆ ಎಐಟಿಯ ಪ್ರೊ-ಚಾನ್ಸಲರ್ ಡಾ. ವಿ.ರಾಮಚಂದ್ರ ವಿ. ಪೂಜಾರಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ದಿವಂಗತ ಶಾಮನೂರು ಶಿವಶಂಕರಪ್ಪ ಅವರೊಂದಿಗಿದ್ದ ತಮ್ಮ ಒಡನಾಟ ಸ್ಮರಿಸಿದರು. ಬೌದ್ದಿಕವಾಗಿ ಚುರುಕಾದ, ಮಾನಸಿಕವಾಗಿ, ಜಾಗ್ರತವಾಗಿ, ಆಧ್ಯಾತ್ಮಿಕವಾಗಿ ಉನ್ನತ ಮತ್ತು ದೈಹಿಕವಾಗಿ ಸದೃಢ ಮಕ್ಕಳೇ ಸಮಾಜದ ಅಮೂಲ್ಯ ಸಂಪತ್ತು. ಉದ್ಯೋಗ ಭದ್ರತೆಗೆ ಶಿಕ್ಷಕರು ಎಐ ಸಜ್ಜಿತರಾಗಿ ಮತ್ತು ಜ್ಞಾನ ಸಂಪನ್ನರಾಗಬೇಕಾಗಿದೆ. ರಾಷ್ಟ್ರಪತಿಯಾಗಿದ್ದ ಡಾ.ಅಬ್ದುಲ್ ಕಲಾಂ ನಿರ್ದೇಶನದಂತೆ ತಮಿಳುನಾಡಿನ ಕರಾವಳಿ ಜನರಿಗೆ ಉಪ್ಪುನೀರು ಶುದ್ಧೀಕರಣ ಘಟಕ ಸ್ಥಾಪಿಸಿದ್ದನ್ನು ಈ ಸಂದರ್ಭ ಸ್ಮರಿಸಿದರು.
ವಿಭಾಗದ ಮುಖ್ಯಸ್ಥ ಡಾ. ಎಂ.ಎಸ್. ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ಮತ್ತು ವಿದೇಶಗಳ ಸಂಶೋಧಕರಿಂದ ಸಮ್ಮೇಳನಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಒಟ್ಟು 480 ಸಂಶೋಧನಾ ಪ್ರಬಂಧಗಳು ಸಲ್ಲಿಕೆಯಾಗಿವೆ. ಇವುಗಳಲ್ಲಿ 80 ಪ್ರಬಂದಗಳನ್ನು ಆಯ್ಕೆ ಮಾಡಲಾಗಿದೆ. ಈ ಸಮ್ಮೇಳನಕ್ಕೆ ನಾಸಿಕ್, ಮುಂಬೈನ ಎಂ.ಜಿ. ಅರಿಸೆಂಟ್ ಎಜುಕೇಷನಲ್ ಫೌಂಡೇಷನ್ ತಾಂತ್ರಿಕ ಪ್ರಾಯೋಜಕತ್ವ ನೀಡಿದೆ ಎಂದರು.
ಕಾಲೇಜಿನ ಪ್ರಾಚಾರ್ಯ ಡಾ. ಎಚ್.ಬಿ. ಅರವಿಂದ್ ಸಮ್ಮೇಳನಕ್ಕೆ ಶುಭ ಹಾರೈಸಿದರು. ಡಾ. ಎಚ್.ಎನ್.ಮಂಜುನಾಥ ಸ್ವಾಗತಿಸಿ, ಡಾ.ಕರಿಬಸವರಾಜು ವಂದಿಸಿದರು. ಸುಮಾರು 300 ಜನ ಸಂಶೋಧಕರು, ವಿದ್ಯಾರ್ಥಿಗಳು, ಉಪನ್ಯಾಸಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
-19ಕೆಡಿವಿಜಿ31: