ಹದಿಹರೆಯದವರು ಆತ್ಮ ಸ್ಥೈರ್ಯದಿಂದ ಪರಿಹಾರ ಕಂಡುಕೊಳ್ಳಲಿ: ಹಿರಿಯ ದಂತ ವೈದ್ಯ ಮಾರುತಿ

KannadaprabhaNewsNetwork | Published : Feb 29, 2024 2:05 AM

ಸಾರಾಂಶ

ವಯಸ್ಸಿಗನುಗುಣವಾಗಿ ಬಾಲಕಿಯರಲ್ಲಿ ಆಗುವ ಶಾರೀರಿಕ ಬದಲಾವಣೆ ಮಾಡಿಕೊಳ್ಳುವ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು.

ಯಲಬುರ್ಗಾ: ಹದಿಹರೆಯದಲ್ಲಾಗುವ ಒತ್ತಡ, ಸಮಸ್ಯೆಗಳನ್ನು ವಿದ್ಯಾರ್ಥಿಗಳು ಆತ್ಮಸ್ಥೈರ್ಯದಿಂದ ಎದುರಿಸುವ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಹಿರಿಯ ದಂತ ವೈದ್ಯ ಡಾ.ಮಾರುತಿ ಹೇಳಿದರು.ಪಟ್ಟಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯ ಅಧಿಕಾರಿಗಳ ಕಾರ್ಯಾಲಯ, ಸಾರ್ವಜನಿಕ ಆಸ್ಪತ್ರೆಗಳ ಸಹಯೋಗದಲ್ಲಿ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ಸ್ನೇಹ ಗುಂಪಿನ ಶಿಕ್ಷಕರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ವಯಸ್ಸಿಗನುಗುಣವಾಗಿ ಬಾಲಕಿಯರಲ್ಲಿ ಆಗುವ ಶಾರೀರಿಕ ಬದಲಾವಣೆ ಮಾಡಿಕೊಳ್ಳುವ ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು ಎಂದರು.ಯಾವುದೇ ಪರಿಸ್ಥಿತಿಯಲ್ಲೂ ಎಂತಹದೇ ಸಂದರ್ಭದಲ್ಲೂ ಧೈರ್ಯಗುಂದದೇ ಸಮಸ್ಯೆ ಎದುರಿಸಲು ಪ್ರಯತ್ನಿಸಬೇಕು. ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನ ಹಾಗೂ ಮನಸ್ಸು ಮಾಡಲೇಬಾರದು. ವಿದ್ಯಾರ್ಥಿನಿಯರು ಪೌಷ್ಟಿಕ ಆಹಾರ ಸೇವಿಸಬೇಕು. ಮಾನಸಿಕ ಒತ್ತಡ, ಆತ್ಮಾಭಿಮಾನ, ಆತ್ಮಗೌರವ, ತಾಳ್ಮೆ, ನಿರ್ಧಾರ ತೆಗೆದುಕೊಳ್ಳುವಂತಹ ಶಕ್ತಿ, ಶಾಲೆಯಲ್ಲಿನ ಅಭ್ಯಾಸದ ಒತ್ತಡ, ಶಾರೀರಿಕ ಒತ್ತಡ, ಗೆಳೆತನದಲ್ಲಿರುವಂತಹ ಒತ್ತಡ, ಸ್ವಯಂ ರಕ್ಷಣೆ ಹೀಗೆ ಅನೇಕ ವಿಷಯಗಳ ಕುರಿತು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು.ಮಕ್ಕಳ ತಜ್ಞೆ ಡಾ.ಮಿನು ಕೆ. ಮಾತನಾಡಿ, ಹದಿಹರೆಯದವರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಮುಜುಗರ ಪಡುತ್ತಾರೆ. ಇದರಿಂದ ಸಮಸ್ಯೆ ಉಲ್ಬಣ ಆಗುತ್ತದೆ. ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುವುದು ತುಂಬ ಮುಖ್ಯ ಎಂದರು.ವೈದ್ಯಧಿಕಾರಿ ಡಾ.ಶೇಖರ್ ಭಜಂತ್ರಿ ಮಾತನಾಡಿ, ಕಿಶೋರಿಯರು ಋತುಚಕ್ರದ ಸಮಯದಲ್ಲಿ ಮುಜುಗರಕ್ಕೆ ಒಳಗಾಗದೇ ಸ್ನೇಹ ಕ್ಲಿನಿಕ್‌ನಲ್ಲಿ ಸಿಗುವ ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸಾ ಸೇವೆಗಳನ್ನು ಪಡೆಯಬೇಕು. ಜೊತೆಗೆ ದೈಹಿಕ ಬೆಳವಣಿಗೆ ಬಗ್ಗೆ ಅರಿವು ಇರಬೇಕು ಎಂದು ಹೇಳಿದರು.ಸಹಾಯಕ ಆಡಳಿತ ಅಧಿಕಾರಿ ಚಂದ್ರಶೇಖರ್ ಅಣ್ಣಿಗೇರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಶರಣು ಉಪ್ಪಾರ ಮತ್ತಿತರರು ಇದ್ದರು.

Share this article