ಭಟ್ಕಳದಲ್ಲಿ ಕಾರ್ಪೆಂಟರ್ಸ್ ಕಾರ್ಮಿಕರ ಸಂಘ ಉದ್ಘಾಟನೆ
ಪಟ್ಟಣದ ಮುಗಳಿಕೋಣೆಯ ಶ್ರೀ ಗೋಪಾಲಕೃಷ್ಣ ಸಭಾಭವನದಲ್ಲಿ ತಾಲೂಕು ಕಾರ್ಪೆಂಟರ್ಸ್ ಕಾರ್ಮಿಕರ ಸಂಘದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ನೆರವೇರಿಸಿದರು.
ನಂತರ ಮಾತನಾಡಿದ ಅವರು, ಸಂಘಟನೆ ಬಲವಾಗಿರಬೇಕು, ಬೇರೆ ರಾಜ್ಯಗಳಿಂದ ಬರುವ ಕಾರ್ಮಿಕರಿಂದ ಸ್ಥಳೀಯರಿಗೆ ಅನ್ಯಾಯವಾಗದಂತೆ ದರ ನಿಗದಿ ಮತ್ತು ಉದ್ಯೋಗ ಹಂಚಿಕೆಯಲ್ಲಿ ಕ್ರಮವಹಿಸಬೇಕು. ಮಧ್ಯವರ್ತಿಗಳ ಅಣಕದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯವನ್ನು ನಿರ್ಮೂಲನೆ ಮಾಡಲು ಸಂಘಟನೆ ಗಟ್ಟಿಯಾಗಿ ನಿಲ್ಲಬೇಕು ಎಂದರು.ಒಂದೇ ಸಮುದಾಯಕ್ಕೆ ಸೀಮಿತವಾಗಿದ್ದ ಮರದ ವೃತ್ತಿಗೆ ಈಗ ಹಲವು ವರ್ಗಗಳ ಯುವಕರು ಸೇರುತ್ತಿರುವುದು ಉದ್ಯೋಗ ಕ್ಷೇತ್ರಕ್ಕೆ ಒಳ್ಳೆಯ ಬೆಳವಣಿಗೆಯಾಗಿದೆ. ಭಟ್ಕಳದ ಕಾರ್ಮಿಕರ ನೈಪುಣ್ಯ ಮತ್ತು ವಿನ್ಯಾಸ ಸಾಮರ್ಥ್ಯ ಉತ್ತಮವಾಗಿದೆ ಎಂದ ಅವರು ತಾಲೂಕಿನಲ್ಲಿ ಮರದ ಕೆಲಸಕ್ಕೆ ಸಂಬಂಧಿಸಿದ 4 ರಿಂದ 5 ಸಾವಿರ ಕ್ಕೂ ಹೆಚ್ಚು ಮಂದಿ ತೊಡಗಿಕೊಂಡಿರುವುದು ವಿಶೇಷ ಎಂದರು. ಮತದಾರರ ಪಟ್ಟಿಯಲ್ಲಿ 1,700 ಆಚಾರ್ಯರ ಹೆಸರುಗಳಿದ್ದರೂ ವೃತ್ತಿಯಲ್ಲಿ ತೊಡಗಿರುವವರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. ಕಾರ್ಮಿಕ ಸೌಲಭ್ಯಗಳನ್ನು ಸರ್ಕಾರ ಈಗ ಎಲ್ಲಾ ವರ್ಗದ ಕಾರ್ಮಿಕರಿಗೆ ವಿಸ್ತರಿಸುತ್ತಿದೆ. ಸಂಘಟನೆ ಸದಸ್ಯರ ಸಂಪೂರ್ಣ ಮಾಹಿತಿಯನ್ನು ಪ್ರತಿಮಾಸವೂ ಸಲ್ಲಿಸಿದಲ್ಲಿ ಸೌಲಭ್ಯ ತಲುಪುವಂತೆ ಕ್ರಮ ವಹಿಸುವುದಾಗಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಭಾಸ್ಕರ ಬಿ. ಆಚಾರ್ಯ ವಹಿಸಿದ್ದರು. ಜಾಲಿ ಪಟ್ಟಣ ಪಂಚಾಯಿತಿ ನಾಮನಿರ್ದೇಶನ ಸದಸ್ಯ ದಿನೇಶ್ ಆಚಾರ್ಯ, ಕಾರ್ಪೆಂಟರ್ಸ್ ಸಂಘದ ಗೌರವಾಧ್ಯಕ್ಷ ಗುಂಡು ಆಚಾರ್ಯ, ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಗಜಾನನ ನಾಗಪ್ಪಯ್ಯ ಆಚಾರ್ಯ ಸೇರಿದಂತೆ ಹಲವರಿದ್ದರು.