ಮಹನೀಯರ ಸಿದ್ಧಾಂತ ಅನುಷ್ಠಾನವಾಗಲಿ: ಸಚಿವ ಈಶ್ವರ ಖಂಡ್ರೆ

KannadaprabhaNewsNetwork | Published : Jan 9, 2024 2:00 AM

ಸಾರಾಂಶ

ಬಸವಕಲ್ಯಾಣದ ಪ್ರತಾಪೂರ ಗ್ರಾಮದಲ್ಲಿ ಭಾರತ ರತ್ನ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಮೂರ್ತಿ ಅನಾವರಣ ಹಾಗೂ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅರಣ್ಯ ಸಚಿವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಬುದ್ಧ, ಬಸವ, ಡಾ. ಅಂಬೇಡ್ಕರ್‌ ಜಯಂತಿ ಆಚರಣೆ ಮತ್ತು ಮೂರ್ತಿ ಕೂಡಿಸುವುದು ಮಾತ್ರ ನಮ್ಮ ಕೆಲಸವಲ್ಲ, ಅವರ ತತ್ವ ಸಿದ್ಧಾಂತವನ್ನು ಅನುಷ್ಠಾನಕ್ಕೆ ತರಬೇಕು. ಇದಕ್ಕಾಗಿ ಎಲ್ಲ ಶೋಷಿತರು ಒಗ್ಗಟಾಗಿ ಮುಂದಾಗಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಕಿವಿಮಾತು ಹೇಳಿದರು.

ತಾಲೂಕಿನ ಪ್ರತಾಪೂರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಭಾರತ ರತ್ನ ಡಾ. ಬಿ.ಆರ್‌ ಅಂಬೇಡ್ಕರ್‌ ಅವರ ಮೂರ್ತಿ ಅನಾವರಣ ಹಾಗೂ ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಾ. ಬಾಬಾ ಸಾಹೇಬರು ನಮ್ಮ ದೇಶಕ್ಕೆ ಸಂವಿಧಾನ ನೀಡಿದ್ದಾರೆ ಮತ್ತು ಈ ಮೂಲಕ ಸರ್ವರಿಗೂ ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಅವರನ್ನು ಒಂದು ಜಾತಿ ಧರ್ಮಕ್ಕೆ ಸೀಮಿತಗೊಳಿಸದೆ ಎಲ್ಲರೂ ಅರಾಧಿಸಬೇಕೆಂದರು.

ಶಾಸಕ ಶರಣು ಸಲಗರ ಮಾತನಾಡಿ, ಡಾ. ಬಿ.ಆರ್‌ ಅಂಬೇಡ್ಕರ್‌ ಅವರು ಶೋಷಿತರ ಧ್ವನಿಯಾಗಿದ್ದರು. ಅವರ ಹೆಸರಿನಲ್ಲಿ ಪ್ರತಾಪೂರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥಾಲಯ ನಿರ್ಮಿಸಿ ಇಲ್ಲಿಯ ಜನ ಉತ್ತಮ ಕಾರ್ಯ ಮಾಡಿದ್ದಾರೆ. ಅಂಬೇಡ್ಕರ್‌ಗೆ ಪುಸ್ತಕಗಳ ಮೇಲೆ ಬಹಳ ಪ್ರೀತಿ ಇತ್ತು. ಹೀಗಾಗಿ ಈ ಗ್ರಂಥಾಲಯದ ಸದುಪಯೋಗವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದರು.

ವಿಧಾನಪರಿಷತ್‌ ಮಾಜಿ ಸದಸ್ಯ ವಿಜಯಸಿಂಗ್‌ ಮಾತನಾಡಿ, ಸಂವಿಧಾನದಿಂದಾಗಿ ದೇಶದಲ್ಲಿ ಶೋಷಿತರಿಗೆ, ಬಡವರಿಗೆ, ನ್ಯಾಯ ದೊರಕಿದ್ದು ಈ ಸಂವಿಧಾನದಿಂದ ದೇಶದಲ್ಲಿ ಶಾಂತಿ ಸೌರ್ಹಾಧ್ಯತೆ ಉಳಿದಿದೆ ಎಂದರು.

ಶೇಖ ಸುಬಾನ್‌ ಅಲಿ ಚಿಂತಕರು, ಡಾ. ಜೈಶೇನ್‌ ಪ್ರಸಾದ, ಪಿಂಟು ಕಾಂಬಳೆ ಮುಂತಾದವರು ಮಾತನಾಡಿದರು.

ರಾಜ್ಯ ಪ್ರಶಸ್ತಿ ವಿಜೇತ ತಾತೇರಾವ್‌ ಕಾಂಬಳೆ, ಮಾಜಿ ಶಾಸಕ ಎಂಜಿ ಮೂಳೆ, ಮಾಲಾ.ಬಿ. ನಾರಾಯಣರಾವ್‌, ದಿಲೀಪ ಶಿಂಧೆ, ಸುರೇಶ ಕಾನೇಕರ ಇವರಿಗೆ ಪ್ರಬುದ್ಧ ಭಾರತ ರತ್ನ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಇದಲ್ಲದೇ ಶಿವಾನಂದ ಮೇತ್ರೆ, ಸಂಜೀವ ಕಾಳೇಕರ, ಅರ್ಜುನ ಕನಕ, ಮಾರುತಿ ಬೌದ್ಧೆ, ಶಾಂತಗೌಡ ಬಿರಾದಾರ, ಧನರಾಜ ತಾಳಂಪಳ್ಳಿ, ಪ್ರೇಮ ಸಾಗರ ದಾಂಡೇಕರ, ಪ್ರಕಾಶ ಮೂಲಭಾರತಿ, ಬಾಬು ಹೊನ್ನಾನಾಯಕ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು.

ಪೌರಾಡಳಿತ ಸಚಿವ ರಹೀಮ್‌ ಖಾನ್‌, ಮಾಜಿ ಸಚಿವ ರಾಜಶೇಖರ ಪಾಟೀಲ್‌, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಡಿ.ಜಿ ಸಾಗರ, ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಸಿದ್ಧರಾಮ ಶರಣರು, ಭಂತೆ ಸಂಘಾನಂದ, ರವಿಂದ್ರ ಗೂರುಜಿ, ನೀಲಕಂಠ ರಾಠೋಡ, ಮಿಲಿಂದ ಗುರೂಜಿ, ನಾಗೇಶ ಕಾಂಬಳೆ, ವಾಮನ ಮೈಸಲಗೆ, ದತ್ತಾತ್ರಿ ಸೂರ್ಯವಂಶಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಭೀಮ ಗೀತೆಗಳನ್ನು ಹಾಡಲಾಯಿತು.

Share this article