ಕಾರಟಗಿ: ಚುನಾವಣೆಯಲ್ಲಿ ಮತಗಳ್ಳತನ ನಿಂತು ದೋಷಮುಕ್ತವಾಗಿ ನಡೆಯಬೇಕು. ಆ ಮೂಲಕ ಜನರ ಭಾವನೆಗಳಿಗೆ ಆಸ್ಪದ ನೀಡಬೇಕು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಹೇಳಿದರು.
ಬಿಜೆಪಿಯವರ ಈ ಅನ್ಯಾಯದ ವಿರುದ್ಧ ಮತ್ತು ಪ್ರಜಾಪ್ರಭುತ್ವ ರಕ್ಷಣೆಗೆ, ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಹೋರಾಟ ನಡೆಸಲಿದೆ. ಮತಗಳ್ಳತನವನ್ನು ನಾವು ಸಹಿಸುವುದಿಲ್ಲ. ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಲು ಹೋರಾಟದ ಮಾರ್ಗ ಹಿಡಿಯುತ್ತೇವೆ. ನಮ್ಮ ರಾಷ್ಟ್ರೀಯ ನಾಯಕರಾದ ರಾಹುಲ್ ಗಾಂಧಿ ಮತಗಳ್ಳತನ ಬಯಲುಗೊಳಿಸಿದ್ದಾರೆ. ಅವರು ಬರೀ ಆರೋಪ ಮಾಡುತ್ತಿಲ್ಲ. ಸಾಕ್ಷ್ಯಾಧಾರಗಳನ್ನು ಜನರ ಮುಂದಿಟ್ಟಿದ್ದಾರೆ. ಇಷ್ಟೆಲ್ಲ ಸಾಕ್ಷ್ಯಗಳನ್ನು ನೀಡಿದರೂ ಚುನಾವಣಾ ಆಯೋಗ ಈ ಬಗ್ಗೆ ಒಂದೂ ಮಾತು ಆಡುತ್ತಿಲ್ಲ, ತನಿಖೆಯನ್ನೂ ಮಾಡುತ್ತಿಲ್ಲ ಎಂದು ದೂರಿದರು.
ಹುಸಿ ರಾಷ್ಟ್ರೀಯತೆ, ಧರ್ಮಾಂಧತೆ, ಮೂಲಭೂತವಾದ, ಕಾರ್ಪೊರೇಟ್ ಸ್ನೇಹಿಯಂತಹ ಜನವಿರೋಧಿ ನೀತಿ-ನಿಲುವುಗಳಿಂದ ಕೂಡಿರುವ ಬಿಜೆಪಿಗೆ ಚುನಾವಣೆಗಳಲ್ಲಿ ನೈಜ ಜನಮನ್ನಣೆ ಗಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ, ಚುನಾವಣಾ ಆಯೋಗವನ್ನೇ ದುರ್ಬಲಗೊಳಿಸಿ ದೇಶದಲ್ಲಿ ನಡೆಯುತ್ತಿರುವ ಚುನಾವಣೆಗಳಲ್ಲಿ ಮತಗಳ್ಳತನದಿಂದ ಗೆಲುವು ಸಾಧಿಸುತ್ತ ದೇಶದ ಜನತೆಯ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ ಎಂದರು.ಈ ವೇಳೆ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಜಿಲ್ಲಾ ಸಮಿತಿ ಉಪಾಧ್ಯಕ್ಷ ನಾಗರಾಜ ಅರಳಿ, ನಗರ ಘಟಕದ ಅಧ್ಯಕ್ಷ ಅಯ್ಯಪ್ಪ ಉಪ್ಪಾರ, ಮುಖಂಡರಾದ ಚನ್ನಬಸಪ್ಪ ಸುಂಕದ, ರಾಜಶೇಖರ ಆನೆಹೊಸೂರು, ಪುರಸಭೆ ಮಾಜಿ ಸದಸ್ಯ ರವಿರಾಜ ನಂದಿಹಳ್ಳಿ, ಬಿ. ಶರಣಯ್ಯಸ್ವಾಮಿ, ಕೊಟ್ರಯ್ಯಸ್ವಾಮಿ, ಸುನೀಲ್ ಮೂಲಿಮನಿ, ದುರುಗೇಶ ಪ್ಯಾಟ್ಯಾಳ, ರಮೇಶ ಕೋಟ್ಯಾಳ, ಪುರಸಭೆ ಸದಸ್ಯರಾದ ಹಿರೇಬಸಪ್ಪ ಸಜ್ಜನ್, ವೀರೇಶ ಗದ್ದಿ ಮುದಗಲ್, ಶರಣಯ್ಯಸ್ವಾಮಿ ಯರಡೋಣಾ, ಶರಣಪ್ಪ ಕರಡಿ, ಹನುಮೇಶ ಗುರಿಕಾರ್, ಅಮ್ರುಲ್ ಹುಸೇನ್, ಖಾಜಾಹುಸೇನ ಮುಲ್ಲಾ, ಗ್ರಾಪಂ ಅಧ್ಯಕ್ಷ ಶಿವರಾಜ್, ಯಮನೂರಪ್ಪ ಹಾಗೂ ಯೂತ್ ಕಾಂಗ್ರೆಸ್ ಕಾರ್ಯಕರ್ತರು ಇದ್ದರು.