ಚಿತ್ರದುರ್ಗ: ಜನಸಂಖ್ಯಾ ಸ್ಥಿರತೆ ಶಿಕ್ಷಣ, ಕುಟುಂಬ ಯೋಜನಾ ಸೇವಾ ಸೌಲಭ್ಯ ಸಮುದಾಯದ ಮನಮುಟ್ಟಬೇಕು ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ಡಿ.ಎಂ.ಅಭಿನವ್ ಹೇಳಿದರು.
ನಗರದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನೂತನವಾಗಿ ಸೇವೆಗೆ ಸೇರಿದ ನರ್ಸಿಂಗ್ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷತಾಧಿಕಾರಿಗಳು, ನಗರ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳಿಗೆ ನೂತನ ಗರ್ಭ ನಿರೋಧಕಗಳ ಪರಿಚಯ ಕುರಿತ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.ಜನಸಂಖ್ಯಾ ಸ್ಥಿರತೆಯನ್ನು ಕಾಪಾಡುವುದು, ಸರಿಯಾದ ಸಮಯದಲ್ಲಿ ಅರ್ಹ ದಂಪತಿಗಳಿಗೆ ಕುಟುಂಬ ಯೋಜನೆ ತಲುಪಿಸುವುದು. ಇಲಾಖೆಯಲ್ಲಿ ದೊರೆಯುವ ಕುಟುಂಬ ಯೋಜನಾ ಸೇವಾ ಸವಲತ್ತುಗಳ ಮಾಹಿತಿ ಶಿಕ್ಷಣದಲ್ಲಿ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿಯೂ ಕುಟುಂಬ ಯೋಜನೆಗಳನ್ನು ಪ್ರದರ್ಶಿಸುವ ಮಾಹಿತಿ ಶಿಕ್ಷಣ ಚೌಕ ತೆರೆಯುವುದು ಸೇರಿದಂತೆ ಸರಿಯಾದ ಸಮಯದಲ್ಲಿ ಗರ್ಭನಿರೋಧಕ ಬಳಕೆಯ ಆಯ್ಕೆ ಸ್ವಾತಂತ್ರ್ಯವನ್ನು ಅರ್ಹ ದಂಪತಿಗಳಿಗೆ ಬಿಡಬೇಕು. ಇದರಿಂದ ತಾಯಿಯ ಮರಣ ತಪ್ಪಿಸಬಹುದಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕುಟುಂಬ ಯೋಜನೆ ಅನುಷ್ಠಾನಾಧಿಕಾರಿ ಡಾ.ರೇಖಾ ಮಾತನಾಡಿ, ಕುಟುಂಬ ಯೋಜನೆಗಳಲ್ಲಿ ಶಾಶ್ವತ ವಿಧಾನ ಮತ್ತು ತಾತ್ಕಾಲಿಕ ವಿಧಾನಗಳು ಇರುತ್ತವೆ. ಶಾಶ್ವತ ವಿಧಾನಗಳಲ್ಲಿ ಮಹಿಳೆಯರಿಗಾಗಿ ಟುಬೆಕ್ಟಮಿ ಲ್ಯಾಪೆಸ್ಕಪಿಕ್ ಶಸ್ತ್ರ ಚಿಕಿತ್ಸೆ ಉಚಿತವಾಗಿ ನೀಡಲಾಗುತ್ತದೆ. ಅದೇ ರೀತಿ ಪುರುಷರಿಗೆ ವ್ಯಾಸಕ್ಟಮಿ ಎನ್ಎಸ್ವಿ ಸೇವೆ ನೀಡಲಾಗುತ್ತದೆ.ತಾತ್ಕಾಲಿಕ ವಿಧಾನಗಳಲ್ಲಿ ನುಂಗುವ ಗುಳಿಗೆಗಳು ಛಾಯಾ ಮಾತ್ರೆ, ಮಾಲಾ ಎನ್ ಮಾತ್ರೆ, ವಂಕಿ ಐಯುಸಿಡಿ ಕಾಪರ್ ಟಿ ಅಂತರ ಗರ್ಭ ನಿರೋಧಕ ಚುಚ್ಚುಮದ್ದು ನೀಡಲಾಗುತ್ತದೆ. ಪುರುಷರಿಗೆ ನಿರೋದ್ ನೀಡಲಾಗುತ್ತದೆ. ಫಲಾನುಭವಿಗಳನ್ನು ಗುರುತಿಸಲು ಅರ್ಹ ದಂಪತಿಗಳ ದಾಖಲಾತಿ ಪರಿಶೀಲಿಸಿ ಕುಟುಂಬ ಯೋಜನೆಗಳ ಸೇವೆಗಳ ಅಗತ್ಯವಿರುವವರ ಪಟ್ಟಿ ತಯಾರಿಸಬೇಕು. ಅವರ ಮುಂದೆ ಸೇವಾ ಸವಲತ್ತು ಪರಿಚಯಿಸಬೇಕು. ಅವರು ಮಾಡಿದ ಆಯ್ಕೆಯ ಸೇವೆಯನ್ನು ನೀಡಬೇಕು ಎಂದು ಹೇಳಿದರು.
ತರಬೇತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಡಾ.ವಿನಯ್ ರಾಜ್, ಡಾ.ಕವಿತಾ ಅವರು ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ಶಿಕ್ಷಣ ಒದಗಿಸಿದರು.ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ.ಮೂಗಪ್ಪ, ಕುಟುಂಬ ಯೋಜನೆ ವಿಭಾಗದ ಭವ್ಯ, ಶ್ರೀದೇವಿ ಮುಂತಾದವರು ಹಾಜರಿದ್ದರು.