ತವರುಮನೆ ದೇವಸ್ಥಾನದಲ್ಲಿ ಮಂಗಳವಾರ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿಯನ್ನು ಬುಧವಾರ ಬೆಳಿಗ್ಗೆ ಗಂಡನಮನೆ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮಂಗಳವಾರ ರಾತ್ರಿ ೧೨ ಗಂಟೆಯ ನಂತರ ತವರುಮನೆ ದೇವಸ್ಥಾನದಿಂದ ಅಮ್ಮನವರ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತವಾದ ರಥದಲ್ಲಿ ರಾಜಬೀದಿ ಮೆರವಣಿಗೆ ಮೂಲಕ ಗಂಡನಮನೆಗೆ ಕರೆತರಲಾಯಿತು.
ಗಂಡನಮನೆ ದೇವಸ್ಥಾನದಲ್ಲಿ ಪ್ರತಿಷ್ಠಾಪನೆ । ರಂಜಿಸಿದ ವಿವಿಧ ಕಲಾತಂಡ । ಬಿಗಿ ಪೊಲೀಸ್ ಬಂದೋಬಸ್ತ್ಕನ್ನಡಪ್ರಭ ವಾರ್ತೆ ಸಾಗರ
ತವರುಮನೆ ದೇವಸ್ಥಾನದಲ್ಲಿ ಮಂಗಳವಾರ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಮಾರಿಕಾಂಬಾ ದೇವಿಯ ಉತ್ಸವ ಮೂರ್ತಿಯನ್ನು ಬುಧವಾರ ಬೆಳಿಗ್ಗೆ ಗಂಡನಮನೆ ದೇವಸ್ಥಾನದ ಗದ್ದುಗೆಯಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಮಂಗಳವಾರ ರಾತ್ರಿ ೧೨ ಗಂಟೆಯ ನಂತರ ತವರುಮನೆ ದೇವಸ್ಥಾನದಿಂದ ಅಮ್ಮನವರ ಉತ್ಸವ ಮೂರ್ತಿಯನ್ನು ಹೂವಿನಿಂದ ಅಲಂಕೃತವಾದ ರಥದಲ್ಲಿ ರಾಜಬೀದಿ ಮೆರವಣಿಗೆ ಮೂಲಕ ಗಂಡನಮನೆಗೆ ಕರೆತರಲಾಯಿತು. ಮೆರವಣಿಗೆಯಲ್ಲಿ ಹುಲಿವೇಷ, ಬೆದರುಗೊಂಬೆ, ಚಂಡೆ, ಡೊಳ್ಳು, ಕೀಲುಕುದುರೆ ಸೇರಿದಂತೆ ವಿವಿಧ ಕಲಾ ಪ್ರಕಾರಗಳು ಪಾಲ್ಗೊಂಡಿದ್ದವು. ಮೆರವಣಿಗೆಯುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತು ಮಾಡಲಾಗಿತ್ತು. ರಾತ್ರಿಯಾದರೂ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಮೆರವಣಿಗೆಯಲ್ಲಿ ಪಾಲ್ಗೊಂಡ ಶಾಸಕ ಗೋಪಾಲಕೃಷ್ಣ ಬೇಳೂರು ಜನರ ಜೊತೆ ಸೌರ್ಹಾದತೆಯಿಂದ ಬೆರೆಯುವ ಜೊತೆಗೆ ಡೊಳ್ಳು ಕುಣಿತದ ತಂಡದ ಜೊತೆಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು. ಇದರ ಜೊತೆಗೆ ಮೆರವಣಿಗೆಯಲ್ಲಿರುವ ತಂಡಗಳನ್ನು ಶಾಸಕರು ಹುರುದುಂಬಿಸಿದ ದೃಶ್ಯ ಕಂಡು ಬಂದಿತು. ಗಂಡನಮನೆ ದೇವಸ್ಥಾನದ ಎದುರಿನಲ್ಲಿ ನಿರ್ಮಿಸಿರುವ ರಾಜಸ್ಥಾನ ಜೋಧ್ಪುರ ಶೈಲಿಯ ಭವ್ಯ ಮಂಟಪದೊಳಗಿನ ಗದ್ದುಗೆಯಲ್ಲಿ ಅಮ್ಮನವರನ್ನು ಪ್ರತಿಷ್ಠಾಪಿಸಲಾಯಿತು. ನಂತರ ಸಂಪ್ರದಾಯದಂತೆ ಅಮ್ಮನವರಿಗೆ ಕೋರೆಹಲ್ಲು ಬರೆಯುವ ಶಾಸ್ತ್ರ ನಡೆಯಿತು.
ಗಂಡನಮನೆ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ರವಿ ಪೋತರಾಜ ಅವರಿಂದ ವಿಶೇಷ ಪೂಜೆ ನಡೆಯಿತು. ವಿವಿಧ ಸಮಾಜದವರಿಂದ ಅಮ್ಮನವರಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಬುಧವಾರ ಕೂಡ ಅಮ್ಮನವರ ದರ್ಶನ ಹಾಗೂ ಉಡಿತುಂಬುವುದು ಸೇರಿದಂತೆ ವಿವಿಧ ಪೂಜೆ ಸಲ್ಲಿಸಲು ಜನಸಾಗರವೇ ಹರಿದುಬಂದಿತ್ತು. ಬೆಳಗಿನಿಂದ ರಾತ್ರಿಯವರೆಗೂ ಭಕ್ತರು ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಸಿದರು. ೪ಕೆ.ಎಸ್.ಎ.ಜಿ.೧ಮಾರಿಕಾಂಬೆ ದೇವಿ ಉತ್ಸವ ಮೂರ್ತಿಯ ಮೆರವಣಿಗೆ.