ನವಲಗುಂದ: ಬರಗಾಲ ಎಂದು ಘೋಷಣೆ ಮಾಡಿ ತಿಂಗಳು ಕಳೆದರೂ ಪರಿಹಾರ ನೀಡಿಲ್ಲ. ಶೀಘ್ರದಲ್ಲಿ ಬೆಳೆ ವಿಮೆ ಹಾಗೂ ಬರ ಪರಿಹಾರ ಬಿಡುಗಡೆಗೊಳಿಸಬೇಕು. ಇಲ್ಲದ್ದಿದ್ದರೆ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ರೈತ ಮುಖಂಡ ಸುಭಾಶ್ಚಂದ್ರಗೌಡ ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಬಹುದಿನಗಳ ಬೇಡಿಕೆಯಾದ ಕಳಸಾ-ಬಂಡೂರಿ ಕಾಮಗಾರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಟೆಂಡರ್ ಕರೆದು ಕೆಲಸ ಪ್ರಾರಂಭಿಸಬೇಕು. ಮುಂಗಾರು ಬೆಳೆಯಾದ ಹೆಸರು ಬೆಳೆಯ ವಿಮೆಯನ್ನು ರೈತರು ತುಂಬಿದ್ದು, ಈ ವರೆಗೂ ರೈತರಿಗೆ ಬೆಳೆವಿಮೆ ಬಂದಿಲ್ಲ. ಶೀಘ್ರವಾಗಿ ಬಿಡುಗಡೆ ಮಾಡಬೇಕು. ಅದರೊಂದಿಗೆ ಬರ ಪರಿಹಾರ ಬಿಡುಗಡೆಗೂ ಕ್ರಮ ಕೈಗೊಳ್ಳಬೇಕು. ಬರಗಾಲದಿಂದಾಗಿ ರೈತರು ಬಹಳಷ್ಟು ತೊಂದರೆಯಲ್ಲಿದ್ದು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿನ ರೈತರ ಸಾಲಮನ್ನಾ ಮಾಡಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ಸಿದ್ದಪ್ಪ ಮುಪ್ಪಯ್ಯನವರ, ಬಸನಗೌಡ ಹುಣಸಿಕಟ್ಟೆ, ಮಲ್ಲಪ್ಪ ಬಸೆಗೊಣ್ಣವರ, ಗೋವಿಂದರೆಡ್ಡಿ ಮೊರಬದ, ಸಿದ್ದಲಿಂಗಪ್ಪ ಹಳ್ಳದ ಹಾಗೂ ಹಲವು ರೈತರು ಇದ್ದರು.