ಕನ್ನಡಪ್ರಭವಾರ್ತೆ ಚಿತ್ರದುರ್ಗಚಿತ್ರದುರ್ಗ: ರಾಷ್ಟ್ರನಾಯಕ, ಕರ್ನಾಟಕ ಏಕೀಕರಣದ ನೇತಾರ ಎಸ್.ನಿಜಲಿಂಗಪ್ಪ ನಾಡು ಕಂಡ ಅಪರೂಪದ ರಾಜಕಾರಣಿ. ಅವರು ಜೀವಿಸಿದ ನಿವಾಸವನ್ನು ರಾಜ್ಯ ಸರ್ಕಾರ ಖರೀದಿಸಿ ಸ್ಮಾರಕ ಮಾಡುವ ಕೆಲಸ ತುರ್ತಾಗಿ ಆಗಲಿ ಎಂದು ರಾಜ್ಯ ಉಗ್ರಾಣ ನಿಗಮದ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಎಚ್.ಟಿ.ಬಳೆಗಾರ್ ಆಗ್ರಹಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಬಳೇಗಾರ್ ಅವರು, ಸ್ಮಾರಕಕ್ಕೆ ಕರ್ನಾಟಕ ರತ್ನ ಎಂದು ನಾಮಕರಣ ಮಾಡಬೇಕು. ನಿಜಲಿಂಗಪ್ಪ ಸಮಗ್ರ ಕರ್ನಾಟಕದ ಅಭಿವೃದ್ಧಿ ಹರಿಕಾರರು. ಹರಿದು ಹಂಚಿಹೋಗಿದ್ದ ರಾಜ್ಯವನ್ನು ಒಗ್ಗೂಡಿಸಿದ ನೇತಾರ. ತಮ್ಮ ಜೀವಿತಾವಧಿಯ ಕೊನೆಯವರೆಗೂ ಸರಳತೆ, ಪ್ರಾಮಾಣಿಕತೆ, ನಿಷ್ಟೂರತೆ ಮೈಗೂಡಿಸಿಕೊಂಡಿದ್ದ ನಿಜಲಿಂಗಪ್ಪ, ನಾಡಿನ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ಮಹಾ ನಾಯಕ ಎಂದರು.ಪ್ರಧಾನಿ, ರಾಷ್ಟ್ರಪತಿ ಹುದ್ದೆ ಅಲಂಕರಿಸುವ ಅವಕಾಶವನ್ನು ಸ್ವಾಭಿಮಾನದ ಕಾರಣಕ್ಕೆ ನಿರಾಕರಿಸಿದ ನಿಜಲಿಂಗಪ್ಪ, ಬಯಲುಸೀಮೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೊನೆ ಉಸಿರು ಇರುವವರೆಗೆ ಜೀವಿಸಿದ ವಿರಳ ರಾಜಕಾರಣಿ. ಪ್ರಸ್ತುತ ರಾಜಕಾರಣಿಗಳು ಬೆಂಗಳೂರು ಜೀವನ ಇಷ್ಟಪಡುವ ಕಾಲಘಟ್ಟದಲ್ಲಿ, ನಿಜಲಿಂಗಪ್ಪ ಅವರು ವಕೀಲ ವೃತ್ತಿಯಲ್ಲಿ ಗಳಿಸಿದ ಸಂಪಾದನೆಯಲ್ಲಿ ಚಿತ್ರದುರ್ಗದಲ್ಲಿ ಕಟ್ಟಿಸಿದ ಮನೆಯಲ್ಲಿಯೇ ತಮ್ಮ ಕೊನೇ ದಿನಗಳನ್ನು ಕಳೆದ ಅಪರೂಪದ ಮುತ್ಸದ್ಧಿ ವ್ಯಕ್ತಿ. ತಮ್ಮ ಅಧಿಕಾರವಧಿಯಲ್ಲಿ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಗಮನಹರಿಸುವ ಬದ್ಧತೆಯಲ್ಲಿ ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೊಳಿಸಲು ಆಗದ್ದನ್ನು ಸದಾ ನೆನಪಿಸಿಕೊಂಡು ನೊಂದುಕೊಳ್ಳುತ್ತಿದ್ದ ನಿಜಲಿಂಗಪ್ಪ, ಬಯಲುಸೀಮೆ ಪ್ರದೇಶಕ್ಕೆ ಭದ್ರೆ ನೀರು ಹರಿಸುವಂತೆ ಮನೆ ಬಾಗಿಲಿಗೆ ಬಂದ ಎಲ್ಲ ಮುಖ್ಯಮಂತ್ರಿಗಳ ಬಳಿ ಬೇಡಿಕೊಳ್ಳುತ್ತಿದ್ದ ರೀತಿ ಅವರು ಹಿಂದುಳಿದ ಜಿಲ್ಲೆಯ ಕುರಿತು ಹೊಂದಿದ್ದ ಅದಮ್ಯ ಪ್ರೀತಿಗೆ ಸಾಕ್ಷಿ ಆಗಿತ್ತು ಎಂದಿದ್ದಾರೆ.ಜಿಲ್ಲೆಯನ್ನು ಹಸಿರನ್ನಾಗಿಸುವ ಕನಸು ಕಂಡ ನಿಜಲಿಂಗಪ್ಪ ಸ್ಮರಣೆಗಾಗಿ ಅವರ ನಿವಾಸವನ್ನು ಕರ್ನಾಟಕ ರತ್ನ ಭವನ ಎಂದು ನಾಮಕರಣ ಮಾಡುವ ಮೂಲಕ ಸ್ಮಾರಕಗೊಳಿಸುವುದು ಉತ್ತಮ. ಈ ಮೂಲಕ ಸ್ವಾತಂತ್ರ್ಯ ಹೋರಾಟಗಾರ ನಿಜಲಿಂಗಪ್ಪ ಅವರಿಗೆ ಗೌರವ ಸಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.