- ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಗುರುವಾರ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ
ಕನ್ನಡಪ್ರಭ ವಾರ್ತೆ, ಬೀರೂರು:ಮಹಾತ್ಮ ಗಾಂಧಿ ಆಶಯದ ಸತ್ಯ, ಅಹಿಂಸೆ ಮತ್ತು ಜಾತಿ, ವರ್ಗಬೇಧವಿರದ ಕನಸಿನ ಭಾರತ ನಿರ್ಮಾಣವಾಗಲಿ ಎಂದು ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್ಆಶಿಸಿದರು. ಪಟ್ಟಣದ ಮಹಾತ್ಮಗಾಂಧಿ ವೃತ್ತದಲ್ಲಿ ಗುರುವಾರ ಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ನಂತರ ಪುರಸಭೆ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಎಲ್ಲ ವರ್ಗ-ವರ್ಣ ಸೇರಿದಂತೆ ಅಡೆ-ತಡೆಗಳನ್ನು ನಿವಾರಿಸಿ ದೇಶದ ಜನತೆ ಒಗ್ಗೂಡಿ ಬ್ರಿಟಿಷರ ವಿರುದ್ಧ ಹೋರಾಡುವಂತೆ ಪ್ರೇರೇಪಿಸಿ ನಾಯಕತ್ವ ವಹಿಸಿದ್ದ ಗಾಂಧೀಜಿ ಸ್ಥಾನ, ಮಾನಗಳಿಗೆ ಆಸೆ ಪಟ್ಟವರಲ್ಲ. ಸರಳತೆ, ಸ್ವಚ್ಛತೆ ಮೂಲಕ ಹಳ್ಳಿಗಳ ದೇಶ ಭಾರತ ಗ್ರಾಮಸ್ವರಾಜ್ಯವಾಗಬೇಕು ಎಂದು ಬಯಸಿದ್ದರು.
ಗ್ರಾಮಗಳು ಸ್ವಾವಲಂಬನೆ ಸಾಧಿಸಿ ದೇಶದ ಒಳಿತಿಗೆ ದುಡಿಯಬೇಕು ಎಂದು ಚಿಂತಿಸಿದ್ದರು. ಆದರೆ ಇಂದು ಗ್ರಾಮಗಳು ಕೂಡಾ ನಗರಿಕರಣದ ಪ್ರಭಾವಕ್ಕೆ ಒಳಗಾಗಿವೆ. ಇದು ಸಾಮಾಜಿಕ ವ್ಯವಸ್ಥೆ ಮೇಲೆ ಸಾಕಷ್ಟು ಪರಿಣಾಮ ಬೀರಲಿದ್ದು, ಗ್ರಾಮೀಣ ವ್ಯವಸ್ಥೆ ಸುಧಾರಣೆಗೊಂಡು ಸಣ್ಣ ಪಟ್ಟಣಗಳಲ್ಲಿ ಸ್ವಾವಲಂಬಿ ಬದುಕಿಗೆ ಆಸರೆ ದೊರೆತು ಒತ್ತಡಮುಕ್ತ ಜೀವನದ ಮೂಲಕ ಸುಧಾರಣೆ ಸಾಧ್ಯವಾಗಲಿ ಎನ್ನುವ ಅವರ ಆಶಯ ಈಡೇರಲು ಎಲ್ಲರೂ ಶ್ರಮಿಸೋಣ ಎಂದು ನುಡಿದರು.ಪುರಸಭೆ ಮುಖ್ಯಾಧಿಕಾರಿ ಜಿ.ಪ್ರಕಾಶ್ ಮಾತನಾಡಿ, ಜಗತ್ತಿನ ಮಾದರಿ ವ್ಯಕ್ತಿತ್ವಗಳಾದ ಗಾಂಧೀಜಿ ಮತ್ತು ಶಾಸ್ತ್ರೀಯವರ ಬದುಕು ಇಂದಿನ ಪೀಳಿಗೆಗೆ ಪ್ರೇರಕವಾಗಬೇಕು. ದೇಶವನ್ನು ಸ್ವಚ್ಛ ಮತ್ತು ಸ್ವಸ್ಥಗೊಳಿಸುವಲ್ಲಿ ಎಲ್ಲರ ಸಹಕಾರದ ಅಗತ್ಯ ಇದೆ. ದೇಶ ನಿರ್ಮಲವಾಗಲು ಮೊದಲು ನಾವು ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕಿ, ಪಟ್ಟಣ ಸ್ವಚ್ಚವಾಗಿಡುವ ಜೊತೆ ಮಹಾತ್ಮರ ಜಯಂತಿ ಅರ್ಥಪೂರ್ಣವಾಗಿಸೋಣ ಎಂದು ಕರೆ ನೀಡಿದರು.
ಪುರಸಭೆ ಹಿರಿ ಆರೋಗ್ಯನಿರೀಕ್ಷಕ ಲಕ್ಷ್ಮಣ್ ಮಾತನಾಡಿ, ತನ್ನ ನಡೆ-ನುಡಿಯಿಂದ ಮಹಾತ್ಮ ಎನಿಸಿಕೊಂಡ ಗಾಂಧೀಜಿ ಇಡೀ ಜಗತ್ತಿನ ಸತ್ಯಾಗ್ರಹ ಸ್ವರೂಪಕ್ಕೆ ಹೊಸರೂಪ ನೀಡಿದವರು. ಸ್ವಚ್ಛತೆ ಮೂಲಕ ಆರೋಗ್ಯಪೂರ್ಣ ಸಮಾಜ ಕಟ್ಟಲು ಸಾಧ್ಯ ಎಂದು ಪ್ರತಿಪಾದಿಸಿದರು. ಆದರೆ ಇಂದಿನ ಸಮಾಜದಲ್ಲಿ ಜನಸಂಖ್ಯೆ ಹೆಚ್ಚಳ ಮತ್ತು ಬೆಳೆಯುತ್ತಿರುವ ಕಸದ ಪ್ರಮಾಣ ವಿಶ್ವವನ್ನೇ ಆವರಿಸುತ್ತಿದೆ. ಭೂಮಿ ಇರುವಷ್ಟೇ ಇದೆ. ನಾವು ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಅಸ್ವಸ್ಥ ಸಮುದಾಯವಾಗಿ ಬೆಳೆಯಬೇಕಾಗುತ್ತದೆ. ಅಂತೆಯೇ ಸರಳತೆ ಕೂಡಾ ನಮ್ಮಿಂದ ದೂರಾಗುತ್ತಿದೆ. ದೇಶದ ಪ್ರಧಾನಿಯಾದರೂ ಗಾಂಧೀಜಿ ಚಿಂತನೆಗಳ ಸಾಕಾರವಾಗಿ ಬದುಕಿದ ಲಾಲ ಬಹದ್ದೂರ ಶಾಸ್ತ್ರೀಯವರ ಬದುಕೂ ನಮಗೆ ಆದರ್ಶವಾದರೆ ಜಗತ್ತಿಗೆ ಒಳಿತು ಎಂದು ತಿಳಿಸಿದರು.ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಆರ್.ರಘು ಮಾತನಾಡಿದರು. ಸಿಬ್ಬಂದಿ ವೀಣಾ, ಗಿರಿರಾಜ್, ತಮ್ಮಣ್ಣ, ಕರಿಯಪ್ಪ, ಶಿಲ್ಪ, ಸ್ವರೂಪ ರಾಣಿ, ರೇಣುಕಮ್ಮ, ಪೌರ ನೌಕರರ ಸಂಘದ ಅಧ್ಯಕ್ಷೆ ಜಯಮ್ಮ, ಕುಮಾರಿ, ಸೇರಿದಂತೆ ಸಾರ್ವಜನಿಕರು ಇದ್ದರು. 2 ಬೀರೂರು 1 ಮಹಾತ್ಮ ಗಾಂಧಿ ಜನ್ಮದಿನದ ಅಂಗವಾಗಿ ಗುರುವಾರ ಪಟ್ಟಣದ ಮಹಾತ್ಮಗಾಂಧಿ ಪ್ರತಿಮೆಗೆ ಪುರಸಭೆಯಿಂದ ಮಾಲಾರ್ಪಣೆ ಮಾಡಿ ಗೌರವಿಸಲಾಯಿತು. ಪುರಸಭೆ ಅಧ್ಯಕ್ಷೆ ಭಾಗ್ಯಲಕ್ಷ್ಮಿಮೋಹನ್ ಮುಖ್ಯಾಧಿಕಾರಿ ಜಿ.ಪ್ರಕಾಶ್, ಕೆ.ಆರ್. ಲಕ್ಷ್ಮ ಣ್, ಮತ್ತು ಸಿಬ್ಬಂದಿ ಇದ್ದರು.