ಕೊಪ್ಪಳ: ಉಪನ್ಯಾಸಕರು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಾಗ ಮಾತ್ರ ಮಕ್ಕಳ ಭವಿಷ್ಯ ಉತ್ತಮಗೊಳ್ಳಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ.ಎಚ್. ಜಗದೀಶ ಹೇಳಿದ್ದಾರೆ.
ಮುಂದುವರೆದು ಉಪನ್ಯಾಸಕರು ಜಡತ್ವದಿಂದ ಹೊರಬರಬೇಕು, ಇಲಾಖೆಯ ನಿಯಮ ಬದಲಾದಾಗ ಉಪನ್ಯಾಸಕರೂ ಸಹ ಬದಲಾಗಬೇಕು ಆಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಬಸಪ್ಪ ನಾಗೋಲಿ ಮಾತನಾಡಿ, ಉಪನ್ಯಾಸಕರು ಸಮಾಜಮುಖಿಯಾಗಿ ಕೆಲಸ ಮಾಡಬೇಕು, ಮಕ್ಕಳಲ್ಲಿ ಹೊಸತನ ತರಬೇಕೆಂದು ನುಡಿದರು.ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಸೋಮಶೇಖರ ಗೌಡ ಮಾತನಾಡಿ, ಉಪನ್ಯಾಸಕರಿಗೆ ಒತ್ತಡವಿರುವುದು ನಿಜ, ಆದರೆ ಮಕ್ಕಳಿಗೆ ಅನ್ಯಾಯ ಮಾಡಬಾರದು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಎ.ಆರ್.ಶಿವಾನಂದ ಮಾತನಾಡಿ, ನಮ್ಮದು ಉತ್ತಮ ಫಲಿತಾಂಶದ ಕಡೆ ಗುರಿ ಇರಬೇಕು ಎಂದರು. ವೇದಿಕೆಯ ಮೇಲೆ ಕಾರ್ಯದರ್ಶಿ ಮಲ್ಲಿಕಾರ್ಜುನ ಹೊಳಗುಂದಿ ಮತ್ತು ಎಸ್.ವಿ. ಮೇಳಿ ಉಪಸ್ಥಿತರಿದ್ದರು.ನಯನ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಈ ಕಾರ್ಯಕ್ರಮಕ್ಕೆ ಡಾ. ಸಿದ್ಧಲಿಂಗಪ್ಪ ಕೊಟ್ನೆಕಲ್ ಸ್ವಾಗತಿಸಿದರೆ ಕೊನೆಗೆ ಯಂಕಪ್ಪ ಗೊಲ್ಲರ್ ವಂದಿಸಿದರು. ಶೇಖ್ಬಾಬು ಶಿವಾಪುರ ಕಾರ್ಯಕ್ರಮ ನಿರೂಪಿಸಿದರು. ಈ ಕಾರ್ಯಾಗಾರದಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಕನ್ನಡ, ರಾಜ್ಯಶಾಸ್ತ್ರ ಮತ್ತು ಅರ್ಥಶಾಸ್ತ್ರಗಳ ಉಪನ್ಯಾಸಕರುಗಳು ಭಾಗವಹಿಸಿದ್ದರು.