ಕವಿತೆ ಕವಿಯ ಜೀವವಾಗಿರಬೇಕು, ಅಕ್ಷರಗಳು ಅಂಧಶ್ರದ್ಧೆಗಳ ಚೌಕಟ್ಟನ್ನು ಬಿಟ್ಟು ಹೊರ ಬರಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಹೇಳಿದರು. ಹಾವೇರಿಯಲ್ಲಿ ಹಾದಿ ಇಲ್ಲದ ಬಯಲು ಕವನ ಸಂಕಲನ ಬಿಡುಗಡೆಗೊಳಿಸಿ ಅವರು ಮಾತನಾಡಿದ್ದಾರೆ.
ಹಾವೇರಿ: ಕವಿತೆ ಕವಿಯ ಜೀವವಾಗಿರಬೇಕು, ಅಕ್ಷರಗಳು ಅಂಧಶ್ರದ್ಧೆಗಳ ಚೌಕಟ್ಟನ್ನು ಬಿಟ್ಟು ಹೊರ ಬರಬೇಕು. ಹಾಗಾದಲ್ಲಿ ಆತನ ಸಾಹಿತ್ಯ ಜೀವಪರ ಮತ್ತು ಜನಪರವಾಗಿರುತ್ತದೆ ಎಂದು ಸಾಮಾಜಿಕ ಕಾರ್ಯಕರ್ತೆ ಅಕ್ಷತಾ ಕೆ.ಸಿ. ಹೇಳಿದರು.
ಶಿಗ್ಗಾಂವಿಯ ಉತ್ತರ ವೇದಿಕೆ, ನಗರದ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಹಂಚಿನಮನಿ ಆರ್ಟ್ ಗ್ಯಾಲರಿ ಆಶ್ರಯದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಡಾ. ಉಮೇಶಪ್ಪ ಮತ್ತು ಬೆಂಗಳೂರಿನ ಕವಿ ಜ್ಯೋತಿಲಿಂಗಪ್ಪ ಶಿವನಕೆರೆ ಅವರ ಜಂಟಿ ಕವನ ಸಂಕಲನ ''''ಹಾದಿ ಇಲ್ಲದ ಬಯಲು'''' ಬಿಡುಗಡೆ ಮಾಡಿ ಅವರು ಮಾತನಾಡಿದರು.
ಕೃತಿ ಪರಿಚಯ ಮಾಡಿದ ಚಿಕ್ಕಮಗಳೂರಿನ ಡಾ. ಎಚ್.ಎಸ್. ಸತ್ಯನಾರಾಯಣ ಅವರು, ಕವಿ ಉಮೇಶಪ್ಪ ಹೂವಿನ ಮನಸ್ಸಿನವರು, ಮಾಗಿದ ಕವಿಗಳಿಬ್ಬರು ವಾಚ್ಯಾರ್ಥಕ್ಕಿಂತ ಸೂಚ್ಯಾರ್ಥಕ್ಕೆ ಒತ್ತು ಕೊಟ್ಟು ಹೈಕುಗಳನ್ನು ಬರೆದಿದ್ದಾರೆ. ಕೃತಿಯಲ್ಲಿರುವ ೧೦೭ ಪದ್ಯಗಳು ಅನೇಕ ಅರ್ಥ ಪದರುಗಳನ್ನು ಬಿಚ್ಚುತ್ತ ಓದುಗನನ್ನು ಕಾಡುತ್ತವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪ್ರಾಚಾರ್ಯರ ಸಂಘದ ಅಧ್ಯಕ್ಷ ಡಾ. ನಾಗರಾಜ ದ್ಯಾಮನಕೊಪ್ಪ ಮಾತನಾಡಿ, ಅನುಭವಗಳನ್ನು ಅರಗಿಸಿ ಅನುಭೂತಿ ಮಾಡಿದ ಹಾದಿ ಇಲ್ಲದ ಬಯಲು ಸಂಕಲನದ ಕವಿತೆಗಳು ಮನಸ್ಸಿನ ಸಂಕೀರ್ಣ ಭಾವನಗಳಿಗೆ ಕನ್ನಡಿ ಹಿಡಿದಿವೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.