ಹೂವಿನಹಡಗಲಿ : ವೀರಶೈವ ಲಿಂಗಾಯತ ಸಮಾಜದಲ್ಲಿ ಸಾಕಷ್ಟು ಉಪ ಪಂಗಡಗಳಿವೆ. ಇವುಗಳು ಪ್ರತ್ಯೇಕವಾಗಿ ಸಂಘಟಿತರಾಗಿದ್ದಾರೆ. ಆದರೆ ಲಿಂಗಾಯತ ಸಮಾಜದ ವಿಚಾರ ಬಂದಾಗ ಎಲ್ಲರೂ ಸಂಘಟಿತರಾಗುವ ಜತೆಗೆ ಒಗ್ಗಟ್ಟು ಪ್ರದರ್ಶನ ಮಾಡಿ ಸಮಾಜಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕಿದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ಇಲ್ಲಿನ ಶಿವಶಾಂತವೀರ ಸಮುದಾಯ ಭವನದಲ್ಲಿ ಬಣಜಿಗ ಕ್ಷೇಮಾಭಿವೃದ್ಧಿ ಸಂಘವು ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಮಾಜದ ಮುಖಂಡರು ಸೇರಿಕೊಂಡು ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರನ್ನು ಪುರಸ್ಕರಿಸುವಂತಹ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ಬಣಜಿಗ ಸಮಾಜವು ಇತರೆ ಜಾತಿಗಳೊಂದಿಗೆ ಪ್ರೀತಿ, ವಿಶ್ವಾಸದ ಜತೆಗೆ ಸೌಹಾರ್ದತೆ ಕಾಪಾಡಿಕೊಳ್ಳಬೇಕೆಂದು ಹೇಳಿದರು.
ವೀರಶೈವ ಲಿಂಗಾಯತ ಸಮಾಜವು ಮೂಢನಂಬಿಕೆಯಿಂದ ದೂರ ಉಳಿದು, ವಿಶ್ವ ಗುರು ಬಸವಣ್ಣನವರ ವೈಚಾರಿಕ ಚಿಂತನೆ, ಶರಣ ತತ್ವ, ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ. 12ನೇ ಶತಮಾನದಲ್ಲಿ ಸ್ಥಾಪನೆಯಾದ ಅನುಭವ ಮಂಟಪದ ಮೂಲಕ ಸಮಾನತೆ, ಮೀಸಲಾತಿ ಪರಿಕಲ್ಪನೆ ನೀಡಿದ್ದರು. ಅವರ ಆ ಪ್ರೇರಣೆಯಿಂದಲೇ ಪ್ರಧಾನಿ ನರೇಂದ್ರ ಮೋದಿಯವರು, ಮಹಿಳಾ ಮೀಸಲಾತಿ ಜಾರಿಗೊಳಿಸಿದ್ದು, ಮುಂದಿನ ದಿನಗಳಲ್ಲಿ ವಿಧಾನಸಭೆ, ಲೋಕಸಭೆಯಲ್ಲೂ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದರು.
ನಮಗೆ ಅಧಿಕಾರ ಹಾಗೂ ಅವಕಾಶ ಸಿಕ್ಕಾಗ ಸಮಾಜದ ಶ್ರಯೋಭಿವೃದ್ಧಿಗೆ ಶ್ರಮಿಸಿದ್ದೇನೆ. ನಾನು ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಬಣಜಿಗ ಸಮಾಜಕ್ಕೆ 2ಎ ಮೀಸಲಾತಿ ನೀಡಿದ್ದೇನೆ ಎಂದ ಅವರು, ಮುಂಬರುವ ಜಾತಿ ಗಣತಿ ವೇಳೆ ವೀರಶೈವ ಮಹಾಸಭಾ ನಿರ್ಣಯದಂತೆ ಉಪ ಪಂಗಡಗಳು ಜಾತಿ ಕಾಲಂನಲ್ಲಿ ಹೆಸರು ನಮೂದಿಸಬೇಕೆಂದು ಹೇಳಿದರು.
ಶಾಸಕ ಕೃಷ್ಣನಾಯ್ಕ ಮಾತನಾಡಿ, ಬಣಜಿಗ ಸಮಾಜದ ಸಮುದಾಯ ಭವನಕ್ಕೆ ಪುರಸಭೆಯಿಂದ ಸಿಎ ಸೈಟ್ ಕೊಡಿಸಿ, ಸರ್ಕಾರದಿಂದ ಅನುದಾನ ಮಂಜೂರು ಮಾಡಿಸುವ ಭರವಸೆ ನೀಡಿದರು. ಹ.ಬೊ.ಹಳ್ಳಿ ಶಾಸಕ ನೇಮರಾಜನಾಯ್ಕ ಮಾತನಾಡಿದರು.
ಗವಿಮಠದ ಡಾ. ಹಿರಿಶಾಂತ ವೀರ ಸ್ವಾಮೀಜಿ, ಮಲ್ಲನಕೆರೆ ಮಠದ ಚನ್ನಬಸವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಉಮೇಶ ಮುಂಡವಾಡ ಅಧ್ಯಕ್ಷತೆ ವಹಿಸಿದ್ದರು. ಬಳ್ಳಾರಿ ವೀವಿ ಸಂಘದ ಅಧ್ಯಕ್ಷ ಕಣೇಕಲ್ ಮಹಾಂತೇಶ, ತಹಸೀಲ್ದಾರ್ ಜಿ.ಸಂತೋಷಕುಮಾರ್, ಸಮಾಜದ ಮುಖಂಡರಾದ ಡಾ. ಜಂಬಣ್ಣ ಯಲಗಚ್ಚಿನ, ಡಾ. ಕೆ.ರುದ್ರಪ್ಪ, ಮುರುಗೇಶ ತುರುಕಾಣಿ, ಎಸ್.ಎಸ್. ರಾಜೇಶ್ವರಿ, ಐ.ಎಸ್. ವಿಜಯಕುಮಾರ, ಮಲ್ಲಿಕಾರ್ಜುನ ಯಲಗಚ್ಚಿನ, ಎಚ್.ಶಿವಯೋಗಪ್ಪ, ಜವಳಿ ಮಲ್ಲಿಕಾರ್ಜುನ ಇತರರಿದ್ದರು.
ಹೊಳಲಿನ ಎಚ್.ಸುಭಾಶ್ಚಂದ್ರ ಸಂಗಡಿಗರು ಸಂಗೀತ ಕಾರ್ಯಕ್ರಮ ಜನಮನ ಸೆಳೆಯಿತು. ಇದೇ ವೇಳೆ ಎಸ್ಎಸ್ಎಲ್ ಸಿಯಲ್ಲಿ 625 ಅಂಕ ಗಳಿಸಿದ ಲಕ್ಷ್ಮಿ ಬಿದರಹಳ್ಳಿ ಸೇರಿದಂತೆ, ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕರಿಸಲಾಯಿತು.
ಉಪ ಪಂಗಡಗೊಂದಿಗೆ ವೈವಾಹಿಕ ಸಂಬಂಧ ಬೆಳೆಸಿಕೊಳ್ಳಿ!
ಲಿಂಗಾಯತ ಉಪ ಪಂಗಡಗಳು ಜಾತಿಭೇದ ಎಣಿಸದೇ ವೈವಾಹಿಕ ಸಂಬಂಧ ಬೆಳೆಸಬೇಕಿದೆ. ರಕ್ತಸಂಬಂಧ ಏರ್ಪಟ್ಟ ಸಂದರ್ಭ ಸಮಾಜದಲ್ಲಿ ಒಗ್ಗಟ್ಟು ಮೂಡುತ್ತದೆ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು.
ನಾವು ಮತ್ತು ಶಾಮನೂರು ಶಿವಶಂಕ್ರಪ್ಪ, ಮುರುಗೇಶ ನಿರಾಣಿ, ಎಂ.ಬಿ. ಪಾಟೀಲ್ ಕುಟುಂಬದೊಂದಿಗೆ ವೈವಾಹಿಕ ಸಂಬಂಧ ಬೆಳೆಸಿದ್ದೇವೆ. ಉಪ ಪಂಗಡ ಎನ್ನದೇ ಮದುವೆ ಮಾಡಿ ಎಂದರು.