ಗಜೇಂದ್ರಗಡ: ಉತ್ತಮ ಸಾಧನೆ ಹಾಗೂ ಆದರ್ಶದ ಬದುಕು ಸಾಗಿಸುವ ಕನಸನ್ನು ವಿದ್ಯಾರ್ಥಿಗಳು ಕಾಣಬೇಕು. ವಿದ್ಯಾರ್ಥಿಗಳು ಜೀವನದಲ್ಲಿ ಸುವರ್ಣಾವಕಾಶ ಪಡೆಯಬೇಕು ಎಂದು ನರೇಗಲ್ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.
ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪಿಯು) ಉಪನಿರ್ದೇಶಕ ಜಿ.ಎನ್. ಕುರ್ತಕೋಟಿ ಮಾತನಾಡಿ, ದ್ವಿತೀಯ ಪಿಯು ಫಲಿತಾಂಶದಲ್ಲಿ ಗದಗ ಜಿಲ್ಲೆ ಕೊನೆಯ ಸ್ಥಾನಕ್ಕೆ ಕುಸಿದಾಗ ಅನ್ನದಾನೇಶ್ವರ ಶಿಕ್ಷಣ ಸಂಸ್ಥೆಯ ನರೇಗಲ್-ಗಜೇಂದ್ರಗಡ ಕಾಲೇಜಿನವರು ಉತ್ತಮ ಫಲಿತಾಂಶ ನೀಡುವ ಮೂಲಕ ಜಿಲ್ಲೆಯ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ ಎಂದರು.
ಪಿಯು ಕಾಲೇಜಿನ ಚೇರ್ಮನ್ ವಿ.ವಿ. ವಸ್ತ್ರದ, ಪ್ರಾಚಾರ್ಯ ವಸಂತರಾವ್ ಗಾರಗಿ ಹಾಗೂ ಮಂಜುನಾಥ ಮೆಲ್ಮನಿ ಮಾತನಾಡಿದರು. ಈ ವೇಳೆ ಕಾಲೇಜಿನಲ್ಲಿ ಅಳವಡಿಸಲಾದ ಅಗ್ನಿ ನಂದಿಸುವ ಉಪಕರಣದ ಉದ್ಘಾಟಿಸಲಾಯಿತು. ಬಳಿಕ ರೋಣ ತಾಲೂಕು ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಅಗ್ನಿಸ್ಪರ್ಶದ ಪೂರ್ವ ಹಾಗೂ ನಂತರದ ಸೂಕ್ತ ಕ್ರಮಗಳ ಕುರಿತು ಪ್ರಾತ್ಯಕ್ಷಿಕ ನಡೆಯಿತು.ಕಳೆದ ಬಾರಿಯ ದ್ವಿತೀಯ ಪಿಯು ಫಲಿತಾಂಶದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಶೇ. ೧೦೦ರಷ್ಟು ಫಲಿತಾಂಶ ನೀಡಿದ ಉಪನ್ಯಾಸಕರನ್ನು ಹಾಗೂ ರೋಣ ಅಗ್ನಿಶಾಮಕ ದಳದ ಠಾಣಾಧಿಕಾರಿ ಮಂಜುನಾಥ ಮೆಲ್ಮನಿ ಅವರನ್ನು ಸನ್ಮಾನಿಸಲಾಯಿತು. ಅನ್ನದಾನ ವಿಜಯ ವಿದ್ಯಾಪ್ರಸಾರಕ ಸಮಿತಿಯ ಎನ್.ಆರ್. ಗೌಡರ, ಕುಮಾರೇಶ್ವರ ಪದವಿ ಕಾಲೇಜಿನ ಎಸ್.ಎಸ್. ಪಟ್ಟೇದ, ಪಿಯು ಕಾಲೇಜಿನ ಸದಾಶಿವ ಕರಡಿ, ಪಿ.ಎನ್. ಚವಡಿ ಇತರರು ಇದ್ದರು.