ಹಾವೇರಿ: ಬುಡಕಟ್ಟು ಜನಾಂಗದ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಬುಡಕಟ್ಟು ಜನಾಂಗ ಸರ್ಕಾರದ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸವರಾಜ ಶಿವಣ್ಣನವರ ತಿಳಿಸಿದರು.ತಾಲೂಕಿನ ಗೌರಾಪುರ ಗ್ರಾಮದಲ್ಲಿ ಶನಿವಾರ ಧರ್ತಿ ಆಬಾ ಜನಭಾಗಿದಾರ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿ, ದಲಿತರ ಹಾಗೂ ಬುಡಕಟ್ಟು ಜನಾಂಗದ ಅಭಿವೃದ್ಧಿಗೆ ರಾಜ್ಯ ಸರ್ಕಾರ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು.ಎಸ್ಸಿ, ಎಸ್ಟಿ ಜನಾಂಗಕ್ಕೆ ಆರ್ಥಿಕ ಶಕ್ತಿ ತುಂಬುವ ಹಿನ್ನೆಲೆ 2013ರಲ್ಲಿ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ರಾಜ್ಯ ಸರ್ಕಾರ ಮಂಡಿಸುವ ಆಯವ್ಯಯದಲ್ಲಿ ಶೇ. 20ರಷ್ಟು ಮೊತ್ತವನ್ನು ಎಸ್ಸಿ, ಎಸ್ಟಿ ಜನಾಂಗಕ್ಕೆ ಕಾಯ್ದಿರಿಸಲು ಕಾನೂನು ತಿದ್ದುಪಡಿ ಮಾಡಲಾಗಿದೆ. ಇದನ್ನು ದೇಶದಲ್ಲಿ ಕರ್ನಾಟಕ ರಾಜ್ಯ ಜಾರಿಗೆ ಮಾಡಿದ್ದು ಹೆಮ್ಮೆಯ ಸಂಗತಿ. ರಾಜ್ಯ ಸರ್ಕಾರ ಎಸ್ಸಿ/ಎಸ್ಟಿ ಗುತ್ತಿಗೆದಾರರಿಗೆ ಮೀಸಲಾತಿ ಕಲ್ಪಿಸಿದೆ ಎಂದರು.11 ಗ್ರಾಮಗಳು ಆಯ್ಕೆ: ಧರ್ತಿ ಆಬಾ ಯೋಜನೆಯಡಿ ಜಿಲ್ಲೆಯ 11 ಗ್ರಾಮಗಳು ಆಯ್ಕೆಯಾಗಿದ್ದು, ಈ ಪೈಕಿ ನನ್ನ ಕ್ಷೇತ್ರ ವ್ಯಾಪ್ತಿಯ ಗೌರಾಪುರ, ದುಮ್ಮಿಹಾಳ ಹಾಗೂ ಅರಬಗೊಂಡ ಗ್ರಾಮಗಳು ಆಯ್ಕೆಯಾಗಿವೆ. ಬುಡಕಟ್ಟು ಜನಾಂಗದವರು ಸರ್ಕಾರದ ಯೋಜನೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.10 ಕೋಟಿ ಬುಡಕಟ್ಟು ಜನಾಂಗ: ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಬುಡಕಟ್ಟು ಜನಾಂಗ ಕಾಡು ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ವಾಸವಾಗುತ್ತಿದ್ದಾರೆ. ಅವರ ಭಾಷೆ, ಉಡುಗೆ- ತೊಡುಗೆ, ಕಲೆ, ಸಂಸ್ಕೃತಿ, ಪರಂಪರೆ ವಿಶೇಷವಾಗಿದೆ. ಇತಿಹಾಸ ನೋಡಿದಾಗ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಬುಡಕಟ್ಟು ಜನಾಂಗದ ಕೊಡುಗೆ ಅಪಾರವಾಗಿದೆ. ದೇಶದ ಜನಸಂಖ್ಯೆಯಲ್ಲಿ ಅಂದಾಜು 10 ಕೋಟಿಯಷ್ಟು ಬುಡಕಟ್ಟು ಹಾಗೂ ಆದಿವಾಸಿಗಳಾಗಿದ್ದಾರೆ. 705 ಬುಡಕಟ್ಟು ಗುಂಪುಗಳಿವೆ. ಇವರು ಪ್ರಾಚೀನ ಕಾಲದ ಗುಣಲಕ್ಷಣ ಹಾಗೂ ಸರಳ ಜೀವನ ಶೈಲಿ ಹೊಂದಿದ್ದಾರೆ. ಇವರು ಅರಣ್ಯ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸಿಸುವುದರಿಂದ ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಬೆಳವಣಿಗೆ ಕುಂಠಿತವಾಗಿರುತ್ತದೆ ಎಂದರು.ಕೇಂದ್ರ ಬುಡಕಟ್ಟು ಆಯೋಗದ ನಿರ್ದೇಶಕ ಶಿವಾನಂದ ಬಾಚಗುಂಡಿ ಮಾತನಾಡಿ, ಕೇಂದ್ರ ಸರ್ಕಾರ ಧರ್ತಿ ಆಬಾ ಜನಭಾಗಿದಾರ ಅಭಿಯಾನವನ್ನು ಐದು ವರ್ಷದ ಅವಧಿಗೆ ರೂಪಿಸಿದೆ. ಈ ಯೋಜನೆ ಯಶಸ್ವಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಮನ್ವಯತೆ ಅಗತ್ಯವಾಗಿದೆ. ಸರ್ಕಾರದ ಯೋಜನೆ ಪಡೆಯಲು ಮೊದಲು ಜಾತಿ ಪ್ರಮಾಣಪತ್ರದ ಅಗತ್ಯ ಇರುತ್ತದೆ. ಹಾಗಾಗಿ ಬುಡಕಟ್ಟು ಜನಾಂಗ ಅಗತ್ಯ ದಾಖಲೆಗಳನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜಾನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಚನ್ನಮ್ಮ ಬಡಣ್ಣನವರ ಅಧ್ಯಕ್ಷತೆ ವಹಿಸಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ್ವರ ಹುಬ್ಬಳ್ಳಿ, ಸಾಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಆಂಜನೇಯ ಹುಲ್ಲಾಳ, ತಾಲೂಕು ಆರೋಗ್ಯಾಧಿಕಾರಿ ಡಾ. ಪ್ರಭಾಕರ ಕುಂದೂರ, ಗ್ರಾಪಂ ಸದಸ್ಯರಾದ ಲತಾ ಉಳ್ಳಟ್ಟಿ, ಪುಟ್ಟಣ್ಣನವರ, ಬಸನಗೌಡ್ರ, ಮಲ್ಲನಗೌಡ್ರ, ಪುಟ್ಟಣ್ಣ ದುರ್ಗದ, ಸಿದ್ದಣ್ಣ ಲಮಾಣಿ, ಮಂಜು ಹೊಸಗೇರಿ ಸಣ್ಣಿಂಗಣ್ಣ ಹಾಗೂ ಸುರೇಶಗೌಡ ಪಾಟೀಲ, ವೀರೇಶ ಮತ್ತಿಹಳ್ಳಿ ಇತರರು ಉಪಸ್ಥಿತರಿದ್ದರು.
ವಿವಿಧ ಸೌಲಭ್ಯಗಳ ಜಾಗೃತಿಬುಡಕಟ್ಟು ಜನಾಂಗದವರಿಗೆ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಆಯುಷ್ಮಾನ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣಪತ್ರ, ನಿವಾಸ ಪ್ರಮಾಣ ಪತ್ರ, ಪಿಎಂ ಕಿಸಾನ್ ಕ್ರೆಡಿಟ್ ಕಾರ್ಡ್, ಜನಧನ ಬ್ಯಾಂಕ್ ಖಾತೆ, ವಿಮಾ ಹಕ್ಕುಗಳು, ಸಾಮಾಜಿಕ ಭದ್ರತಾ ಯೋಜನೆಗಳು, ವೃದ್ಧಾಪ್ಯ ಪಿಂಚಣಿ, ವಿಧವಾ ಪಿಂಚಣಿ, ದಿವ್ಯಾಂಗ ಪಿಂಚಣಿ, ಉದ್ಯೋಗ ಮತ್ತು ಜೀವನೋಪಾಯ ಯೋಜನೆಗಳು, ಪಿಎಂ ವಿಶ್ವಕರ್ಮ, ಮುದ್ರಾ ಸಾಲಗಳು ಮಹಿಳಾ ಮತ್ತು ಮಕ್ಕಳ ಕಲ್ಯಾಣ- ಪಿಎಂ ಮಾತೃವಂದನ ಯೋಜನೆ ಸೌಲಭ್ಯಗಳು, ಲಸಿಕೆಕರಣ ಕುರಿತು ಜಾಗೃತಿ ಮೂಡಿಸುವುದು ಈ ಕಾರ್ಯಕ್ರಮ ಉದ್ದೇಶವಾಗಿದೆ ಎಂದರು.