ಪ್ರಸಿದ್ಧ ಕಲಾವಿದರಿಗೆ ನೀಡುವ ಪ್ರೋತ್ಸಾಹ ಯುವ ಕಲಾವಿದರಿಗೂ ದೊರಕಲಿ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಗದಗನಗರದ ಆದರ್ಶ ಶಿಕ್ಷಣ ಸಮಿತಿ ಸುವರ್ಣ ಮಹೋತ್ಸವ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಘಗಳ ಒಕ್ಕೂಟ, ಆದರ್ಶ ಶಿಕ್ಷಣ ಸಮಿತಿಯ ಡಿ.ಎಸ್. ಕುರ್ತಕೋಟಿ ಮೆಮೋರಿಯಲ್ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಜರುಗಿದ ಗದಗ ಜಿಲ್ಲಾ ಮಟ್ಟದ ಪ್ರಸಕ್ತ ಸಾಲಿನ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಕೆ. ಪಾಟೀಲ ಚಾಲನೆ ನೀಡಿದರು.

ಜಿಲ್ಲಾ ಮಟ್ಟದ ಯುವ ಜನೋತ್ಸವಕ್ಕೆ ಸಚಿವ ಎಚ್‌.ಕೆ. ಪಾಟೀಲ್ ಚಾಲನೆಗದಗ:ನಾಡಿನ ಪ್ರಸಿದ್ಧ ಕಲಾವಿದರಿಗೆ ಸಾರ್ವಜನಿಕ ಸಮಾರಂಭಗಳಲ್ಲಿ ನೀಡುವ ಶಿಳ್ಳೆ, ಚಪ್ಪಾಳೆ, ಪ್ರೋತ್ಸಾಹವು ಸ್ಥಳೀಯ ಯುವ ಕಲಾವಿದರಿಗೂ ನೀಡುವ ಮೂಲಕ ಪ್ರೋತ್ಸಾಹಿಸುವ ಕಾರ್ಯವಾಗಲಿ ಎಂದು ರಾಜ್ಯದ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಮತ್ತು ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹೇಳಿದರು.

ನಗರದ ಆದರ್ಶ ಶಿಕ್ಷಣ ಸಮಿತಿಯ ಸುವರ್ಣ ಮಹೋತ್ಸವ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಪಂ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಯುವ ಸಂಘಗಳ ಒಕ್ಕೂಟ, ಆದರ್ಶ ಶಿಕ್ಷಣ ಸಮಿತಿಯ ಡಿ.ಎಸ್. ಕುರ್ತಕೋಟಿ ಮೆಮೋರಿಯಲ್ ಪದವಿ ಪೂರ್ವ ವಾಣಿಜ್ಯ ಮಹಾವಿದ್ಯಾಲಯ ಸಹಯೋಗದಲ್ಲಿ ಜರುಗಿದ ಗದಗ ಜಿಲ್ಲಾ ಮಟ್ಟದ ಪ್ರಸಕ್ತ ಸಾಲಿನ ಯುವ ಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಗದಗ ಜಿಲ್ಲೆಯ ವ್ಯಾಪ್ತಿಯ ಪ್ರತಿ ೧೫ ಕಿಮೀ ಅಂತರದಲ್ಲಿ ಸಾಹಿತ್ಯ, ಸಂಗೀತ , ಸಂಸ್ಕೃತಿ, ಸಂಪ್ರದಾಯ, ಕ್ರೀಡೆ ಸೇರಿದಂತೆ ವಿವಿಧ ರಂಗಗಳಲ್ಲಿ ಸಾಧನೆಗೈದ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದ ಮಹನೀಯರನ್ನು ಕಾಣಬಹುದಾಗಿದೆ. ಈ ಸಾಧನೆ ಗದಗ ಜಿಲ್ಲೆಯ ಹೆಮ್ಮೆಯ ವಿಷಯ. ಜಿಲ್ಲೆಯವರಾದ ಪಂಡಿತ ಭೀಮಸೇನ ಜೋಶಿಯವರು ಒಬ್ಬರೇ ಈವರೆಗೂ ಸಂಗೀತ ಕ್ಷೇತ್ರಕ್ಕೆ ಭಾರತ ರತ್ನ ಪಡೆದವರಾಗಿದ್ದಾರೆ ಎಂದರು.

ಯುವ ಜನೋತ್ಸವ ಕಾರ್ಯಕ್ರಮ ಉದ್ಘಾಟನೆ ಮಾಡುವುದಕ್ಕೆ ತುಂಬಾ ಸಂತೋಷವೆನಿಸುತ್ತದೆ. ಮೊನ್ನೆ ನ.೧ ರಿಂದ ೩ರ ವರೆಗೆ ನಗರದಲ್ಲಿ ನಡೆದ ಕರ್ನಾಟಕ ಸಂಭ್ರಮ ಕಾರ್ಯಕ್ರಮದಲ್ಲಿ ಯುವಜನತೆಯ ಪಾಲ್ಗೊಳ್ಳುವಿಕೆ ಮುಖ್ಯವಾಗಿತ್ತು. ಅಲ್ಲದೇ ಮೂರು ದಿನಗಳ ಕಾಲ ಸಂಜೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಾಡಿನ ಪ್ರಸಿದ್ಧ ಕಲಾವಿದರು ಕಲಾಪ್ರಕಾರಗಳಿಂದ ಅದ್ಭುತ ಕಾರ್ಯಕ್ರಮ ಮೂಡಿ ಬಂದಿತು. ಕಾರ್ಯಕ್ರಮ ಯಶಸ್ವಿಗೆ ಯುವಜನರ ಪಾಲ್ಗೊಳ್ಳುವಿಕೆ ಪ್ರಮುಖವಾಗಿತ್ತು ಎಂದರು.

ಗದಗ ಜಿಲ್ಲೆ ಕಲೆ, ಸಂಸ್ಕೃತಿ, ಪರಂಪರೆ, ಸಾಹಿತ್ಯ, ಇತಿಹಾಸ ಹಾಗೂ ಕ್ರೀಡಾ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿನ ಸಾಧನೆಯಂತೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹ ಜ್ಯೋತಿ ಹಾಗೂ ಶಕ್ತಿ ಯೋಜನೆ ಅನುಷ್ಠಾನದಲ್ಲಿ ಜಿಲ್ಲಾಡಳಿತದ ಕಾರ್ಯ ರಾಜ್ಯ ಮಟ್ಟದಲ್ಲಿಯೇ ಉತ್ತಮವಾಗಿರುವುದು ಸಂತಸ ತಂದಿದೆ ಎಂದರು.

ಇದಲ್ಲದೇ ದಸರಾ ಕ್ರೀಡಾಕೂಟದಲ್ಲಿ ಜಿಲ್ಲೆಯ ಯುವ ಪ್ರತಿಭೆಗಳು ಉತ್ತಮ ಸಾಧನೆಗೈಯುವ ಮೂಲಕ ಪದಕಗಳನ್ನು ಮುಡಿಗೇರಿಸಿಕೊಂಡಿವೆ ಹಾಗೂ ಎಸ್.ಎಂ. ಕೃಷ್ಣ ನಗರದ ಯುವಕ ನಂದಕುಮಾರ್ ಅವರು ಚೆಸ್ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟದ ಸಾಧನೆಗೈದಿದ್ದಾರೆ. ಹಾಕಿಯಲ್ಲಿ ಹರೀಶ ಮುಟಗಾರ, ಏಷಿಯನ್ ಸೈಕ್ಲಿಂಗ್ ಜ್ಯೂನಿಯರ್ಸ್‌ನಲ್ಲಿ ಪವಿತ್ರಾ ಕುರ್ತಕೋಟಿ, ಕುಸ್ತಿಯಲ್ಲಿ ಪ್ರೇಮಾ ಹುಚ್ಚಣ್ಣವರ ರಾಷ್ಟ್ರ ಮಟ್ಟದಲ್ಲಿ ಗದಗ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಇದೇ ತರಹ ಯುವಜನೋತ್ಸವ ಕಾರ್ಯಕ್ರಮದ ಮೂಲಕ ಯುವ ಕಲಾವಿದರು ಈ ವೇದಿಕೆಯಲ್ಲೂ ಸದ್ಭಳಕೆ ಮಾಡಿಕೊಳ್ಳುವ ಮೂಲಕ ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈಯುವ ಮೂಲಕ ಗದಗ ಜಿಲ್ಲೆಗೆ ಹೆಸರು ತರಬೇಕೆಂದು ಆಶಯ ವ್ಯಕ್ತಪಡಿಸಿದರು.

ವಿಪ ಸದಸ್ಯಎಸ್.ವಿ. ಸಂಕನೂರ ಮಾತನಾಡಿ, ಜಗತ್ತಿನಲ್ಲಿ ಹೆಚ್ಚು ಯುವಜನರನ್ನು ಹೊಂದಿದ ರಾಷ್ಟ್ರ ಭಾರತ. ಯುವಜನರು ಮನಸ್ಸು ಮಾಡಿದರೆ ಅಸಾಧ್ಯವೆಂಬುದು ಯಾವುದಿಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವಕರಲ್ಲಿ ಅದಮ್ಯ ಶಕ್ತಿ ಇದೆ. ಬದಲಾವಣೆಯಾಗಬೇಕಾದರೆ ಅದು ಯುವಕರಿಂದ ಸಾಧ್ಯ ಎಂದಿದ್ದಾರೆ. ಯುವಜನತೆಗೆ ಸಾಧನೆಗೈಯಲು ಅಗತ್ಯ ಪ್ರೋತ್ಸಾಹ, ಸಹಕಾರ ನೀಡಬೇಕು. ಶಿಕ್ಷಣವೆಂದರೆ ಕೇವಲ ಪಠ್ಯಕ್ಕೆ ಸೀಮಿತವಾಗದೇ ಪಠ್ಯೇತರ ಚಟುವಟಿಕೆಗಳಿಗೂ ವಿಕಸನ ಹೊಂದಬೇಕು. ದೇಶದ ಸಂಪತ್ತು ಯಾವುದೆಂದರೆ ಖನಿಜ ಸಂಪತ್ತು, ಅರಣ್ಯ ಸಂಪತ್ತು, ನೈಸರ್ಗಿಕ ಸಂಪತ್ತು ಎಂದು ಹೇಳುತ್ತೇವೆ ಅದರೊಟ್ಟಿಗೆ ಯುವ ಜನರೂ ಸಹ ದೇಶದ ಸಂಪತ್ತೆಂದು ನೋಡುವ ಮನೋಭಾವ ನಮ್ಮದಾಗಬೇಕಿದೆ. ಇತ್ತೀಚೆಗೆ ಪಾಶ್ಚಿಮಾತ್ಯ ಸಾಹಿತ್ಯದ ಪ್ರಭಾವ ಮಿತಿ ಮೀರುತ್ತಿದೆ. ದೇಶಿಯ ಸಾಹಿತ್ಯ, ಸಂಸ್ಕೃತಿ ಬೆಳೆಸುವ ಹಾಗೂ ಉಳಿಸುವ ಮನೋಭಾವನೆ ಮೈಗೂಡಿಸಿಕೊಳ್ಳಬೇಕಿದೆ ಎಂದರು.

ಈ ವೇಳೆ ಜಿಲ್ಲಾ ಯುವ ಸಂಘಗಳ ಒಕ್ಕೂಟದ ಅಧ್ಯಕ್ಷ ರವಿಕಾಂತ ಅಂಗಡಿ, ಆದರ್ಶ ಶಿಕ್ಷಣ ಸಮಿತಿ ಕಾರ್ಯದರ್ಶಿ ಗೋಡಖಿಂಡಿ, ಪ್ರಾ. ರವೀಂದ್ರ ಕುಲಕರ್ಣಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಸೇರಿದಂತೆ ಪ್ರಮುಖರು ಇದ್ದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ ಸ್ವಾಗತಿಸಿದರು. ಬಾಹುಬಲಿ ಜೈನರ ಕಾರ್ಯಕ್ರಮ ನಿರ್ವಹಿಸಿದರು.

Share this article