ಕಲಾವಿದರ ಆರ್ಥಿಕ ಅಭಿವೃದ್ಧಿಗೆ ಪ್ರತ್ಯೇಕ ಯೋಜನೆ ಬರಲಿ: ರುಕ್ಮಾಪುರ ಶ್ರೀ

KannadaprabhaNewsNetwork |  
Published : Jan 08, 2024, 01:45 AM IST
ಸುರಪುರ ನಗರದ ಅರ್ಬನ್ ಕೊ ಆಪರೇಟಿವ್ ಬ್ಯಾಂಕ್ ಆವರಣದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. | Kannada Prabha

ಸಾರಾಂಶ

ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿದ್ದ ರುಕ್ಮಾಪುರದ ಗುರು ಶಾಂತ ಮೂರ್ತಿ ಶಿವಾಚಾರ್ಯರು ಮಾತನಾಡಿದರು. ಆಧುನಿಕತೆ ಯುಗದಲ್ಲಿ ಕಲಾವಿದರ ಉಳಿವು ಅಗತ್ಯವಾಗಿದ್ದು, ಅವರ ಭವಿಷ್ಯಕ್ಕೆ ಪ್ರತ್ಯೇಕ ಯೋಜನೆ ಬೇಕು ಎಂದರು.

ಕನ್ನಡಪ್ರಭ ವಾರ್ತೆ ಸುರಪುರ

ಹಿಂದುಳಿದ ಖ್ಯಾತಿಗೆ ಒಳಗಾಗಿರುವ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಲಾವಿದರಿಗೆ ಪ್ರೋತ್ಸಾಹ ನೀಡುವ ಮತ್ತು ಆರ್ಥಿಕವಾಗಿ ಸದೃಢರನ್ನಾಗಿಸಲು ಸರ್ಕಾರ ಪ್ರತ್ಯೇಕವಾಗಿ ಯೋಜನೆ ಜಾರಿಗೆ ತರಬೇಕು. ಕಲಾವಿದರಿಗೊಂದು ಮನೆ ನೀಡಬೇಕು ಎಂದು ರುಕ್ಮಾಪುರದ ಗುರು ಶಾಂತ ಮೂರ್ತಿ ಶಿವಾಚಾರ್ಯರು ಹೇಳಿದರು.

ನಗರದ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಆವರಣದಲ್ಲಿ ಭಾನುವಾರ ಗುರು ಸೇವಾ ಸಂಸ್ಥೆ ಬಾದ್ಯಾಪುರ ಹಾಗೂ ಕನ್ನಡ ಮತ್ತು ಸಾಂಸ್ಕೃತಿಕ ಇಲಾಖೆ ಬೆಂಗಳೂರು ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಗ್ರಾಮೀಣ ಭಾಗದ ಕಲಾವಿದರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಅಂತಹ ಕಲಾವಿದರ ಶೋಧಿಸಿ ಪುರಸ್ಕರಿಸಿದರೆ ಪ್ರಶಸ್ತಿಗೆ ಗೌರವ ಬರುತ್ತದೆ ಎಂದರು. ವಿಎಸ್‌ಎಸ್ ಬ್ಯಾಂಕಿನ ಅಧ್ಯಕ್ಷ ವೆಂಕಟೇಶ ನಾಯಕ ಬೈರಿಮಡ್ಡಿ ಮಾತನಾಡಿ, ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ನಾಡು-ನುಡಿ, ಕನ್ನಡ ಭಾಷೆ ಅಭಿವೃದ್ಧಿ ಹಾಗೂ ಗಡಿ ಭಾಗದ ಕನ್ನಡಿಗರ ಮತ್ತು ಕಲಾವಿದರನ್ನು ಗುರುತಿಸಿ ಮುಖ್ಯ ವಾಹಿನಿಗೆ ತರುವ ಕೆಲಸ ಮಾಡುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಗುರು ಸೇವಾ ಸಂಸ್ಥೆಯು ಗ್ರಾಮೀಣರ ಕಲೆ ಕಲಾವಿದರನ್ನು ಹುಡುಕಿ, ಅವರ ಪ್ರತಿಭೆಗೆ ಪುರಸ್ಕಾರ ನೀಡುತ್ತಿದೆ. ಆಧುನಿಕತೆ ಹೆಚ್ಚಾದಂತೆ ಕಲಾವಿದರ ಬದುಕು ಮೂರಾಬಟ್ಟೆಯಾಗುತ್ತಿದೆ. ಆದ್ದರಿಂದ ಕಲೆ ಉಳಿಸಲು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಇರುವ ಕಲಾವಿದರು ಸರಕಾರದ ಸದುಪಯೋಗವನ್ನು ಪಡೆದುಕೊಂಡು ಉತ್ತಮ ಭವಿಷ್ಯ ನಿರ್ಮಿಸಿಕೊಳ್ಳಬೇಕು ಎಂದು ತಿಳಿಸಿದರು.

ಅಧ್ಯಕ್ಷ ಮಲ್ಲು ಬಾದ್ಯಾಪುರ ಅವರು ಸಂಸ್ಥೆ ಬೆಳೆದು ಬಂದಿರುವ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು. ವಿವಿಧ ಕ್ಷೇತ್ರದಲ್ಲಿ ಸಾಧನಗೈದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕ ಬಾಪುಗೌಡ ಪಾಟೀಲ್ ಉದ್ಘಾಟಿಸಿದರು.

ಮಾನು ಕಲಬುರಗಿ, ಸಿದ್ದಣ್ಣ ಮುಧೋಳ್, ರಾಜಶೇಖರ ಗೆಜ್ಜೆ, ಪತ್ರಕರ್ತ ಮಲ್ಲು ತಳ್ಳಳ್ಳಿ, ಸಿದ್ದನಗೌಡ ಹೆಬ್ಬಾಳ, ಬಸವರಾಜ ದೊಡ್ಡಮನಿ, ರಾಜು ದೇವರಗೋನಾಲ, ಸುಜಾತಾ ಪಂಚಾಂಗಮಠ, ಮಹೇಶ ಯಾದಗಿರಿ, ಮಲ್ಲಿಕಾರ್ಜುನ ಶೆಳ್ಳಗಿ, ಬಸವರಾಜ ದೊಡ್ಮನಿ, ಚಿಂಚೋಳಿ ಶರಣು, ಏವೂರ ಹುಲಿಯಪ್ಪ ಸೇರಿದಂತೆ ಇತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಇಂದು ಸುರಕ್ಷಿತ ಅಂತರ್ಜಾಲ ಬಳಕೆ ಅತ್ಯಗತ್ಯ: ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಎ.ಜಿ.ಕಾರಿಯಪ್ಪ
ಮನೆಯಿಂದಲೇ ನಮೂನೆ-೩ ಪಡೆಯುವ ವ್ಯವಸ್ಥೆ ಜಾರಿ; ದಾಖಲೆಗಳು ಸರಿಯಾಗಿದ್ದರೆ ಇ- ಖಾತೆ ಪಡೆಯಲು ಅವಕಾಶ