ಗದಗ: ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಕ್ರಾಂತಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅವರು ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ ನಲ್ಲಿ ಸೋಮವಾರ ಜಿಲ್ಲಾಡಳಿತ,ಜಿಪಂ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜರುಗಿದ ಶ್ರೀನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಚಂದಯ್ಯನವರ ಭಾವಚಿತ್ರಕ್ಕೆ ಪುಷ್ಪಸಮರ್ಪಿಸಿ ಮಾತನಾಡಿದರು.ಅನುಭವ ಮಂಟಪದ ಶರಣರಲ್ಲಿಯೇ ದೇವರ ಜತೆ ವಾದಕ್ಕಿಳಿದವರಲ್ಲಿ ನುಲಿಯ ಚಂದಯ್ಯನವರು ಒಬ್ಬರು, ಇದರಿಂದ ಅವರ ಗಟ್ಟಿ ಮತ್ತು ದೃಢ ವಿಶ್ವಾಸವುಳ್ಳ ಸ್ವಭಾವ ತಿಳಿದುಬರುತ್ತದೆ. ಅವರಿಗೆ ಶಿವಮೊಗ್ಗದ ಹತ್ತಿರದ ಸಾರ್ವಜನಿಕರು ಕೆರೆಯ ಉಪಯೋಗಕ್ಕೆ ನಿರಾಕರಿಸಿದಾಗ, ಸಮಾಜಕ್ಕೆ ಎದುರು ನಿಂತು ಪ್ರತ್ಯೇಕವಾದ ಬಾವಿ ಸೃಷ್ಟಿಸಿದ ಮಹಾನ್ ವ್ಯಕ್ತಿ ನುಲಿಯ ಚಂದಯ್ಯನವರು ಎಂದರು.
ಶ್ರೇಣೀಕೃತ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಹಿಂದುಳಿದ ಶ್ರೇಷ್ಠ ಶರಣರಿಗೆ ಪುರಾತನ ಕಾಲದಿಂದಲೂ ಅನ್ಯಾಯ ಆಗಿದೆ, ಮೇಲ್ವರ್ಗದವರ ಸಾಹಿತ್ಯ ಮಾತ್ರ ಪ್ರಚಲಿತವಾಗಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದ ಶರಣರ ಸಾಹಿತ್ಯ ಇಂದಿಗೂ ಲಭ್ಯವಿಲ್ಲ ಮತ್ತು ಹಿಂದುಳಿದ ಸಾಹಿತ್ಯ ಪ್ರೇರೆಪಿಸಲಿಲ್ಲ. ಹಾಗಾಗಿ ಶ್ರೇಷ್ಠ ಶರಣರ, ಮಹಾನ್ ಯೋಗಿಗಳ ಜಯಂತಿ ಆಚರಿಸುವುದಕ್ಕೆ ಸರ್ಕಾರ ಪ್ರಾರಂಭಿಸಿತು, ಈ ಮೂಲಕ ಶ್ರೇಷ್ಠ ಶಿವಶರಣರ ನಿಲುವು ಸಾಹಿತ್ಯ ಕಾಯಕಗಳನ್ನು ಅರ್ಥೈಸುವ ಕಾರ್ಯ ಆಗಲಿ ಎಂದು ತಿಳಿಸಿದರು.ಶಿಕ್ಷಕ ಶಿವಾನಂದ ಭಜಂತ್ರಿ ಮಾತನಾಡಿ, ನುಲಿಯ ಚಂದಯ್ಯ, ಬಸವಣ್ಣನವರ ಸಮಕಾಲೀನವರು, ಗುರು ಭಕ್ತಿ, ಲಿಂಗ ಜಂಗಮ ಕಾಯಕ ಸಿದ್ಧಾಂತ ಬಲವಾಗಿ ನಂಬಿದವರು, ಸಮಾಜಕ್ಕೆ ಬೆಳಕು ನೀಡುವಲ್ಲಿ ಶ್ರಮಿಸಿದವರು ಎಂದರು.
ಕಲ್ಯಾಣದ ಕ್ರಾಂತಿ ನಂತರ ಚನ್ನಬಸವಣ್ಣನವರ ಅಕ್ಕ ಶಿವಮೊಗ್ಗ ಜಿಲ್ಲೆಯ ಎತ್ತಿನ ಹೊಳೆಯಲ್ಲಿ ಅಕ್ಕ ನಾಗಮ್ಮನವರು ಲಿಂಗಕ್ಯ ಆದರು. ಧರ್ಮ ಕಾಯಕ ನಿಷ್ಠೆ ಸದಾ ಸಿದ್ಧರಾಗಿದ್ದ ಅವರು ಅರಮನೆ ವಾತಾವರಣ ಧಿಕ್ಕರಿಸಿ ಧರ್ಮ ಕಾಯಕ ದಾಸೋಹದಂತಹ ಮೌಲ್ಯ ಪ್ರಚಾರ ಮಾಡುತ್ತಾರೆ. ನುಲಿಯ ಚಂದಯ್ಯನವರು ಸರಳ ಮತ್ತು ಬಹುಮುಖ ವ್ಯಕ್ತಿತ್ವ ಹೊಂದಿದವರಾಗಿದ್ದು, ಕಾಯಕ ಅಂದರೆ ನುಲಿ ಚಂದಯ್ಯ ಎನ್ನುವಂತೆ ಹೆಸರುವಾಸಿ ಆಗಿದ್ದರು ಎಂದು ನುಲಿ ಚಂದಯ್ಯನವರ ಜೀವನ ಕುರಿತು ಉಪನ್ಯಾಸ ನೀಡಿದರು.ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಸುರೇಶ ಕಟ್ಟಿಮನಿ, ಮೋಹನ ಭಜಂತ್ರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸೇರಿದಂತೆ ಸಮಾಜದ ಗಣ್ಯರು ಇದ್ದರು.