ಗದಗ: ಮಹಾನ್ ವ್ಯಕ್ತಿಗಳ ಜಯಂತಿ ಆಚರಣೆಯ ಮೂಲಕ ಸಾಮಾಜಿಕ ಕ್ರಾಂತಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ಹೇಳಿದರು.
ಅನುಭವ ಮಂಟಪದ ಶರಣರಲ್ಲಿಯೇ ದೇವರ ಜತೆ ವಾದಕ್ಕಿಳಿದವರಲ್ಲಿ ನುಲಿಯ ಚಂದಯ್ಯನವರು ಒಬ್ಬರು, ಇದರಿಂದ ಅವರ ಗಟ್ಟಿ ಮತ್ತು ದೃಢ ವಿಶ್ವಾಸವುಳ್ಳ ಸ್ವಭಾವ ತಿಳಿದುಬರುತ್ತದೆ. ಅವರಿಗೆ ಶಿವಮೊಗ್ಗದ ಹತ್ತಿರದ ಸಾರ್ವಜನಿಕರು ಕೆರೆಯ ಉಪಯೋಗಕ್ಕೆ ನಿರಾಕರಿಸಿದಾಗ, ಸಮಾಜಕ್ಕೆ ಎದುರು ನಿಂತು ಪ್ರತ್ಯೇಕವಾದ ಬಾವಿ ಸೃಷ್ಟಿಸಿದ ಮಹಾನ್ ವ್ಯಕ್ತಿ ನುಲಿಯ ಚಂದಯ್ಯನವರು ಎಂದರು.
ಶ್ರೇಣೀಕೃತ ವ್ಯವಸ್ಥೆಯಲ್ಲಿ ಸಾಮಾಜಿಕವಾಗಿ ಹಿಂದುಳಿದ ಶ್ರೇಷ್ಠ ಶರಣರಿಗೆ ಪುರಾತನ ಕಾಲದಿಂದಲೂ ಅನ್ಯಾಯ ಆಗಿದೆ, ಮೇಲ್ವರ್ಗದವರ ಸಾಹಿತ್ಯ ಮಾತ್ರ ಪ್ರಚಲಿತವಾಗಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದ ಶರಣರ ಸಾಹಿತ್ಯ ಇಂದಿಗೂ ಲಭ್ಯವಿಲ್ಲ ಮತ್ತು ಹಿಂದುಳಿದ ಸಾಹಿತ್ಯ ಪ್ರೇರೆಪಿಸಲಿಲ್ಲ. ಹಾಗಾಗಿ ಶ್ರೇಷ್ಠ ಶರಣರ, ಮಹಾನ್ ಯೋಗಿಗಳ ಜಯಂತಿ ಆಚರಿಸುವುದಕ್ಕೆ ಸರ್ಕಾರ ಪ್ರಾರಂಭಿಸಿತು, ಈ ಮೂಲಕ ಶ್ರೇಷ್ಠ ಶಿವಶರಣರ ನಿಲುವು ಸಾಹಿತ್ಯ ಕಾಯಕಗಳನ್ನು ಅರ್ಥೈಸುವ ಕಾರ್ಯ ಆಗಲಿ ಎಂದು ತಿಳಿಸಿದರು.ಶಿಕ್ಷಕ ಶಿವಾನಂದ ಭಜಂತ್ರಿ ಮಾತನಾಡಿ, ನುಲಿಯ ಚಂದಯ್ಯ, ಬಸವಣ್ಣನವರ ಸಮಕಾಲೀನವರು, ಗುರು ಭಕ್ತಿ, ಲಿಂಗ ಜಂಗಮ ಕಾಯಕ ಸಿದ್ಧಾಂತ ಬಲವಾಗಿ ನಂಬಿದವರು, ಸಮಾಜಕ್ಕೆ ಬೆಳಕು ನೀಡುವಲ್ಲಿ ಶ್ರಮಿಸಿದವರು ಎಂದರು.
ಈ ವೇಳೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಜಿ, ಸುರೇಶ ಕಟ್ಟಿಮನಿ, ಮೋಹನ ಭಜಂತ್ರಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಂ.ಬಿ. ಸಂಕದ, ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ.ಎಂ., ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಸೇರಿದಂತೆ ಸಮಾಜದ ಗಣ್ಯರು ಇದ್ದರು.