ಲಾಳಗೊಂಡ ಸಮುದಾಯ ಐತಿಹ್ಯ ಕುರಿತು ಪೂರಕ ಸಂಶೋಧನೆಗಳಾಗಲಿ: ಅಲ್ಲಂ ವೀರಭದ್ರಪ್ಪ

KannadaprabhaNewsNetwork | Published : Jun 22, 2025 1:18 AM

ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಲಾಳಗೊಂಡರ ಸಂಘದ ವತಿಯಿಂದ ಬಳ್ಳಾರಿಯ ಬಸವಭವನದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ವಿದ್ಯಾರ್ಥಿ ಶೈಕ್ಷಣಿಕ ಪ್ರೋತ್ಸಾಹ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮಾಜಿ ಸಚಿವ ಹಾಗೂ ವೀರಶೈವ ಲಿಂಗಾಯತ ಸಮಾಜದ ಹಿರಿಯ ಧುರೀಣ ಅಲ್ಲಂ ವೀರಭದ್ರಪ್ಪ ಚಾಲನೆ ನೀಡಿದರು.

ಬಳ್ಳಾರಿ: ವೀರಶೈವ ಲಿಂಗಾಯತ ಸಮಾಜದ ಒಳ ಪಂಗಡವಾದ ಲಾಳಗೊಂಡರ ಐತಿಹ್ಯ ತಿಳಿಯಲು ಪೂರಕ ಸಂಶೋಧನೆ ಅಗತ್ಯವಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲು ಸರ್ಕಾರಕ್ಕೆ ಮನವಿ ಮಾಡಲಾಗುವುದು. ಮುಖ್ಯಮಂತ್ರಿಗಳ ಬಳಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಮಾಜಿ ಸಚಿವ ಹಾಗೂ ವೀರಶೈವ ಲಿಂಗಾಯತ ಸಮಾಜದ ಹಿರಿಯ ಧುರೀಣ ಅಲ್ಲಂ ವೀರಭದ್ರಪ್ಪ ಭರವಸೆ ನೀಡಿದರು.ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಲಾಳಗೊಂಡರ ಸಂಘದ ವತಿಯಿಂದ ಬಸವಭವನದಲ್ಲಿ ಏರ್ಪಡಿಸಿದ್ದ 2024-25ನೇ ಸಾಲಿನ ವಿದ್ಯಾರ್ಥಿ ಶೈಕ್ಷಣಿಕ ಪ್ರೋತ್ಸಾಹ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯ ಒಗ್ಗಟ್ಟು ಕಾಯ್ದುಕೊಳ್ಳಬೇಕು. ನಾವು ಎಲ್ಲರೂ ಒಂದೇ ಭಾವನೆಯಿಂದ ಸಂಘಟಿತರಾದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಪಡೆದುಕೊಂಡು ಮುನ್ನಲೆಗೆ ಬರಲು ಸಾಧ್ಯವಾಗಲಿದೆ ಎಂದು ಹೇಳಿದರು.ಜಾತಿ ಕಾಲಂನಲ್ಲಿ ವೀರಶೈವ ಲಿಂಗಾಯತ ಲಾಳಗೊಂಡ ಎಂದು ಸೇರ್ಪಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿ ಲಾಳಗೊಂಡ ಎಂಬುದನ್ನು ಸೇರಿಸಬೇಕು. ಇದಕ್ಕೆ ನಾನು ಸಹ ಸಾಥ್ ನೀಡಲು ಸಿದ್ಧನಿದ್ದು, ಮುಖ್ಯಮಂತ್ರಿ ಬಳಿ ನಿಯೋಗ ತೆರಳಿ ಮನವಿ ಮಾಡೋಣ ಎಂದು ಸಲಹೆ ನೀಡಿದರು.ಹಿರಿಯ ಲೆಕ್ಕಪರಿಶೋಧಕ ಸಿರಿಗೇರಿ ಪನ್ನರಾಜ್ ಮಾತನಾಡಿ, ಲಾಳಗೊಂಡ ಸಮುದಾಯ ಅಸ್ಮಿತೆ ಕಂಡುಕೊಳ್ಳಲು ಗೆಜೆಟ್‌ನಲ್ಲಿ ಲಾಳಗೊಂಡ ಎಂದು ಸೇರ್ಪಡೆಗೊಳ್ಳಬೇಕು. ದಶಕದ ಹೋರಾಟದ ಬಳಿಕವೂ ಲಾಳಗೊಂಡ ಎಂದು ಸೇರ್ಪಡೆಗೊಂಡಿಲ್ಲ. ಸರ್ಕಾರದ ಹಂತದಲ್ಲಿ ಈ ಕೆಲಸವಾಗಬೇಕಿದ್ದು, ಸಮಾಜದ ಮುಖಂಡರು ಈ ನೆಲೆಯಲ್ಲಿ ಕಾರ್ಯೋನ್ಮುಖರಾಗಬೇಕು. ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳಿಗೆ ಸಂಘಟನೆ ಸೀಮಿತಗೊಳಿಸಿಕೊಳ್ಳದೆ, ವೀರಶೈವ ಲಿಂಗಾಯತ ವಿದ್ಯಾರ್ಥಿಗಳು ಸರ್ಕಾರ ಮಟ್ಟದಲ್ಲಿ ದೊಡ್ಡ ಹುದ್ದೆಗಳನ್ನು ಪಡೆಯಲು ಸೂಕ್ತ ತರಬೇತಿ ಹಾಗೂ ಮಾರ್ಗದರ್ಶನ ನೀಡುವಂತಾಗಬೇಕು ಎಂದು ಹೇಳಿದರು.ನೀರಾವರಿ ಇಲಾಖೆಯ ಜಂಟಿ ಕಾರ್ಯದರ್ಶಿ ಮೇಲುಸೀಮೆ ಪೊಂಪನಗೌಡ ಮಾತನಾಡಿ, ಲಾಳಗೊಂಡ ವಿದ್ಯಾರ್ಥಿಗಳಿಗಾಗಿ ಕೋಚಿಂಗ್ ಕೇಂದ್ರಗಳನ್ನು ಆರಂಭಿಸಬೇಕು. ವಿದ್ಯಾರ್ಥಿಗಳಿಗೆ ವಸತಿ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ಉನ್ನತ ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿ ನೆರವು ನೀಡುವ ಕೆಲಸ ಸಮುದಾಯದ ಗಣ್ಯರು ಮಾಡಬೇಕು ಎಂದು ಮನವಿ ಮಾಡಿದರು.ಪ್ರಾಸ್ತಾವಿಕ ಮಾತನಾಡಿದ ಪತ್ರಕರ್ತ ಶಶಿಧರ ಮೇಟಿ ಅವರು, ಲಾಳಗೊಂಡ ಸಮುದಾಯದ ಹಿನ್ನೆಲೆ, ಶೈಕ್ಷಣಿಕ ಹಾಗೂ ರಾಜಕೀಯ ಹಿನ್ನಡೆಯ ಪರಿಣಾಮಗಳು, ವಿದ್ಯಾರ್ಥಿಗಳ ಭವಿಷ್ಯದ ನೆಲೆಯಲ್ಲಿ ಸಮುದಾಯ ಮುಖಂಡರ ಜವಾಬ್ದಾರಿಗಳು ಕುರಿತು ತಿಳಿಸಿದರು.ರಾಯಚೂರು ಜಿಲ್ಲೆಯ ಮಿಟ್ಟೆ ಮಲ್ಕಾಪುರದ ಶಾಂತಾಶ್ರಮದ ಶ್ರೀ ನಿಜಾನಂದ ಮಹಾಸ್ವಾಮಿಗಳು ಮತ್ತು ಹರಗಿನಡೋಣಿ ಹಿರೇಮಠದ ಅಭಿನವ ಸಿದ್ದಲಿಂಗ ಮಹಾಸ್ವಾಮಿ ಸಾನ್ನಿಧ್ಯವಹಿಸಿದ್ದರು.ಅಖಿಲ ಕರ್ನಾಟಕ ವೀರಶೈವ ಲಿಂಗಾಯತ ಲಾಳಗೊಂಡರ ಸಂಘದ ರಾಜ್ಯಾಧ್ಯಕ್ಷ ಅರವಿ ಬಸವನಗೌಡ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ, ಕೃಷಿ ಪರಿಕರ ಮಾರಾಟಗಾರರ ಸಂಘದ ಜಿಲ್ಲಾಧ್ಯಕ್ಷ ಎಚ್. ತಿಮ್ಮನಗೌಡ, ಅಖಿಲ ಕರ್ನಾಟಕ ಲಾಳಗೊಂಡರ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಗೌಡ, ಕಾಂಗ್ರೆಸ್ ಬ್ಲಾಕ್ ಸಮಿತಿ ಅಧ್ಯಕ್ಷ ಮೀನಳ್ಳಿ ಚಂದ್ರಶೇಖರ, ಗುತ್ತಿಗೆದಾರ ಮಸೀದಿಪುರ ಸಿದ್ದರಾಮನಗೌಡ, ಸತ್ಸಂಗ ಸೇವೆಯ ಪಲ್ಲೇದ ಪಂಪಾಪತಿ, ಲೆಕ್ಕಪರಿಶೋಧಕ ಸಿದ್ಧರಾಮೇಶ್ವರಗೌಡ ಕರೂರು, ಕೋಟೆ ನಾಗರಾಜ, ಇಬ್ರಾಹಿಂಪುರ ವೀರನಗೌಡ, ಸಿರಿಗೇರಿ ಮಹಾರುದ್ರಗೌಡ, ಬಾಳನಗೌಡ ಚೇಳ್ಳಗುರ್ಕಿ, ಶಿವಶಂಕರಗೌಡ, ಉಡೇದ ಸುರೇಶ ಉಪಸ್ಥಿತರಿದ್ದರು.ಎಸ್‌ಎಸ್‌ಎಲ್‌ಸಿಯಲ್ಲಿ ಪಾಸಾದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಯಲ್ಲನಗೌಡ ಶಂಕರಬಂಡೆ ಹಾಗೂ ಜಡೇಶ್ ಎಮ್ಮಿಗನೂರು ತಂಡದವರು ನಾಡಗೀತೆ ಹಾಗೂ ವಚನಗಳನ್ನು ಪ್ರಸ್ತುತಪಡಿಸಿದರು. ಶರಣು ಹಾಗೂ ಎಂ. ವಿನೋದ್ ಕಾರ್ಯಕ್ರಮ ನಿರ್ವಹಿಸಿದರು.ಕಾರ್ಯಕ್ರಮ ಮುನ್ನ ದಾಸೋಹಿ‌ ಶಿವಶರಣೆ ಸಿಂಧಿಗೇರಿ ನಿಲಮ್ಮವ್ವ ಜ್ಯೋತಿ ಮೆರವಣಿಗೆ ಜರುಗಿತು. ಮೆರವಣಿಗೆಯು ಎಸ್ಪಿ ವೃತ್ತದಿಂದ ಸಮಾರಂಭ ಜರುಗುವ ಬಸವಭವನಕ್ಕೆ ಆಗಮಿಸಿತು.