ಸಂಸ್ಕಾರ, ದೇಶಪ್ರೇಮ ಜಾಗೃತಿಯಾಗಲಿ

KannadaprabhaNewsNetwork |  
Published : Jan 08, 2026, 01:15 AM IST
ಿ್ಿ್ಿ್ಿ್ | Kannada Prabha

ಸಾರಾಂಶ

ಹಿಂದೂ ಸಮಾಜೋತ್ಸವ ಸಮಿತಿ ನಗರದ ವಿವಿಧ ಬಡಾವಣೆಗಳಲ್ಲಿ ದಿ.18ರಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸಮಿತಿಯ ಗೌರವಾಧ್ಯಕ್ಷರೂ ಆದ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಹಿಂದೂ ಸಮಾಜೋತ್ಸವ ಸಮಿತಿ ನಗರದ ವಿವಿಧ ಬಡಾವಣೆಗಳಲ್ಲಿ ದಿ.18ರಿಂದ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕಾರ್ಯಕ್ರಮಗಳಲ್ಲಿ ಎಲ್ಲರೂ ಭಾಗಿಯಾಗಬೇಕು ಎಂದು ಸಮಿತಿಯ ಗೌರವಾಧ್ಯಕ್ಷರೂ ಆದ ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ಬುಧವಾರ ಸಿದ್ಧಗಂಗಾ ಮಠದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿ, ಎಲ್ಲರೂ ಚೆನ್ನಾಗಿರಬೇಕು ಎಂಬ ಭಾವನೆ ಭಾರತೀಯರದ್ದು, ಜಗತ್ತಿಗೆ ಹಿತ ಬಯಸುವವರು ಯಾರಾದರೂ ಇದ್ದರೆ ಅವರು ಭಾರತೀಯರು ಮಾತ್ರ. ಈ ನಿಟ್ಟಿನಲ್ಲಿ ನಮ್ಮ ಸಂಸ್ಕಾರ, ಸಂಸ್ಕೃತಿ, ಆಚಾರ, ವಿಚಾರ, ದೇಶಪ್ರೇಮ, ಪರಿಸರ ಪ್ರೇಮ, ನಾಗರಿಕ ಶಿಷ್ಟಾಚಾರಗಳನ್ನು ಅನುಸರಿಸುವ ಸಂಬಂಧ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶ ಚೆನ್ನಾಗಿರಬೇಕು ಎಂದರೆ ಕುಟುಂಬ ಚೆನ್ನಾಗಿರಬೇಕು. ಇಂದು ಕುಟುಂಬ ವ್ಯವಸ್ಥೆ ಶಿಥಿಲವಾಗುತ್ತಿದೆ. ಕುಟುಂಬಗಳಲ್ಲೇ ಸಹಕಾರವಿಲ್ಲ, ಶಾಂತಿ, ನೆಮ್ಮದಿಯಿಲ್ಲ, ಇರುವ ನಾಲ್ಕು ಜನರೇ ನಾಲ್ಕು ಮುಖಗಳಾಗಿ ಕುಳಿತುಕೊಳ್ಳುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ, ದೇಶ ಸರಿಹೋಗಬೇಕು ಎಂದರೆ ಮೊದಲು ಕುಟುಂಬ ಸರಿಯಾಗಬೇಕು. ಕುಟುಂಬ ಸರಿಯಾದರೆ ಸಮಾಜ ಸರಿಯಾಗುತ್ತದೆ. ದೇಶವೂ ಸರಿಯಾಗುತ್ತದೆ. ಅದಕ್ಕಾಗಿಯೇ ಹಿಂದೂ ಸಮಾಜೋತ್ಸವ ಸಮಿತಿ ಬಡಾವಣೆಗಳಲ್ಲಿ ಮಕ್ಕಳಿಂದ ಹಿರಿಯರವರೆಗೆ ಜಾಗೃತಿ ಉಂಟು ಮಾಡುವಂತಹ ಕಾರ್ಯಕ್ರಮ ಹಾಕಿಕೊಂಡಿದೆ ಎಂದರು.

ಅವರು ಯಾವುದೇ ಜಾತಿ, ಯಾವುದೇ ಧಾರ್ಮಿಕ ಆಚರಣೆ ಅನುಸರಿಸುತ್ತಿರಬಹುದು. ಆದರೆ ಸಂಘಟಿತರಾಗಿ ನಾವೆಲ್ಲಾ ಭಾರತೀಯರಾಗಿ ಒಂದು ಎನ್ನುವ ಭಾವನೆಯನ್ನು ಮೂಡಿಸುವ ಕೆಲಸ ಆಗಬೇಕಾಗಿದೆ. ಹಿಂದೂಗಳಲ್ಲೇ ಹಲವಾರು ಆಚರಣೆಗಳಿಗೆ ನಂಬಿಕೆಗಳು, ಶ್ರದ್ಧಾ ಕೇಂದ್ರಗಳು, ಆಚರಣೆಗಳು ಬೇರೆಬೇರೆ ಇವೆ. ಆದರೆ ಅವರೆಲ್ಲರೂ ಭಾರತೀಯರಾಗಿ ಭಾವೈಕ್ಯತೆಯಿಂದ ಬದುಕಬೇಕು ಎಂಬುದು ಮುಖ್ಯವಾಗಿದೆ. ಸಾಮಾಜಿಕ, ಪರಿಸರ ಕಳಕಳಿ, ನಾಗರಿಕ ಪ್ರಜ್ಞೆ, ಕಾನೂನು ಪಾಲನೆಯಂತಹ ಶಿಷ್ಟಾಚಾರವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಕಾನೂನು ಮುರಿಯುವಂತಹವರು ಇಂದು ಜಾಸ್ತಿಯಾಗುತ್ತಿದ್ದಾರೆ. ಪಾಲನೆ ಮಾಡುವವರು ಕಡಿಮೆಯಾಗುತ್ತಿದ್ದಾರೆ. ಕಾನೂನನ್ನು ರೂಪಿಸುವುದು ದೊಡ್ಡದಲ್ಲ, ಪಾಲಿಸುವುದು ಅತ್ಯಂತ ಮುಖ್ಯವಾದದ್ದು, ಆ ಹಿನ್ನೆಲೆಯಲ್ಲಿ ಜಾಗೃತಿ ಉಂಟುಮಾಡಬೇಕು ಎಂದು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಿದ್ಧಲಿಂಗಸ್ವಾಮೀಜಿ ಹೇಳಿದರು. ಸಮಿತಿ ಅಧ್ಯಕ್ಷ ಎಚ್.ಜಿ.ಚಂದ್ರಶೇಖರ್ ಮಾತನಾಡಿ, ಹಿಂದೂಗಳು ಒಗ್ಗೂಡಿದಾಗ ದೇಶಕ್ಕೆ ಭವಿಷ್ಯವಿದೆ. ಸಮಾಜದಲ್ಲಿ ಒಗ್ಗಟ್ಟು ಇದ್ದರೆ ದೇಶ ಸದೃಢವಾಗಿ, ಸುಭದ್ರವಾಗಿರುತ್ತದೆ. ಸಮಾಜ, ದೇಶ ನಿರ್ಮಾಣದ ಚಿಂತನೆ, ಹಿಂದೂ ಸಾಂಸ್ಕೃತಿಕ ಮೌಲ್ಯಗಳ ಜಾಗೃತಿಗಾಗಿ ಈ ತಿಂಗಳ 18 ರಿಂದ ನಗರದ ಎಲ್ಲಾ ವಸತಿ ಬಡಾವಣೆಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿ ಹಿಂದೂ ಸಮಾಜೋತ್ಸವಗಳನ್ನು ಆಯೋಜಿಸಲಾಗುತ್ತಿದೆ ಎಂದರು.ಸಮಾಜದ ನಡುವೆ ಒಡಕು ಮೂಡಿಸುವ ಹುನ್ನಾರ, ಅಸಮಾನತೆ, ಅಧಾರ್ಮಿಕ ಮನೋಭಾವ ಹಾಗೂ ಅಪಸ್ವರಗಳನ್ನು ಹೋಗಲಾಡಿಸಿ ಸದೃಢ ಸಮಾಜ ನಿರ್ಮಿಸುವ ಅನಿವಾರ್ಯತೆ ಈಗ ಬಂದಿದೆ. ನೆಲ, ಜಲ, ಹಸಿರು ಮುಂತಾದ ಸಂಪನ್ಮೂಲಗಳನ್ನು ಸಂರಕ್ಷಿಸುವ ಮೂಲಕ ಭೂಮಿಯ ಮೇಲೆ ನೆಮ್ಮದಿಯಿಂದ ಬದುಕುವ ವಾತಾವರಣವನ್ನು ಕಲ್ಪಿಸಲು ಪರಿಸರ ಸಂರಕ್ಷಣೆ ಮಾಡಬೇಕಾಗಿದ್ದು, ಮುಂದಿನ ಜನಾಂಗದಲ್ಲಿ ಸಮಾಜಮುಖಿ ಮನೋಭಾವ ಮೂಡಿಸಲು ಈ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ