ಕನ್ನಡಪ್ರಭ ವಾರ್ತೆ ನಂಜನಗೂಡು
1975ರಲ್ಲಿ ಪ್ರಧಾನಿ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ದೇಶದಲ್ಲಿ ನಾಗರಿಕರು ಹೇಗೆ ಸಂಕಷ್ಟ ಎದುರಿಸಿದರು ಎಂಬುದನ್ನು ಇಂದಿನ ತಲೆಮಾರಿಗೆ ತಿಳಿಸುವ ಉದ್ದೇಶದಿಂದ ಬಿಜೆಪಿ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ 50 ವರ್ಷ ಕಾರ್ಯಕ್ರಮ ರೂಪಿಸಲಾಗಿದೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಉಪಾಧ್ಯಕ್ಷ ಎನ್. ಮಹೇಶ್ ಹೇಳಿದರು.ತಾಲೂಕಿನ ಹದಿನಾರು ಗ್ರಾಮದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಬಿಜೆಪಿಯಿಂದ ಏರ್ಪಡಿಸಿದ್ದ ತುರ್ತು ಪರಿಸ್ಥಿತಿ ಹೇರಿದ ಕಾಂಗ್ರೆಸ್ ಕರಾಳ ಇತಿಹಾಸಕ್ಕೆ ಐವತ್ತು ವರ್ಷ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ದೇಶದಲ್ಲಿ ಆಂತರಿಕ ಕ್ಷೋಭೆ, ಯುದ್ಧದ ಭೀತಿ, ಆರ್ಥಿಕ ಸಂಕಷ್ಟದ ಪರಿಸ್ಥಿತಿಯಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವ ಅಧಿಕಾರ ರಾಷ್ಟ್ರಪತಿಗಿದೆ, ಆದರೆ 1971ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದ ರಾಯಭರೇಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಇಂದಿರಾ ಗಾಂಧಿ ರವರು ವಾಮ ಮಾರ್ಗದಿಂದ ಚುನಾವಣೆಯಲ್ಲಿ ಗೆದ್ದಿದ್ದನ್ನು ಪ್ರಶ್ನಿಸಿ ರಾಜನಾರಾಯಣರವರು ಅಲಹಾಬಾದ್ ಕೋರ್ಟ್ ನಲ್ಲಿ ದೂರು ದಾಖಲಿಸಿದ ಪರಿಣಾಮ ಇಂದಿರಾಗಾಂಧಿ ಅವರ ಲೋಕಸಭಾ ಸದಸ್ಯತ್ವ ಅಸಿಂಧು ಎಂದು ನ್ಯಾಯಾಲಯದ ತೀರ್ಪು ಬಂದ ಹಿನ್ನೆಲೆ ತಮ್ಮ ಅಧಿಕಾರವನ್ನು ಉಳಿಸಿಕೊಳ್ಳಲು ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಕಗ್ಗೊಲೆ ನಡೆಸಿ ತುರ್ತು ಪರಿಸ್ಥಿತಿ ಹೇರಲಾಯಿತು, ಆದರೂ ಅವರಿಗೆ ಸಮಾಧಾನವಾಗಲಿಲ್ಲ, ತುರ್ತು ಪರಿಸ್ಥಿತಿಯನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸುವ ಮತ್ತು ರದ್ದುಗೊಳಿಸುವ ಭಯದಿಂದ ಸಂವಿಧಾನಕ್ಕೆ 38, 39 ಮತ್ತು 40ನೇ ತಿದ್ದುಪಡಿ ತಂದು ಅಂಬೇಡ್ಕರ್ ಮೂಲ ಸಂವಿಧಾನದ ಆಶಯವನ್ನು ಮಣ್ಣು ಪಾಲು ಮಾಡಿದರು ಎಂದು ಅವರು ತಿಳಿಸಿದರು.ಸುಮಾರು 1.10 ಲಕ್ಷ ಜನರನ್ನು, 353 ಜನ ಪತ್ರಕರ್ತರನ್ನು ಜೈಲಿಗಟ್ಟಲಾಯಿತು, ಜನರ ಅಭಿವ್ಯಕ್ತಿ ಸ್ವಾತಂತ್ರ್ಯ, ಮಾನವ ಹಕ್ಕುಗಳ ನಾಶ, ಸಂವಿಧಾನವನ್ನು ಕಗ್ಗೊಲೆ ಮಾಡಿದ ಕಾಂಗ್ರೆಸ್ ಹಾಗೂ ರಾಹುಲ್ ಗಾಂಧಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವ ನೈತಿಕತೆ ಇದೆಯೇ? ಎಂದು ಮೂದಲಿಸಿದರು.
ಮಾಜಿ ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕಾಂಗ್ರೆಸ್ ಸರ್ಕಾರ ತುರ್ತು ಪರಿಸ್ಥಿತಿ ಹೇರಿ ದೇಶದಲ್ಲಿ ಕರಾಳ ಇತಿಹಾಸವನ್ನು ಸೃಷ್ಟಿಸಿದ್ದಲ್ಲದೆ, ಸಂವಿಧಾನ ತಿದ್ದುಪಡಿಯ ಮೂಲಕ ಅಂಬೇಡ್ಕರ್ ಅವರ ಮೂಲ ಸಂವಿಧಾನದ ಆಶಯಗಳನ್ನು ಹಂತವಾಗಿ ಕಗ್ಗೊಲೆ ನಡೆಸಿ ನಾಗರಿಕ ಹಕ್ಕುಗಳನ್ನು ಸಂಪೂರ್ಣವಾಗಿ ಕಿತ್ತುಕೊಂಡರು, ಆದರೆ ಆರ್.ಎಸ್.ಎಸ್ ಈ ಬಗ್ಗೆ ದೇಶದಲ್ಲಿ ಅತ್ಯಂತ ದೊಡ್ಡ ಆಂದೋಲನ ರೂಪಿಸಿ ಸಾವಿರಾರು ಜನ ಜೈಲು ಪಾಲಾಗಿ, ಹೋರಾಟ ನಡೆಸಿದ ಪರಿಣಾಮ 1988ರಲ್ಲಿ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಿದ್ದ ಸಂವಿಧಾನದ ಎಲ್ಲ ನಿರ್ಣಯಗಳನ್ನು ರದ್ದುಪಡಿಸಿ, ಡಾ.ಬಿ.ಆರ್. ಅಂಬೇಡ್ಕರ್ ಅವರ ಮೂಲ ಸಂವಿಧಾನವನ್ನು ಪುನಃ ಸ್ಥಾಪನೆ ಮಾಡಿದ ಕೀರ್ತಿ ಆರ್.ಎಸ್.ಎಸ್. ಗೆ ಸಲ್ಲುತ್ತದೆ ಎಂದು ತಿಳಿಸಿದರು.ಸಿದ್ದರಾಮಯ್ಯನವರ ಕೊಡುಗೆ ಶೂನ್ಯ
ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಕೊಡುಗೆ ಶೂನ್ಯ, ಯಾವ ಹೋರಾಟದಲ್ಲೂ ಭಾಗವಹಿಸದೆ ಶೋಕಿ ವಾಲನಾಗಿ, ಹಬ್ಬ, ಬೀಗರೂಟದ ಬಾಡೂಟಗಳಲ್ಲಿ ಭಾಗವಹಿಸಿದ್ದರು, ಈಗ ಸಂವಿಧಾನದ ಬಗ್ಗೆ ದೊಡ್ಡ ಭಾಷಣ ಬಿಗಿಯುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಮಾಜಿ ಶಾಸಕ ಬಿ. ಹರ್ಷವರ್ಧನ್ ಮಾತನಾಡಿ, ಬಿಜೆಪಿ ಅಧಿಕಾರಕ್ಕೆ ಬಂದಲ್ಲಿ ಸಂವಿಧಾನವನ್ನು ಬದಲಾಯಿಸುತ್ತಾರೆ ಎಂದು ಆರೋಪಿಸುವ ಕಾಂಗ್ರೆಸ್ ತುರ್ತು ಪರಿಸ್ಥಿತಿ ಏರಿಕೆ ಮಾಡಿ ಸಂವಿಧಾನಕ್ಕೆ ಅತಿ ಹೆಚ್ಚು ತಿದ್ದುಪಡಿ ತಂದು ಸಂವಿಧಾನವನ್ನು ನಾಶಪಡಿಸಿದೆ, ಪ್ರಧಾನಿ ಮೋದಿ ಅವರು ಅಂಬೇಡ್ಕರ್ ಅವರ ಸಂವಿಧಾನಕ್ಕೆ ಶಕ್ತಿ ತುಂಬುವಂತ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಜನರು ಅರಿಯಬೇಕು ಎಂದರು.
ಮೈಸೂರು ಗ್ರಾಮಾಂತರ ಬಿಜೆಪಿ ಅಧ್ಯಕ್ಷ ಕುಂಬ್ರಹಳ್ಳಿ ಸುಬ್ಬಣ್ಣ ಮಾತನಾಡಿ, ಸಂವಿಧಾನದ ಪುಸ್ತಕವನ್ನಿಟ್ಟುಕೊಂಡು ಭಾಷಣ ಬಿಗಿಯುವ ಸಿದ್ದರಾಮಯ್ಯ ಅವರ ಸ್ವಂತ ಕ್ಷೇತ್ರ ವರುಣದಲ್ಲಿ ಹಾಗೂ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರ ಸ್ವಂತ ಗ್ರಾಮದಲ್ಲಿ ಕಾಂಗ್ರೆಸ್ ಕರಾಳ ಇತಿಹಾಸವನ್ನು ಜನರ ಮುಂದೆ ಬಿಚ್ಚಿಡಲಾಗುತ್ತಿದೆ, ಮುಂದೆ ಇಂತಹ ಕರಾಳ ಇತಿಹಾಸ ಮರುಕಳಿಸಬಾರದು ಎಂಬ ಸದುದ್ದೇಶದಿಂದ ಬಿಜೆಪಿ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಸಮಾರಂಭದಲ್ಲಿ ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ ಹೋರಾಟಗಾರರನ್ನು ಸನ್ಮಾನಿಸಿಸಲಾಯಿತು.
ವರುಣ ಕ್ಷೇತ್ರದ ಬಿಜೆಪಿ ಮಂಡಲ ಅಧ್ಯಕ್ಷ ನಗರ್ಲೆ ಮಹದೇವಸ್ವಾಮಿ, ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮ ಮಾಜಿ ಅಧ್ಯಕ್ಷ ಎಸ್. ಮಹದೇವಯ್ಯ, ಖಾದಿ ಮತ್ತು ಗ್ರಾಮೋದ್ಯೋಗ ಮಂಡಳಿ ಮಾಜಿ ಅಧ್ಯಕ್ಷ ಎನ್ .ಆರ್. ಕೃಷ್ಣಪ್ಪಗೌಡ, ಮೈಸೂರು ಸಹಕಾರ ಬ್ಯಾಂಕ್ ನಿರ್ದೇಶಕ ಸದಾನಂದ, ಜಿಪಂ ಮಾಜಿ ಸದಸ್ಯರಾದ ಮಂಗಳಾ ಸೋಮಶೇಖರ್, ಡಾ.ಶಿವರಾಮು, ಗುರುಸ್ವಾಮಿ, ಮುಖಂಡರಾದ ಡಾ. ರೇವಣ್ಣ, ಪ್ರಪುಲ್ಲಾ ಮಲ್ನಾಡಿ, ಬಾಲಚಂದ್ರ, ವಿನಯ್ ಕುಮಾರ್, ಕಣೆನೂರು ಪರಶಿವಮೂರ್ತಿ, ಹುಲ್ಲಹಳ್ಳಿ ಮೋಹನ್, ಹೊರಗಡೆ ಪಿ. ಮಹೇಶ್, ವಳಗೆರೆ ಪುಟ್ಟಸ್ವಾಮಿ, ಅರುಣ್, ಉಮೇಶ್ ಮೋದಿ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಾಮ್ರಾಟ್ ಸುಂದರೇಶ್, ಪ್ರಧಾನ ಕಾರ್ಯದರ್ಶಿ ಮಧುರಾಜ್, ತಾಪಂ ಮಾಜಿ ಸದಸ್ಯ ಸಿ.ಎಂ. ಮಹದೇವಯ್ಯ, ನಂಜನಗೂಡು ಮಂಡಲ ಅಧ್ಯಕ್ಷ ಕೆಂಡಗಣ್ಣಪ್ಪ, ನಗರ ಮಂಡಲ ಅಧ್ಯಕ್ಷ ಸಿದ್ದರಾಜು, ಮೈಸೂರು ಜಿಲ್ಲಾ ಗ್ರಾಮಂತರ ಮಹಿಳಾ ಮೋರ್ಚಾ ಅಧ್ಯಕ್ಷೆ ನಳಿನಿಗೌಡ ಇದ್ದರು.