ಗದಗ: ಅವಳಿ ನಗರದ ಎಲ್ಲ ಗಜಾನನ ಮಂಡಳಿಗಳು ಒಗ್ಗಟ್ಟಿನಿಂದ ಗಣೇಶೋತ್ಸವವನ್ನು ವಿಜೃಂಭಣೆ, ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು ಎಂದು ಸಾರ್ವಜನಿಕ ಶ್ರೀಗಜಾನನ ಮಹಾಮಂಡಳಿಯ ಅಧ್ಯಕ್ಷ ರಾಜಣ್ಣ ಮಲ್ಲಾಡದ ಹೇಳಿದರು.
ಗಣೇಶ ವಿಸರ್ಜನೆಯನ್ನು ರಾತ್ರಿ 11 ಗಂಟೆಯೊಳಗೆ ಪೂರ್ಣಗೊಳಿಸಬೇಕು. ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಪಟಾಕಿ ಸಿಡಿಸುವುದನ್ನು ತಪ್ಪಿಸಬೇಕು. ಮೆರವಣಿಗೆ ವೇಳೆ ವಿದ್ಯುತ್ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರು.
ಸಾರ್ವಜನಿಕ ಗಜಾನನ ಮಹಾಮಂಡಳಿಯ ವತಿಯಿಂದ 51 ಪರಿಸರಸ್ನೇಹಿ ಮಣ್ಣಿನ ಗಣೇಶ ಮೂರ್ತಿಗಳನ್ನು ಸಂಘ- ಸಂಸ್ಥೆಗಳು, ಶಾಲಾ- ಕಾಲೇಜುಗಳಿಗೆ ಉಚಿತವಾಗಿ ನೀಡಲು ನಿರ್ಧರಿಸಲಾಗಿದೆ. ಮಣ್ಣಿನ ಗಣೇಶ ಮೂರ್ತಿಗಳನ್ನು ಪಡೆಯಲು ಆಸಕ್ತರು ಸೆಪ್ಟೆಂಬರ್ 1ರಿಂದ 13ರೊಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಳ್ಳಬೇಕು ಎಂದರು.ಈ ಸಂದರ್ಭದಲ್ಲಿ ಗ್ರೀನ್ ಮಾರ್ಕೆಟ್ ತರುಣ ವ್ಯಾಪಾರಸ್ಥರ ಗಜಾನನ ಮಂಡಳಿಯ ವತಿಯಿಂದ ಗಣೇಶ ವಿಸರ್ಜನಾ ದಿನದಂದು ಸಾರ್ವಜನಿಕರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು, ವಿಸರ್ಜನಾ ಮೆರವಣಿಗೆಗೆ ಆಗಮಿಸುವ ಎಲ್ಲರಿಗೂ ಪ್ರಸಾದ ವಿತರಿಸಲಾಗುವುದು ಎಂದು ತಿಳಿಸಲಾಯಿತು.