ದೈನಂದಿನ ಬದುಕಿನಲ್ಲೂ ತನು, ಮನ ಕನ್ನಡವಾಗಿರಲಿ

KannadaprabhaNewsNetwork |  
Published : Dec 18, 2024, 12:48 AM IST
ಚಿಕ್ಕಮಗಳೂರು ತಾಲೂಕಿನ ಶಿರವಾಸೆ ಗ್ರಾಮದ ಶ್ರೀ ಗಜಾನನ ಕಲಾಮಂದಿರದಲ್ಲಿ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭವನ್ನು ಸಿರಿಗನ್ನಡ ವೇದಿಕೆ ತಾಲ್ಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಅವರು ಉದ್ಘಾಟಿಸಿದರು. ಸೂರಿ ಶ್ರೀನಿವಾಸ್‌, ವಾಸು ಪೂಜಾರಿ, ಸೋಮಶೇಖರ್‌, ಶ್ಯಾಮಲಾ, ಚಂದ್ರೇಗೌಡ ಇದ್ದರು. | Kannada Prabha

ಸಾರಾಂಶ

ಚಿಕ್ಕಮಗಳೂರು ತಾಲೂಕಿನ ಶಿರವಾಸೆಯ ಶ್ರೀ ಗಜಾನನ ಕಲಾಮಂದಿರದಲ್ಲಿ ಏರ್ಪಡಿಸಿದ್ಧ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭವನ್ನು ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಉದ್ಘಾಟಿಸಿದರು. ಸೂರಿ ಶ್ರೀನಿವಾಸ್‌, ವಾಸು ಪೂಜಾರಿ, ಸೋಮಶೇಖರ್‌, ಶ್ಯಾಮಲಾ, ಚಂದ್ರೇಗೌಡ ಇದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೈನಂದಿನ ಬದುಕಿನಲ್ಲಿ ತನು, ಮನ, ನುಡಿ ಕನ್ನಡವಾಗಿರಬೇಕು. ಹತ್ತಾರು ಭಾಷೆ ಕಲಿತರೆ ತಪ್ಪೇನಿಲ್ಲ, ಮುಖ್ಯವಾಗಿ ಮಾತೃ ಭಾಷೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು ಎಂದು ಜಿಲ್ಲಾ ಕಸಾಪ ಅಧ್ಯಕ್ಷ ಸೂರಿ ಶ್ರೀನಿವಾಸ್ ಹೇಳಿದರು.ತಾಲೂಕಿನ ಶಿರವಾಸೆ ಗ್ರಾಮದ ಶ್ರೀ ಗಜಾನನ ಕಲಾಮಂದಿರದಲ್ಲಿ ಜಾಗರ ಕಸಾಪ ಹೋಬಳಿ ಘಟಕ ಏರ್ಪಡಿಸಿದ್ಧ 69ನೇ ಕನ್ನಡ ರಾಜ್ಯೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.ಉದ್ಯೋಗಕ್ಕಾಗಿ ಯಾವುದೇ ರಾಜ್ಯ ಅಥವಾ ವಿದೇಶಗಳಿಗೆ ತೆರಳಿ ಸ್ಥಳೀಯ ಭಾಷೆ ಕಲಿತು ಕೊಂಡರೆ ತಪ್ಪಿಲ್ಲ. ಜೊತೆಗೆ ಕನ್ನಡ ಭಾಷೆಯ ಸ್ವಾಭಿಮಾನ, ಘನತೆ ಹಾಗೂ ಸಂಸ್ಕೃತಿ ಉಳಿಸುವ ಕೆಲಸವಾಗಬೇಕು. ಹೀಗಾಗಿ ಕನ್ನಡಿಗರಾದ ನಾವುಗಳು ಎಲ್ಲೇ ತೆರಳಿದರೂ ಭಾಷೆಯ ಸೊಗಡನ್ನು ಇತರರಿಗೂ ಪರಿಚಯಿಸಬೇಕು ಎಂದು ಹೇಳಿದರು.ನಾಡಿನ ನೆಲದಲ್ಲಿ ಜನಿಸಿರುವ ಕನ್ನಡಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಎಂದಿಗೂ ನಶಿಸದಂತಹ ವಿಶೇಷ ಶಕ್ತಿಯಿದೆ. ಆಯಾಯ ರಾಜ್ಯಗಳಲ್ಲಿ ಸ್ಥಳೀಯ ಭಾಷೆಯನ್ನು ಗೌರವಿಸಿದಂತೆ ಕನ್ನಡಿಗರಾದ ನಾವು ನಮ್ಮ ತಾಯ್ನಾಡಿಗೆ ಎಲ್ಲದಕ್ಕಿಂತ ಒಂದು ಪಟ್ಟು ಹೆಚ್ಚು ಪ್ರೀತಿಸುವ ಕಾಳಜಿ ಹೊಂದಬೇಕು ಎಂದರು.ಇಡೀ ಜಿಲ್ಲೆಯಲ್ಲಿ ಜಾಗರ ಕಸಾಪ ಹೋಬಳಿ ಘಟಕ ರಾಜ್ಯೋತ್ಸವವನ್ನು ಪ್ರತಿ ವರ್ಷವು ವಿಜೃಂಭಣೆಯಿಂದ ಆಚರಿಸುತ್ತಿದೆ. ಗ್ರಾಮದ ಸುತ್ತ ಮುತ್ತಲೂ ಕನ್ನಡಧ್ವಜ ಹಾಕುವುದು, ಕರಪತ್ರ ಅಂಟಿಸಿರುವುದು ಅಲ್ಲದೇ ಮನೆ ಮನೆಗಳಿಗೆ ತೆರಳಿ ರಾಜ್ಯೋತ್ಸವ ಆಚರಣೆ ಆಹ್ವಾನಿಸುವ ಮುಖಾಂತರ ಕನ್ನಡ ಕಟ್ಟುವ ಕಾಯಕದಲ್ಲಿ ನಿರತರಾಗಿರುವುದು ಖುಷಿಯ ಸಂಗತಿ ಎಂದರು. ಸಿರಿಗನ್ನಡ ವೇದಿಕೆ ತಾಲೂಕು ಅಧ್ಯಕ್ಷ ಕೆ.ಚಂದ್ರಯ್ಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನ್ನಡಾಂಬೆ ನಾಡಿನಲ್ಲಿ ನೆಲೆಯೂರಲು ಹಲವಾರು ದಾರ್ಶನಿಕರು, ಕೀರ್ತನೆಕಾರರು, ಕವಿ, ಸಾಹಿತಿಗಳು ಹಾಗೂ ರಾಜ ಮಹಾರಾಜರ ವಿಶೇಷ ಕೊಡುಗೆ ಇದೆ. ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಲು ಇಂದಿನ ಯುವ ಸಮೂಹ ಮುಂದಾಗಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಸಾಪ ಹೋಬಳಿ ಅಧ್ಯಕ್ಷ ವಾಸು ಪೂಜಾರಿ, ಭಾಷೆಯ ಬೆಳವಣಿಗೆಗೆ ಅನಾದಿ ಕಾಲದಿಂದಲೇ ಕದಂಬರು, ಚಾಲುಕ್ಯರು, ವಿಜಯನಗರದ ಅರಸರು, ದಾಸರು, ವಚನಕಾರರು, ಸಾಹಿತ್ಯಾಸಕ್ತರ ಸಹಕಾರ ಬಹಳಷ್ಟಿದೆ. ಈ ಸೊಗಡಿನಿಂದಲೇ ಇಂದು ವಿಶ್ವದಲ್ಲೇ ಕನ್ನಡವು ತನ್ನದೇ ವಿಶಿಷ್ಟ ಪರಂಪರೆ ಹೊಂದಿದೆ ಎಂದು ತಿಳಿಸಿದರು.ಕಸಾಪ ತಾಲೂಕು ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಅವರು, ಮಹಾಭಾರತ ಸನ್ನಿವೇಶದಲ್ಲಿ ಶಕುನಿಯ ಏಕಪಾತ್ರಭಿನಯ ಮಾಡಿ ಗ್ರಾಮಸ್ಥರ ಹಾಗೂ ಮಕ್ಕಳ ಪ್ರಶಂಸೆಗೆ ಪಾತ್ರರಾದರು. ರಾಜ್ಯೋತ್ಸವ ಅಂಗವಾಗಿ ಏರ್ಪಡಿಸಿದ್ಧ ವಿವಿಧ ಸ್ಫರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಶ್ರೀ ಭುವನೇಶ್ವರಿ ತಾಯಿ ಭಾವಚಿತ್ರವನ್ನು ವಿವಿಧ ಕಲಾತಂಡಗಳೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು. ನಂತರ ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿಕಲಚೇತನರಿಂದ ರಸಮಂಜರಿ ಏರ್ಪಡಿಸಲಾಗಿತ್ತು.

ಈ ವೇಳೆ ಕಸಾಪ ನಗರಾಧ್ಯಕ್ಷ ಸಚಿನ್‌ಸಿಂಗ್, ಹೋಬಳಿ ಕಸಾಪ ಮಾಜಿ ಅಧ್ಯಕ್ಷ ಚಂದ್ರೇಗೌಡ, ಕೆ.ವಿ.ರವಿಕುಮಾರ್, ಮುಖಂಡರಾದ ಶಂಕರ್, ಜೆ.ಸಿ.ಲಕ್ಷ್ಮಣ್, ದೇಜು, ವೆಂಕಟೇಶ್, ಡಿ.ಜೆ. ಶ್ಯಾಮಲಾ, ಕಾಫಿ ಬೆಳೆಗಾರ ಎಚ್.ಎಸ್. ಮಲ್ಲೇಶ್ ಉಪಸ್ಥಿತರಿದ್ದರು.

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ