ಶರಣ ಸಾಹಿತ್ಯ ಪರಿಷತ್ ಸಾಮಾನ್ಯ ಸಭೆಯಲ್ಲಿ ವಿಧಾನಪರಿಷತ್ ಸದಸ್ಯೆ
ಶರಣರ ವಿಚಾರಗಳನ್ನು ಮುಂದಿನ ತಲೆಮಾರಿಗೆ ತಲುಪಿಸುವ ಹೊಣೆ ನಮ್ಮೆಲ್ಲರ ಮೇಲಿದೆ. ಆ ನಿಟ್ಟಿನಲ್ಲಿ ಶರಣರ ಚಿಂತನೆ, ವಿಚಾರಗಳನ್ನು ಬಿತ್ತೋಣ ಎಂದು ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಜಿಲ್ಲಾ ಮತ್ತು ತಾಲೂಕು ಘಟಕಗಳ ಸಂಯುಕ್ತಾಶ್ರಯದಲ್ಲಿ ಕೊಪ್ಪಳ ಜಿಲ್ಲಾ ಸರ್ವ ಸದಸ್ಯರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಶರಣ ಸಾಹಿತ್ಯ ಪರಿಷತ್ ಹಾಗೂ ಕದಳಿ ಮಹಿಳಾ ವೇದಿಕೆ ಇಡೀ ರಾಜ್ಯದಲ್ಲಿ ಸ್ವಂತ ನಿವೇಶನವನ್ನು ಸಂಘಟನೆಯ ಶಕ್ತಿಯಿಂದ ಹೊಂದಿರುವುದು ಹೆಮ್ಮೆಯ ವಿಷಯ ಎಂದರು
ನೂತನ ಅಧ್ಯಕ್ಷ ಶಿವಕುಮಾರ ಕುಕನೂರ ಅವರನ್ನು ಸನ್ಮಾನಿಸಲಾಯಿತು.
ಶಾಂತಪ್ಪ ಬೆಲ್ಲದ, ಡಾ. ಸಂಗಮೇಶ ಕಲಹಾಳ, ಡಾ. ಸಿ.ಎಸ್. ಕರಮುಡಿ, ಸಾವಿತ್ರಿ ಮುಜುಂದಾರ, ನಾಗರಾಜ ನಾಯಕ ಡೊಳ್ಳಿನ, ಡಾ. ಕವಿತಾ ಹ್ಯಾಟಿ, ಎಂ.ಬಿ.ಅಳವಂಡಿ, ಉಮೇಶಬಾಬು ಸುರ್ವೆ ಸಲಹೆ ನೀಡಿದರು.ಶರಣಮ್ಮ ಕಲ್ಮಂಗಿ ವಚನ ಗಾಯನ ಮಾಡಿದರು. ಕದಳಿ ಮಹಿಳಾ ವೇದಿಕೆ ಜಿಲ್ಲಾಧ್ಯಕ್ಷೆ ನಿರ್ಮಲಾ ಬಳ್ಳೊಳ್ಳಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಕಾರ್ಯದರ್ಶಿ ಸೋಮನಗೌಡ ಹೊಗರನಾಳ ನಿರೂಪಿಸಿ, ವೀರೇಶ ಕೊಪ್ಪಳ ವಂದಿಸಿದರು.