ಬೆಳೆಗಳ ವೈಜ್ಞಾನಿಕ ಬೆಲೆ ಬಗ್ಗೆ ಚಿಂತನೆ ಆಗಲಿ: ಶಾಸಕ ಸಿ.ಪುಟ್ಟರಂಗಶೆಟ್ಟಿ

KannadaprabhaNewsNetwork | Published : Dec 24, 2024 12:48 AM

ಅನ್ನವನ್ನು ನೀಡುವ ರೈತರು ಬೆಳೆಯುವ ಬೆಳಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಬಗ್ಗೆ ರೈತ ಮುಖಂಡರು ಮತ್ತು ಸರ್ಕಾರ ಒಂದೆಡೆ ಕುಳಿತು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು. ಚವಾಮರಾಜನಗರದಲ್ಲಿ ರೈತ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಆಧುನಿಕತೆ, ವಿಜ್ಞಾನ ಎಷ್ಟೇ ಮುಂದುವರಿದರೂ, ತಿನ್ನುವುದಕ್ಕೆ ಅನ್ನ ಬೇಕೆ ಬೇಕು. ಇಂತಹ ಅನ್ನವನ್ನು ನೀಡುವ ರೈತರು ಬೆಳೆಯುವ ಬೆಳಗಳಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಬಗ್ಗೆ ರೈತ ಮುಖಂಡರು ಮತ್ತು ಸರ್ಕಾರ ಒಂದೆಡೆ ಕುಳಿತು ಗಂಭೀರ ಚಿಂತನೆ ನಡೆಸಬೇಕಾಗಿದೆ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ, ಜಿಲ್ಲಾ ಕೃಷಿಕ ಸಮಾಜದ ಸಹಯೋಗದೊಂದಿಗೆ ಹೊರಟು ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ರೈತ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ, ಬೆಳೆಗಳಿಗೆ ಪ್ರದೇಶ ಹಾಗೂ ವೈಜ್ಞಾನಿಕ ಬೆಲೆ ನಿಗದಿಪಡಿಸಿ, ಒಂದು ಬೆಳೆಗೆ ಹೆಚ್ಚು ದರ ಸಿಕ್ಕಿದ ನಂತರ ಅದೇ ಬೆಳೆ ಬೆಳೆಯಲು ಎಲ್ಲ ರೈತರು ಮುಂದಾದಾಗ ಬೆಲೆ ಏರಿಳಿತ ಉಂಟಾಗುತ್ತದೆ, ಕೆಲವರಿಗೆ ಲಾಭ ಸಿಕ್ಕಿದರೆ ಕೆಲವರಿಗೆ ನಷ್ಟ ಉಂಟಾಗುತ್ತದೆ ಇದು ನಿಲ್ಲಬೇಕು ಎಂದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ಹಲವಾರು ಅನುದಾನ ಮತ್ತು ಸಬ್ಸಿಡಿಗಳನ್ನು ನೀಡುತ್ತಿವೆ, ಇದರ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಾಗಾರಗಳು ನಡೆಯಬೇಕು ಎಂದರು.

ಜಿಲ್ಲೆಯಲ್ಲಿ ಸಣ್ಣ ರೈತರೇ ಹೆಚ್ಚಾಗಿದ್ದಾರೆ, ತುಂಡು ತುಂಡು ಭೂಮಿಗಳಿವೆ, ಹವಾಮಾನ ವೈಪರೀತ್ಯದಿಂದ ಕಡಿಮೆ ಮಳೆ, ಹೆಚ್ಚು ಮಳೆ, ಬೇಡದ ವೇಳೆಯಲ್ಲಿ ಮಳೆಯಾಗುತ್ತದೆ, ಆದ್ದರಿಂದ ಕಡಿಮೆ ಮಳೆಯಲ್ಲಿ ಯಾವ ಬೆಳೆ ಬೆಳೆಯಬೇಕು, ಹೆಚ್ಚು ಮಳೆಯಾದಾಗ ಏನು ಮಾಡಬೇಕು, ಭೂಮಿಯ ಫಲವತ್ತತೆ ಹೇಗೆ ಕಾಪಾಡಿಕೊಳ್ಳಬೇಕು ಎಂಬುದು ಗೊತ್ತಿರಬೇಕು. ಆರೋಗ್ಯಕರ ಸಿರಿಧಾನ್ಯಗಳು ಮತ್ತು ಸೊಪ್ಪುಗಳನ್ನು ಬೆಳೆಯುವ ಬಗ್ಗೆ ಹೆಚ್ಚು ಗಮನಹರಿಸಬೇಕು, ಭೂ ಸುಧಾರಣೆ ಕಾಯ್ದೆಯ ೭೯ಎಬಿ ಬಗ್ಗೆ ನಾನು ವಿರೋಧ ವ್ಯಕ್ತಪಡಿಸಿದ್ದೇ, ಈಗಲೂ ಇದರ ಬಗ್ಗೆ ಸಿಎಂ ಜೊತೆ ಮತ್ತೇ ಮಾತನಾಡುವೆ ಎಂದರು.

ವೈಜ್ಞಾನಿಕತೆ ಜೊತೆ ಸಾಂಪ್ರದಾಯಿಕ ಜ್ಞಾನವೂ ಮುಖ್ಯ. ಕಡಿಮೆ ನೀರು ಬಳಸಿ, ಕೀಟನಾಶಕ ತ್ಯಜಿಸಿ ಕೃಷಿ ಮಾಡಿದಾಗ ಕೃಷಿ ಲಾಭದಾಯಕವಾಗುತ್ತದೆ. ರೈತರು ಸಾವಯವ ಕೃಷಿಯತ್ತ ಹೋಗಬೇಕು ಎಂದರು. ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ಯಾವುದೇ ಸರ್ಕಾರವಿರಲಿ ಕೃಷಿ ಕೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ. ರೈತ ಪರ ತೀರ್ಮಾನಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿವೆ, ಪ್ರಸ್ತುತ ಕೇಂದ್ರ ಸರ್ಕಾರವಂತು ರೈತರ ಹೋರಾಟಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ರೈತರ ಬಹುದಿನಗಳ ಬೇಡಿಕೆಯಾದ ಸ್ವಾಮಿನಾಥನ್ ವರದಿ ಜಾರಿ ಮಾಡುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದರು.

ರೋಗ ನಿರೋಧಕ ಶಕ್ತಿ ಹೆಚ್ಚಿರುವ, ಡಯಟ್ ಫುಡ್ ಸಿರಿಧಾನ್ಯಗಳನ್ನು ಬೆಳೆಯುವತ್ತ ಹೆಚ್ಚು ಗಮನಹರಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯಗಳು ಕಣ್ಮರೆಯಾಗುತ್ತಿವೆ. ಸಕ್ಕರೆ ಕಾಯಿಲೆ, ಸ್ಥೂಲಕಾಯಕ್ಕೆ ಸಿರಿಧಾನ್ಯಗಳು ಪರಿಣಾಮಕಾರಿಯಾದ ಆಹಾರವಾಗಿದೆ. ಸಿರಿಧಾನ್ಯಗಳು ರೋಗ ನಿರೋಧಕ ಶಕ್ತಿ ಹೊಂದಿದ್ದು ಉತ್ತಮ ಆರೋಗ್ಯಕ್ಕೆ ಸಿರಿಧಾನ್ಯಗಳನ್ನು ಸೇವನೆ ಮಾಡುವುದು ಅಗತ್ಯ. ಪ್ರಧಾನಿಯಾಗಿದ್ದ ಚರಣ್‌ಸಿಂಗ್ ಅವರು ಅನೇಕ ರೈತಪರ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ದೇಶದ ಕೃಷಿಗೆ ಹೆಚ್ಚಿನ ಒತ್ತು ನೀಡಿದರು.

ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಮಾತನಾಡಿ, ಯಾವುದೇ ಸರ್ಕಾರವಿರಲಿ ನಾವು ರೈತರ ಪರ ಎಂದು ಹೇಳುವುದು ವಾಡಿಕೆಯಾಗಿದೆ, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಬೆಲೆ ಸಿಗದೆ ರೈತರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ, ಶಾಸಕರು ವಿಧಾನ ಸಭೆಯಲ್ಲಿ ರೈತರ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆ ನಡೆಸಬೇಕು ಎಂದರು. ರೈತರು ಹಳೆ ಕೃಷಿ ಪದ್ಧತಿ ಬಿಟ್ಟು ಆಧುನಿಕ ಕೃಷಿ ಪದ್ದತಿ ಅಳವಡಿಸಿಕೊಳ್ಳಬೇಕು, ಅಧುನಿಕ ಕೃಷಿ ಯಂತ್ರಗಳಿಗೆ ಹೆಚ್ಚಿನ ಸಬ್ಸಿಡಿ ನೀಡಬೇಕು, ಅದರಲ್ಲೂ ರೈತ ಮಹಿಳೆಯರು ಮುಂದೆ ಬಂದರೆ ಶೇ.೯೦ರಷ್ಟು ಸಬ್ಸಿಡಿ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಣ್ಯದಹುಂಡಿ ಪುಟ್ಟೀರಮ್ಮ ಮಾತನಾಡಿ, ಈಗ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಭೂಮಿ ಹಾಳಾಗುತ್ತಿದೆ ಎಂದರು. ರೈತ ಮುಖಂಡ ಹೊನ್ನೂರು ಪ್ರಕಾಶ್ ಮಾತನಾಡಿ, ಪ್ರಸ್ತುತ ಸಿರಿಧಾನ್ಯಗಳಿಗೆ ಹೆಚ್ಚಿನ ಬೇಡಿಕೆ ಇದೆ. ಸಾವಿರಾರು ವರ್ಷಗಳ ಹಿಂದಿನಿಂದಲೂ ಜಲಾಶಯ, ಕಾಲುವೆ, ನದಿ ಇಲ್ಲದ ಕಾಲದಿಂದಲೂ ಸಿರಿಧಾನ್ಯಗಳನ್ನು ಬೆಳೆಯಲಾಗುತ್ತಿತ್ತು. ಅಂದು ಇವುಗಳನ್ನು ಕಿರುಧಾನ್ಯ ಎಂದು ಕರೆಯುತ್ತಿದ್ದರು, ಆದರೆ, ಪ್ರಸ್ತುತ ರಾಸಾಯನಿಕ ಗೊಬ್ಬರಗಳ ಬಳಕೆಯಿಂದಾಗಿ ಮಣ್ಣಿನ ಫಲವತ್ತತೆ ಹಾಳಾಗಿದೆ. ಭೂಮಿಯಲ್ಲಿ ಇಂಗಾಲ ಕಡಿಮೆಯಾಗುತ್ತಿದೆ ಎಂದರು.

ನಾವು ಬೆಳೆದ ಬೆಳೆಗಳಿಗೆ ನಾವೇ ಉತ್ಪಾದಕರಾಗಬೇಕು, ಈ ನಿಟ್ಟಿನಲ್ಲಿ ಸರ್ಕಾರಗಳು ಹಲವಾರು ಸೌಲಭ್ಯಗಳನ್ನು ನೀಡಿದೆ ಅದನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ರೈತ ಮುಖಂಡ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿದರು. ಈ ವೇಳೆ ಆತ್ಮ ಯೋಜನೆಯಡಿ ಸಮಗ್ರ ಕೃಷಿ ಮಾಡಿ ಸಾಧನೆ ಮಾಡಿರುವ ಜಿಲ್ಲಾ ರೈತರನ್ನು ಹಾಗೂ ಸಿರಿಧಾನ್ಯ ಪಾಕ ಸ್ವರ್ಧೆಯಲ್ಲಿ ವಿಜೇತರಾದ ರೈತ ಮಹಿಳೆಯರನ್ನು ಸನ್ಮಾನಿಸಿ ಗೌರವಿಸಲಾಯಿತು,

ಸೊಪ್ಪುಗಳ ಬಗ್ಗೆ ಅಪಾರ ಜ್ಞಾನ ಹೊಂದಿ ಸಾಧನೆ ಮಾಡಿರುವ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಣ್ಯದಹುಂಡಿ ಪುಟ್ಟೀರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿರಿಧಾನ್ಯಗಳಿಂದ ತಯಾರಿಸಿದ್ದ ತಿನಿಸುಗಳ ಪ್ರದರ್ಶನ ಹಾಗೂ ಮಾರಾಟ ನಡೆಯಿತು. ಅಲ್ಲದೇ ಕೃಷಿ ಇಲಾಖೆ, ಅರಣ್ಯ ಇಲಾಖೆಗಳು ಕೂಡ ತಮ್ಮ ಇಲಾಖೆಯಲ್ಲಿ ರೈತರಿಗೆ ದೊರೆಯುವ ಸವಲತ್ತುಗಳ ಕುರಿತು ಮಳಿಗೆಗಳನ್ನು ತೆರೆದು ಅರಿವು ಮೂಡಿಸಿದರು. ಚಾಮರಾಜನಗರದ ಜಿಲ್ಲಾಡಳಿತ ಭವನ ಬಳಿಯಿಂದ ಡಾ.ಅಂಬೇಡ್ಕರ್ ಭವನದ ವರೆಗೆ ಸಿರಿಧಾನ್ಯ ನಡಿಗೆ ನಡೆಯಿತು.

ಕಾರ್ಯಕ್ರಮದಲ್ಲಿ ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಲರ್, ಜಿಪಂ ಸಿಇಒ ಮೋನಾ ರೋತ್, ರೈತ ಮುಖಂಡರಾದ ಸಂಪತ್ತು, ಬಸವಣ್ಣ, ಮಹದೇವಪ್ಪ, ಚಂಗಡಿ ಕರಿಯಪ, ಮಹೇಶ್, ಜಂಟಿ ಕೃಷಿ ನಿರ್ದೇಶಕ ಅಬೀಬ್, ಸಹಾಯಕ ಕೃಷಿ ನಿರ್ದೇಶಕರಾದ ಸುಷ್ಮಾ ಇತರರು ಇದ್ದರು. ೨೩ಸಿಎಚ್‌ಎನ್೧ ( ಹೆಚ್ಚಿನ ಫೋಟೋಗಳನ್ನು ಬಳಸಿಕೊಳ್ಳಲು ಮನವಿ)ಚಾಮರಾಜನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ರೈತ ದಿನಾಚರಣೆ ಮತ್ತು ಜಿಲ್ಲಾ ಮಟ್ಟದ ಸಿರಿಧಾನ್ಯ ಹಬ್ಬ ಹಾಗೂ ಸಿರಿಧಾನ್ಯ ನಡಿಗೆ ಸಮಾರಂಭವನ್ನು ಶಾಸಕ ಸಿ.ಪುಟ್ಟರಂಗಶೆಟ್ಟಿ ಉದ್ಘಾಟಿಸಿದರು.