ಅತಿಥಿ ಶಿಕ್ಷಕರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪತ್ರ ಚಳವಳಿ

KannadaprabhaNewsNetwork | Published : Sep 23, 2024 1:15 AM

ಸಾರಾಂಶ

ಕೂಡಲೇ ಗೌರವದನ ಬಿಡುಗಡೆ ಮಾಡಬೇಕು

ಕಂಪ್ಲಿ: ಪಟ್ಟಣದ ಎಸ್‌ಎನ್‌ ಪೇಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಅತಿಥಿ ಶಿಕ್ಷಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಂಪ್ಲಿ ತಾಲೂಕು ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದಿಂದ ಭಾನುವಾರ ಮುಖ್ಯಮಂತ್ರಿಗೆ ಹಾಗೂ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಪತ್ರ ರವಾನಿಸುವ ಚಳವಳಿ ನಡೆಸಲಾಯಿತು.

ಪ್ರಾಥಮಿಕ ಮತ್ತು ಪ್ರೌಢಶಾಲಾ ಅತಿಥಿ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಎಚ್.ಮಲ್ಲೇಶ್ ಮಾತನಾಡಿ, ಶೈಕ್ಷಣಿಕ ವರ್ಷ ಆರಂಭವಾಗಿ ನಾಲ್ಕು ತಿಂಗಳಾದರೂ ಗೌರವಧನ ಬಿಡುಗಡೆಯಾಗಿಲ್ಲ ಇದರಿಂದ ಜೀವನ ನಿರ್ವಹಣೆ ಕಠಿಣವಾಗಿದೆ. ಕೂಡಲೇ ಗೌರವದನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಬಳಿಕ ಜಿಲ್ಲಾ ಕೋಶಾಧ್ಯಕ್ಷ ಎಸ್.ರಾಮಪ್ಪ ಮಾತನಾಡಿ 2012ರಿಂದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಪ್ರಸಕ್ತ ವರ್ಷದವರೆಗೆ ಸುಮಾರು 43,000 ಕ್ಕೂ ಹೆಚ್ಚು ಅತಿಥಿ ಶಿಕ್ಷಕರು ಸೇವೆ ಸಲ್ಲಿಸುತ್ತಿದ್ದು, ವರ್ಷಕ್ಕೆ ಶೇ.5 ರಷ್ಟು ಕೃಪಾಂಕ ನೀಡಬೇಕು. ಗೌರವ ಧನವನ್ನು ₹25 ಸಾವಿರಕ್ಕೆ ಹೆಚ್ಚಿಸಬೇಕು, ಸೇವಾ ಹಿರಿತನಕ್ಕೆ ಮೊದಲ ಆದ್ಯತೆ ನೀಡಬೇಕು, ಅಕ್ಟೋಬರ್ ತಿಂಗಳಿನ ವೇತನವನ್ನು ಪೂರ್ಣವಾಗಿ ಭರಿಸುವಂತೆ ಸಂಬಂಧಿಸಿದ ಅಧಿಕಾರಿ ಆದೇಶಿಸಬೇಕು. ಇಲಾಖೆಯಿಂದ ಸೇವಾ ಪ್ರಮಾಣ ಪತ್ರ ಹಾಗೂ ಸೇವಾ ಭದ್ರತೆ ಒದಗಿಸಬೇಕೆಂದು ಸೇರಿದಂತೆ ವಿವಿಧ ಬೇಡಿಕೆಗಾಗಿ ಹಲವಾರು ಬಾರಿ ಹೋರಾಟ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಮುಖ್ಯಮಂತ್ರಿ ಮತ್ತು ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಎಲ್ಲ ಸಾಧಕ-ಬಾಧಕಗಳನ್ನು ಗಮನಿಸಿ ಅತಿಥಿ ಶಿಕ್ಷಕ ವರ್ಗಕ್ಕೆ ನ್ಯಾಯ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಂಪ್ಲಿ ತಾಲೂಕು ಅಧ್ಯಕ್ಷ ಕೆ.ಶಿವರುದ್ರ, ಉಪಾಧ್ಯಕ್ಷೆ ಕೆ.ಶೇಖಮ್ಮ, ಪ್ರಧಾನ ಕಾರ್ಯದರ್ಶಿ ಉಮೇಶ್, ಪದಾಧಿಕಾರಿಗಳಾದ ಸಂಕ್ರಮ, ಮಮತಾ, ರಾಜೇಶ್ವರಿ, ನಟರಾಜ್, ಮಹೇಶ, ಮಲ್ಲಿಕಾ, ಶೇಖಣ್ಣ, ಶ್ರೀನಿವಾಸ್ ಇತರರಿದ್ದರು.

Share this article