- ಸುದ್ದಿಗೋಷ್ಠಿಯಲ್ಲಿ ರೈತಸೇನಾದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಮಹದಾಯಿ ಯೋಜನೆ ಶೀಘ್ರ ಜಾರಿಗೆ ಒತ್ತಾಯಿಸಿ ಪತ್ರ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ರೈತ ಸೇನಾದ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಮಹದಾಯಿ ಯೋಜನೆ ಜಾರಿಗೆ ಒತ್ತಾಯಿಸಿ ಈ ಭಾಗದ ರೈತರು ಹಲವು ವರ್ಷಗಳಿಂದ ಹೋರಾಟ ಮಾಡುತ್ತಿದ್ದಾರೆ. ಆದರೆ, ಈ ಭಾಗದ ಶಾಸಕರು, ಸಂಸದರು ಈ ಯೋಜನೆಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಯೋಜನೆ ಜಾರಿಗೆ ಆಸಕ್ತಿ ವಹಿಸುತ್ತಿಲ್ಲ ಎಂದು ವಿಷಾಧಿಸಿದರು.
ಯೋಜನೆ ಶೀಘ್ರ ಜಾರಿಗೊಳಿಸುವಂತೆ ಪ್ರಧಾನಿ ಕಾರ್ಯಾಲಯಕ್ಕೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ. ರಾಜ್ಯದ 28 ಸಂಸದರಿಗೆ ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಗೆ ಕಳಿಸಿರುವ ಮನವಿ ಪ್ರತಿಯನ್ನು ಪೋಸ್ಟ್ ಮುಖಾಂತರ ಕಳಿಸಲಾಗಿದೆ. ಮುಂದಿನ ದಿನಗಳಲ್ಲೂ ಪ್ರಧಾನಿ ಕಚೇರಿ, ಗೃಹ ಸಚಿವ ಅಮಿತ್ ಶಾ, ಕೇಂದ್ರ ಜಲಸಂಪನ್ಮೂಲ ಇಲಾಖೆ ಹಾಗೂ ಸಚಿವರಿಗೆ ಪ್ರತಿದಿನ ಮನವಿಪತ್ರ ಸಲ್ಲಿಸುವ ಮೂಲಕ ಪತ್ರ ಚಳವಳಿ ಹಮ್ಮಿಕೊಳ್ಳಲಾಗುವುದು. ಯೋಜನೆ ಜಾರಿ ಮಾಡದಿದ್ದರೆ ಜನವರಿಯಲ್ಲಿ ಸಂಸತ್ತಿನ ಎದುರು ಹಾಗೂ ಸಂಸದರ ಮನೆ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.ತತ್ತರಿಸಿದ ಜನತೆ:
ಬರಗಾಲದಿಂದ ಜಿಲ್ಲೆಯ ಜನರು ತತ್ತರಿಸಿದ್ದಾರೆ. ಬೆಳಗಾವಿ, ಬಾಗಲಕೋಟೆ, ಧಾರವಾಡ, ಗದಗ ಜಿಲ್ಲೆ ವ್ಯಾಪ್ತಿಯ 11 ತಾಲೂಕುಗಳಿಗೆ ಸಂಬಂಧಪಟ್ಟ ಕಳಸಾ -ಬಂಡೂರಿ ಕುಡಿಯುವ ನೀರಿನ ಯೋಜನೆ ಜಾರಿಗೆ ಕೇಂದ್ರ ಸರ್ಕಾರ ಶೀಘ್ರ ಪರವಾನಗಿ ನೀಡಬೇಕು ಎಂದು ಆಗ್ರಹಿಸಿದರು.ಮಹದಾಯಿ, ಕಳಸಾ- ಬಂಡೂರಿ ಕುಡಿಯುವ ನೀರಿನ ಯೋಜನೆ ಜಾರಿಗೆ ವನ್ಯಜೀವಿ ಸಂಕ್ಷಣಾ ಇಲಾಖೆ, ಪರಿಸರ ಇಲಾಖೆ, ಕೇಂದ್ರ ಜಲಸಂಪನ್ಮೂಲ ಇಲಾಖೆಯ ಪರವಾನಗಿ ಅಗತ್ಯ. ಪರಿವಾನಗಿಗಾಗಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ, ಕೇಂದ್ರದ ಸಂಬಂಧಪಟ್ಟ ಇಲಾಖೆಗಳು ಕುಂಟುನೆಪ ಹೇಳಿ ಯೋಜನೆ ಜಾರಿಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿವೆ. ರಾಜ್ಯದ ಸಂಸದರು ಯೋಜನೆ ಜಾರಿ ಕುರಿತು ಆಸಕ್ತಿ ವಹಿಸದಿರುವುದು ರೈತರಿಗೆ ಹಾಗೂ ಹೋರಾಟಗಾರರಿಗೆ ತೀವ್ರ ನೋವು ತಂದಿದೆ ಎಂದರು.
ಈ ವೇಳೆ ರೈತಸೇನೆಯ ರಾಜ್ಯ ವಕ್ತಾರ ಗುರು ರಾಯನಗೌಡ, ರಾಜ್ಯ ಸಂಚಾಲಕ ಮುತ್ತು ಪಾಟೀಲ, ತಾಲೂಕು ಅಧ್ಯಕ್ಷ ಬಸವರಾಜ ಗುಡಿ, ಶಿವಪ್ಪ ಗುಜಪ್ಪನವರ ಸೇರಿದಂತೆ ಹಲವರಿದ್ದರು.