- ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಅಧ್ಯಕ್ಷ ಜಿ.ಚಿನ್ನಸ್ವಾಮಿ - - - ಕನ್ನಡಪ್ರಭ ವಾರ್ತೆ ಚನ್ನಗಿರಿ
ಗ್ರಂಥಾಲಯಗಳು ಜ್ಞಾನ ದೇಗುಲಗಳಿದ್ದಂತೆ. ಸಾಮಾಜಿಕ ಜ್ಞಾನ. ತಿಳಿವಳಿಕೆ ಹೊಂದುವ ಮೂಲಕ ಜನರು ಅಭಿವೃದ್ಧಿ ಕಾಣಬೇಕೆಂಬ ಉದ್ದೇಶದಿಂದ ಸರ್ಕಾರ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಿಂದ ಹಿಡಿದು ನಗರ ಪ್ರದೇಶಗಳವರೆಗೂ ಗ್ರಂಥಾಲಯಗಳನ್ನು ಸ್ಥಾಪಿಸಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ತು ಕಸಬಾ ಹೋಬಳಿ ಘಟಕ ಅಧ್ಯಕ್ಷ ಜಿ.ಚಿನ್ನಸ್ವಾಮಿ ಹೇಳಿದರು.ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಯುವಜನತೆ ಮೊಬೈಲ್ ಗೀಳಿನಿಂದ ಓದುವ ಆಸಕ್ತಿ ಕಳೆದುಕೊಂಡಿದೆ. ಪುಸ್ತಕಗಳನ್ನು ಓದುವುದರಿಂದ ತಿಳಿದುಕೊಳ್ಳುವ ಜ್ಞಾನ ದೀರ್ಘಕಾಲದವರೆಗೂ ನೆನಪಿನಲ್ಲಿ ಇರಲಿದೆ. ನೋಡಿ ಪಡೆದುಕೊಳ್ಳುವ ಜ್ಞಾನ ತಾತ್ಕಾಲಿಕವಾಗಿ ಉಳಿದುಕೊಳ್ಳುವುದು ಎಂದರು.
ಗ್ರಂಥಾಲಯಗಳಲ್ಲಿ ಒಂದನೇ ತರಗತಿಯ ವಿದ್ಯಾರ್ಥಿಗಳಿಂದ ಹಿಡಿದು ಮಧ್ಯ ವಯಸ್ಕರು, ವಯೋವೃದ್ಧರು, ಮಹಿಳೆಯರು ಹೀಗೆ ಎಲ್ಲ ವಯೋಮಾನದವರಿಗೂ ಉಪಯೋಗ ಆಗುವಂಥ ಪುಸ್ತಕಗಳು ಗ್ರಂಥಾಲಯದಲ್ಲಿ ಸಿಗಲಿವೆ. ಅವರವರ ಅಭಿರುಚಿಗೆ ತಕ್ಕಂತೆ ಪುಸ್ತಕಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿ, ಜ್ಞಾನ ಸಂಪತ್ತನ್ನು ವೃದ್ಧಿಸಿಕೊಳ್ಳಬಹುದು ಎಂದರು.ಸಮಾರಂಭ ಉದ್ಘಾಟನೆಯನ್ನು ನಿವೃತ್ತ ಶಿಕ್ಷಕ ಜೆ.ಎಲ್. ಮಲ್ಲಿಕಾರ್ಜುನ್ ನೆರವೇರಿಸಿ, ಪ್ರಸ್ತುತ ದಿನಗಳಲ್ಲಿ ದೃಶ್ಯ ಮಾಧ್ಯಮ ಮತ್ತು ಮೊಬೈಲ್ ಗೀಳಿನಿಂದ ಓದುವರರ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಓದುವ ಮುಖಾಂತರ ತಿಳಿದುಕೊಳ್ಳುವಂತಹ ಜ್ಞಾನ ದೃಶ್ಯ ಮಾಧ್ಯಮದಲ್ಲಾಗಲಿ, ಮೊಬೈಲ್ಗಳ ಮೂಲಕವಾಗಲಿ ತಿಳಿಯಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಓದುವ ಹವ್ಯಾಸ ಬೆಳೆಸಿಕೊಂಡಾಗ ಜ್ಞಾನಸಂಪತ್ತು ವೃದ್ಧಿಯಾಗುವ ಜೊತೆಗೆ ದೇಶದಲ್ಲಿ ನಡೆಯುವಂತಹ ವಿದ್ಯಮಾನಗಳನ್ನು ತಿಳಿಯಲು ಸಹಕಾರಿ ಆಗುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಶಶಿಕುಮಾರ್ ನಾಯ್ಕ್, ತಾಲೂಕು ಕ.ಸಾ.ಪ. ಮಾಜಿ ಅಧ್ಯಕ್ಷ ಎಂ.ಯು. ಚನ್ನಬಸಪ್ಪ, ನಿವೃತ್ತ ಮುಖ್ಯಶಿಕ್ಷಕ ಪಿ.ರುದ್ರಪ್ಪ, ಹರೀಶ್, ಗ್ರಂಥಪಾಲಕ ಬಿ.ಎನ್. ಜಾದವ್ ಮೊದಲಾದವರು ಹಾಜರಿದ್ದರು.- - - -17ಕೆಸಿಎನ್ಜಿ1:
ಚನ್ನಗಿರಿ ಪಟ್ಟಣದ ಸಾರ್ವಜನಿಕ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ ಕಾರ್ಯಕ್ರಮದಲ್ಲಿ ಕಸಾಪ ಕಸಬಾ ಹೋಬಳಿ ಅಧ್ಯಕ್ಷ ಜಿ.ಚಿನ್ನಸ್ವಾಮಿ ಮಾತಾಡಿದರು.