ಭಯ ಅಳಿದರೆ ಬದುಕು ಸುಂದರವಾಗುತ್ತದೆ: ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು

KannadaprabhaNewsNetwork | Published : Mar 22, 2025 2:02 AM

ಸಾರಾಂಶ

ದೇವರ ಬಗ್ಗೆ ತಪ್ಪು ಕಲ್ಪನೆ ನೀಡಿ ಜನರಲ್ಲಿ ಅತಿಯಾದ ಭಯ ಹುಟ್ಟಿಸಲಾಗಿದೆ. ಈ ಭಯ ಅಳಿದರೆ ಜನರ ಬದುಕು ಸುಖಮಯ, ಸುಂದರವಾಗುತ್ತದೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಹುಬ್ಬಳ್ಳಿ: ದೇವರ ಬಗ್ಗೆ ತಪ್ಪು ಕಲ್ಪನೆ ನೀಡಿ ಜನರಲ್ಲಿ ಅತಿಯಾದ ಭಯ ಹುಟ್ಟಿಸಲಾಗಿದೆ. ಈ ಭಯ ಅಳಿದರೆ ಜನರ ಬದುಕು ಸುಖಮಯ, ಸುಂದರವಾಗುತ್ತದೆ ಎಂದು ಬೈಲೂರು ನಿಷ್ಕಲ ಮಂಟಪದ ಶ್ರೀ ನಿಜಗುಣಾನಂದ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.

ಉಣಕಲ್ ಸಿದ್ದಪ್ಪಜ್ಜನ ಜಾತ್ರೆಯ 6ನೇ ದಿನದ ಪ್ರವಚನದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, ಪಂಚಭೂತಗಳು ಈ ನಿಸರ್ಗದ ಕೊಡುಗೆ, ದೇವರು ನಮಗಾಗಿ ಕರುಣಿಸಿದ ಮೂಲಭೂತ ಸೌಲಭ್ಯಗಳು. ಆದರೆ, ಇವುಗಳೇ ದೇವರಲ್ಲ. ಜನರ ಅಗತ್ಯತೆ, ಆಸೆ, ನಂಬಿಕೆಗಳನ್ನೇ ಬಂಡವಾಳ ಮಾಡಿಕೊಂಡವರು ಇವುಗಳೇ ದೇವರೆಂದು ನಂಬಿಸಿ ಭಯ ಸೃಷ್ಟಿಸಿದ್ದಾರೆ. ಇದನ್ನು ನಂಬಬೇಡಿ ಎಂದು ಬಸವಣ್ಣ "ನೀರು ಕಂಡಲ್ಲಿ ಮುಳುಗುವರಲ್ಲ, ಮರವ ಕಂಡಲ್ಲಿ ಸುತ್ತುವರಯ್ಯ... ಬತ್ತುವ ಜಲವ ನಂಬದಿರಿ " ಎಂದು ಎಚ್ಚರಿಸಿದರು. "ಕಲ್ಲು ದೇವರು ದೇವರಲ್ಲ, ಮಣ್ಣು ದೇವರು ದೇವರಲ್ಲ... ತನ್ನತಾನರಿದೆಡೆ ತಾನೇ ದೇವರು ನೋಡಾ ಕೂಡಲ ಸಂಗಮದೇವ " ಎಂದಿದ್ದಾರೆ. ಬಸವ ಅನುಯಾಯಿಗಳಾದ ನಾವು ನಮ್ಮನ್ನು ಅರಿಯುವ ಯತ್ನ ಮಾಡಬೇಕೆಂದು ಕಿವಿಮಾತು ಹೇಳಿದರು.

ಈ ದೇಶದಲ್ಲಿ ದೇವರು, ಧರ್ಮದ ಹೆಸರಿನಲ್ಲೇ ಹೆಚ್ಚು ಅನಾಚಾರ ನಡೆದಿದೆ ಎಂದು ವಿಷಾಧಿಸಿದ ಶ್ರೀಗಳು, ದೇವರ ಹೆಸರಿನಲ್ಲಿ ಮಹಿಳೆಯನ್ನು ದೇವದಾಸಿ ಮಾಡಿದರಲ್ಲ, ಇದಕ್ಕಿಂತ ನೀಚ ಕೆಲಸ ಇನ್ನೇನಿದೆ? ದೇವರು ಕಾಡುತ್ತದೆ, ನೋಡುತ್ತದೆ ಎನ್ನುವ ಸುಳ್ಳುಗಳನ್ನು ಸೃಷ್ಟಿಸಿ ಜನರ ಮನಸಿನಲ್ಲಿ ಆತಂಕ, ಭಯಗಳನ್ನು ಸೃಷ್ಟಿಸಿ ಅವರು ಪ್ರಾಮಾಣಿಕವಾಗಿ ದುಡಿದು ಸಂಪಾದಿಸಿದ ಹಣ, ಹೈನು, ಆಸ್ತಿಗಳನ್ನು ದೋಚುತ್ತ ಬಂದಿದ್ದಾರೆ. ಈ ಶೋಷಣೆ ತಪ್ಪಬೇಕು ಎಂದರೆ ಮೊದಲು ಜನತೆ ಜಾಗೃತರಾಗಬೇಕು. ಯಾವುದೇ ದೇವರು ಕಾಡುವುದೂ ಇಲ್ಲ, ಬೇಡುವುದೂ ಇಲ್ಲ. ಅಂಥವುಗಳು ದೇವರೇ ಅಲ್ಲ. ತಮ್ಮನ್ನು ತಾವು ಅರಿಯುವ ಮೂಲಕ ಪಟ್ಟಭದ್ರರ ಈ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ಮಹಾಸ್ವಾಮಿಗಳು ನೆರೆದಿದ್ದ ಅಪಾರ ಜನಸ್ತೋಮಕ್ಕೆ ಕರೆನೀಡಿದರು.

ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧನ ಮಾತನ್ನು ಮರೆತಿರುವ ಸಮಾಜದಲ್ಲಿ ಅತಿಯಾಸೆ ಹೆಚ್ಚುತ್ತಿದೆ. ಆಸ್ತಿ-ಪಾಸ್ತಿ ಎಷ್ಟಿದ್ದರೂ ತೃಪ್ತಿಯಿಲ್ಲ. ಇನ್ನಷ್ಟು-ಮತ್ತಷ್ಟು ಬೇಕೆನ್ನುವ ಹಪಾಹಪಿ ಅತಿಯಾಗಿದೆ. ದೊಡ್ಡ ಮನೆ ಕಟ್ಟಿಸಿ ವಿಶಾಲವಾದ ಹಾಲ್, ಮಾಸ್ಟರ್ ಬೆಡ್‌ ಇತ್ಯಾದಿ ಸಕಲ ಸೌಲಭ್ಯ ಅಳವಡಿಸಿರುತ್ತಾರೆ. ಆದರೆ, ಇಂಥ ವೈಭೋಗದ ಮನೆಯಲ್ಲಿ ಧ್ಯಾನಕ್ಕೊಂದು ಕೋಣೆ, ಅಧ್ಯಯನಕ್ಕೊಂದು ಗ್ರಂಥಾಲಯ ಇರುವುದಿಲ್ಲ. ಹೀಗಿರುವಾಗ ನೆಮ್ಮದಿ ಸಿಗಲು, ತಮ್ಮನ್ನು ತಾವು ಅರಿಯಲು ಜಾಗವೆಲ್ಲಿದೆ ಆ ಮನೆಯಲ್ಲಿ? ಎಂದು ಪ್ರಶ್ನಿಸಿದ ಅವರು, ಆಸೆ ಇರಬೇಕು. ಬದುಕು ಆಸೆಯ ಮೇಲೆ ನಿಂತಿದೆ. ಆದರೆ, ದುರಾಸೆ ಅತೃಪ್ತಿ, ಅಸಮಾಧಾನ, ಆತಂಕಗಳಿಗೆ ಕಾರಣವಾಗುತ್ತದೆ ಎಂದು ಎಚ್ಚರಿಸಿದರು.

ಉತ್ತಮ ಗುರುಗಳನ್ನು ಆಯ್ಕೆ ಮಾಡಿಕೊಳ್ಳುವಲ್ಲಿನ ವೈಫಲ್ಯವೇ ಸಮಾಜದಲ್ಲಿ ಮೂಢನಂಬಿಕೆಗಳು, ಕಂದಾಚಾರ, ಶೋಷಣೆಗಳು, ದುರಾಚಾರಗಳು ಹೆಚ್ಚಲು ಕಾರಣವಾಗಿದೆ. ಅವಧೂತರಾಗಿ ಬಾಳಿಹೋದ ಸಿದ್ಧಾರೂಢರು, ಸಿದ್ದಪ್ಪಜ್ಜ ಅವರ ಸುಕ್ಷೇತ್ರಗಳಲ್ಲಿ ಬಡವ-ಶ್ರೀಮಂತ, ಶ್ರೇಷ್ಠ-ಕನಿಷ್ಠ ತಾರತಮ್ಯಗಳಿಗೆ ಅವಕಾಶವಿಲ್ಲ. ಇಂಥ ಅವಧೂತರನ್ನು ಗುರುವೆಂದು ಒಪ್ಪಿಕೊಳ್ಳುವ ಮೂಲಕ ಮತ್ತು ಅವರು ತೋರಿದ ಮಾರ್ಗದಲ್ಲಿ ನಡೆಯುತ್ತ ದೇವರ ಹೆಸರಿನಲ್ಲಿ ನಡೆಯುವ ಅನಾಚಾರಗಳಿಗೆ ಕಡಿವಾಣ ಹಾಕಬೇಕು ಎಂದು ಜನತೆಯಲ್ಲಿ ಶ್ರೀಗಳು ಮನವಿ ಮಾಡಿದರು.

ಈ ಸಮಾಜದಲ್ಲಿ ನಗುವುದಕ್ಕೆ, ಹಾಡುವುದಕ್ಕೆ, ಒಟ್ಟಾಗಿ ಸಂತೋಷಪಡುವುದಕ್ಕೂ ಕಟ್ಟುಪಾಡುಗಳಿವೆ. ಮಹಿಳೆ ಬಹಿರಂಗವಾಗಿ ಹಾಡುವುದು- ನಗುವುದು ಅಪರಾಧ ಎಂಬಂತೆ ಬಿಂಬಿಸಲಾಗಿದೆ. ನಮಗೆ ಎಲ್ಲವನ್ನೂ ಕೊಟ್ಟು ಈ ಭೂಮಿಗೆ ಕಳಿಸಿರುವ ಭಗವಂತ ಸುಖವಾಗಿರು, ಸಂತಸವಾಗಿರು, ಸಂಭ್ರಮಿಸು ಎಂದು ಹೇಳಿ ಕಳಿಸಿದ ಬದುಕಿನ ಸೂತ್ರವನ್ನೇ ಮರೆತು ಯಾರೋ ತಮ್ಮ ಹಿತಾಸಕ್ತಿಗಾಗಿ ರೂಪಿಸಿದ ನಿಯಮಗಳಿಗೆ ಕೊರಳೊಡ್ಡಿ ಅತೃಪ್ತಿ ಜೀವಿಗಳಾದಗಿದ್ದೇವೆ. ಬದುಕಿನಲ್ಲಿ ನೆಮ್ಮದಿಯನ್ನೇ ಕಳೆದುಕೊಂದ್ದೇವೆ. ಈ ಕುತಂತ್ರ ಅರಿತು ಬದುಕನ್ನು ಸುಂದರ ಮಾಡಿಕೊಳ್ಳವಂತೆ ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಉದ್ಯಮಿ ಡಾ.ವಿಎಸ್‌ವಿ ಪ್ರಸಾದ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು. ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಇದ್ದರು.

Share this article