ಗದಗ: ಜೀವನದ ಸಾರ ಪ್ರವಚನಗಳ ಮೂಲಕ ತಿಳಿದುಕೊಂಡು ಆಧ್ಯಾತ್ಮಿಕ ಜ್ಞಾನ, ಶಿವಜ್ಞಾನ ಪಡೆದುಕೊಂಡರೆ ನಮ್ಮ ಬದುಕು ಬೆಳಗಬಲ್ಲದು ಎಂದು ನರೇಗಲ್ಲದ ಮಲ್ಲಿಕಾರ್ಜುನ ಶಿವಾಚಾರ್ಯರು ಹೇಳಿದರು.
ವೀರಶೈವ ಧರ್ಮದ ಸಂಸ್ಥಾಪಕ ಶ್ರೀಜಗದ್ಗುರು ರೇಣುಕಾಚಾರ್ಯರು ಬೋಧಿಸಿದ ದಶಸೂತ್ರಗಳು ಮನುಷ್ಯನ ಅಜ್ಞಾನದ ಕತ್ತಲೆಯನ್ನು ಪೂರ್ಣಚಂದ್ರಿಕೆಯು ದಾರಿ ತೋರುವಂತೆ ರೇಣುಕರ ಉಪದೇಶಗಳು ಸರ್ವರಿಗೂ ಮಾರ್ಗದರ್ಶಕವಾಗಿವೆ ಎಂದರು.
ಗಣ್ಯ ಉದ್ಯಮಿದಾರ ಕಿರಣ ಭೂಮಾ ಮಾತನಾಡಿ, ರಂಭಾಪುರಿ ಪೀಠದ ಧ್ಯೇಯ ವಾಕ್ಯವಾದ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ ಎನ್ನುವುದು ಎಲ್ಲರನ್ನೂ ಎಚ್ಚರಿಸುತ್ತದೆ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುವ ವಿಶಾಲ ದೃಷ್ಟಿಕೋನ ಎಲ್ಲರ ಹೃದಯ ಅರಳುವಂತೆ ಮಾಡುತ್ತದೆ ಎಂದರು.ಜ. ಪಂಚಾಚಾರ್ಯ ಸೇವಾ ಸಂಘದ ಉಪಾಧ್ಯಕ್ಷ ಚಂದ್ರು ಬಾಳಿಹಳ್ಳಿಮಠ ಪ್ರಾಸ್ತಾವಿಕವಾಗಿ ಮಾತನಾಡಿ, ೮೩ ವರ್ಷಗಳ ಹಿಂದೆ ರಂಭಾಪುರಿ ವೀರ ಗಂಗಾಧರ ಜಗದ್ಗುರುಗಳ ಅಮೃತ ಹಸ್ತದಿಂದ ಪ್ರಾರಂಭವಾದ ಸಂಘವು ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಹಾಗೂ ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. ಪ್ರತಿ ವರುಷ ಸಂಘದಿಂದ ರೇಣುಕಾಚಾರ್ಯ ಜಯಂತಿ, ರಥೋತ್ಸವವನ್ನು ಅದ್ಧೂರಿಯಾಗಿ ಹಿಂದಿನಿಂದ ಆಚರಿಸುತ್ತಿರುವುದನ್ನು ಸ್ಮರಿಸಿದರು.
ಭಕ್ತಿ ಸೇವೆ ವಹಿಸಿಕೊಂಡಿದ್ದ ಮಹೇಶ ಅಬ್ಬಿಗೇರಿ, ಯು.ಆರ್. ಭೂಸನೂರಮಠ, ಶ್ರೀಕಾಂತ ಲಕ್ಕುಂಡಿ, ಸಿ.ಬಿ. ಹಿರೇಗೌಡ್ರ, ರಾಜಣ್ಣ ಮಲ್ಲಾಡದ, ಸಿ.ಜಿ. ಅಬ್ಬಿಗೇರಿಮಠ, ಎಸ್.ಎಸ್.ಮೇಟಿ ಅವರಿಗೆ ಸನ್ಮಾನಿಸಲಾಯಿತು.
ಮಹೇಶ್ವರಸ್ವಾಮಿ ಹೊಸಳ್ಳಿಮಠ, ಪ್ರಾಧ್ಯಾಪಕ ಗುರುಸಿದ್ದಯ್ಯ ಹಿರೇಮಠ, ಸುರೇಶ ಅಬ್ಬಿಗೇರಿ, ಪ್ರಭು ದಂಡಾವತಿಮಠ, ವಿರೇಶ ಕೂಗು, ಬಸಯ್ಯ ಸಾಸ್ವಿಹಳ್ಳಿಮಠ, ಸಿದ್ದಲಿಂಗಪ್ಪ ಚಳಗೇರಿ, ವಿಜಯಕುಮಾರ ಹಿರೇಮಠ, ರಾಜು ಮುಧೋಳ, ವೀರಣ್ಣ ಧನ್ನೂರ ಹೀರೆಮಠ ಹಾಗೂ ಮಹಿಳಾ ಘಟಕ ಪದಾಧಿಕಾರಿಗಳು ಸೇರಿದಂತೆ ಅನೇಕರು ಇದ್ದರು. ಸಂಘದ ಅಧ್ಯಕ್ಷ ಮಂಜುನಾಥ ಬೇಲೇರಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ವಿ.ಕೆ. ಗುರುಮಠ ನಿರೂಪಿಸಿದರು.