ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಬಹುಮುಖ ಪ್ರತಿಭೆ ಹಾಗೂ ಆರೋಗ್ಯ ಹಾಗೂ ಜೀವ ವಿಮಾ ಸಲಹೆಗಾರರಾದ ಎನ್. ಎಲ್. ದ್ವಾರಕೀಶ್ (೪೯) ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ.ಸದಾಕಾಲ ಚೈತನ್ಯದಿಂದ ಇರುತ್ತಿದ್ದ ದ್ವಾರಕೀಶ್ ಅವರು ಚನ್ನರಾಯಪಟ್ಟಣದ ಅವರ ಮನೆಯಲ್ಲಿ ಸೋಮವಾರ ರಾತ್ರಿ ಹೃದಯಾಘಾತಕ್ಕೆ ಒಳಗಾಗಿದ್ದರು, ತಕ್ಷಣವೇ ಅವರನ್ನು ಪಟ್ಟಣದ ನಾಗೇಶ್ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹಾಸನದ ಸ್ಪರ್ಶ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತರಾಗಿದ್ದಾರೆ. ಅವರ ಪೂರ್ವ ನಿರ್ಧಾರದಂತೆ ಕುಟುಂಬದ ಸದಸ್ಯರು ಆದಿಚುಂಚನಗಿರಿ ವೈದ್ಯಕೀಯ ಶಿಕ್ಷಣ ಸಂಸ್ಥೆಗೆ ದೇಹವನ್ನು ದಾನ ಮಾಡಿದ್ದಾರೆ.
ಗುರುವಾರ ಪಟ್ಟಣದ ಅವರ ಮನೆಯಲ್ಲಿ ಪಾರ್ಥಿವ ಶರೀರವನ್ನು ಇಡಲಾಗಿದ್ದು, ನಂತರ ಸ್ವಗ್ರಾಮ ನರಿಹಳ್ಳಿಯಲ್ಲಿ ದರ್ಶನಕ್ಕೆ ತರಲಾಯಿತು. ಸದಾ ಸಮಾಜಕ್ಕೆ ಒಳಿತನ್ನು ಬಯಸುವ ದ್ವಾರಕೀಶ್ ಅವರು ಹಲವಾರು ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ್ದರು. ಖಾಸಗಿ ಕಂಪನಿಗಳಲ್ಲಿ ಕೆಲಸ ನಿರ್ವಹಿಸುತ್ತಾ ಜೀವ ವಿಮಾ ಸಲಹೆಗಾರರಾಗಿ ೨೫ ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದಾರೆ. ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಆರೋಗ್ಯ ವಿಮೆಯಲ್ಲಿ ಪತ್ನಿಯ ಜೊತೆ ಸೇರಿ ಹಲವಾರು ಪ್ರತಿನಿಧಿಗಳನ್ನು ನಿಯೋಜನೆ ಮಾಡಿಕೊಂಡು ಅವರ ಬದುಕಿಗೂ ಕೂಡ ಪ್ರೇರಣೆಯಾಗಿದ್ದರು.ತಾಲೂಕಿನಲ್ಲಿ ಅಷ್ಟೇ ಅಲ್ಲದೆ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಲ್ಲೂ ಕೂಡ ಹಲವಾರು ಜನರಿಗೆ ಆರೋಗ್ಯ ವಿಮೆ ಮಾಡಿಸಿ ಅವರ ಕಷ್ಟ, ಸುಖದಲ್ಲಿ ಭಾಗಿಯಾಗಿದ್ದರು.
ಸಮಾಜದ ಒಳಿತಿಗೆ ಏನಾದರೂ ಕೊಡಬೇಕೆಂದು ಸದಾ ತುಡಿತದಲ್ಲಿ ಇದ್ದ ದ್ವಾರಕೀಶ್ ಅವರು ನಾಡನಹಳ್ಳಿ ಬಳಿ ಇರುವ ತಮ್ಮ ತೋಟದಲ್ಲಿ ಸಾವಯವ ಕೃಷಿ ಮಾಡಿಕೊಂಡು ತೆಂಗು, ಅಡಿಕೆ ಜೊತೆಗೆ ಇಪ್ಪತ್ತಕ್ಕೂ ಹೆಚ್ಚು ಜಾತಿಯ ಬಾಳೆ ಗಿಡಗಳನ್ನು ಬೆಳೆದಿದ್ದಾರೆ. ವಿವಿಧ ಜಾತಿಯ ಹಣ್ಣಿನ ಗಿಡಗಳನ್ನು ಬೆಳೆಸಿದ್ದಾರೆ.ಮೃತರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಹಲವಾರು ಗಣ್ಯರು ಮೃತರ ಅಂತಿಮ ದರ್ಶನ ಪಡೆದಿದ್ದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.