ಬಳ್ಳಾರಿ: ವಿಶ್ವಾವಿದ್ಯಾಲಯ ಧನ ಸಹಾಯ ಆಯೋಗವು (ಯುಜಿಸಿ) ಎಸ್ಸಿ, ಎಸ್ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಸಮಾನತೆ, ರಕ್ಷಣೆ ಒದಗಿಸುವ ಉದ್ದೇಶದಿಂದ ತಂದಿರುವ ನಿಯಮಾವಳಿ ಜಾರಿಗೊಳಿಸಬೇಕು. ರೋಹಿತ್ ವೇಮುಲ ಕಾಯಿದೆಯನ್ನು ಕರ್ನಾಟಕ ಸರ್ಕಾರ ಕೂಡಲೇ ಅನುಷ್ಠಾನಗೊಳಿಸಬೇಕು. ದಲಿತ ವಿದ್ಯಾರ್ಥಿಗಳ ಸಮನತೆ ಉತ್ತೇಜನೆಗಾಗಿ ಕ್ರಮ ತೆಗೆದುಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ರಾಜ್ಯದಲಿತ ಸಂಘರ್ಷ ಸಮಿತಿ (ಡಾ.ಡಿ.ಜಿ. ಸಾಗರ ಬಣ) ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಆರ್.ಎಸ್.ಎಸ್, ಎಬಿವಿಪಿ ಸಂಘಟನೆಗಳು ವಿಶ್ವವಿದ್ಯಾಲಯದಲ್ಲಿ ನಡೆಸುತ್ತಿರುವ ಸಮಾಜ, ದೇಶ ವಿರೋಧಿ ಚಟುವಟಿಕೆಗಳು ವಿಶ್ವವಿದ್ಯಾಲಯದ ಸದುದ್ದೇಶವನ್ನೇ ಮಣ್ಣು ಪಾಲು ಮಾಡುತ್ತಿವೆ. ಕೆಲವು ಜಾತಿವಾದಿ, ಕೋಮುವಾದಿ ಹಿನ್ನೆಲೆಯ ಕುಲಪತಿ, ಕುಲಸಚಿವರು, ಪ್ರಾಧ್ಯಾಪಕರು ಶೋಷಿತ ಸಮುದಾಯದ ವಿದ್ಯಾರ್ಥಿಗಳನ್ನು ಗುರಿಯಾಗಿಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಇದರಿಂದ ದಲಿತ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣ ಹೆಚ್ಚಾಗಿವೆ. ಕೇಂದ್ರ ಸರ್ಕಾರವೇ ಸುಪ್ರಿಂ ಕೋರ್ಟಿಗೆ ಸಲ್ಲಿಸಿರುವ ಅಂಕಿ ಅಂಶಗಳ ಪ್ರಕಾರ ಐಐಟಿ, ಐಐಎಂ, ಎನ್‌ಐಟಿ. ಶಿಕ್ಷಣ ಸಂಸ್ಥೆಗಳಲ್ಲಿ 122 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿದೆ. ವಿಶ್ವಾವಿದ್ಯಾಲಯದೊಳಗಿನ ಹೋರಾಟವನ್ನು ಹತ್ತಿಕ್ಕಲು ವಿದ್ಯಾರ್ಥಿಗಳ ವಿರುದ್ಧ ಸುಳ್ಳು ಪೋಲಿಸ್ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಎ.ಮಾನಯ್ಯ ಮಾತನಾಡಿ, ವಿಶ್ವವಿದ್ಯಾಲಯಗಳು ಶೈಕ್ಷಣಿಕ ವಾತಾವರಣವು ಕೋಮುವಾದೀಕರಣಕ್ಕೆ ಒಳಗಾಗಿವೆ. ಜಾತಿವಾದಿ ಅಹಂಕಾರ ನಾಶ ಮಾಡದ ಹೊರತು ಭಾರತದ ವಿಶ್ವವಿದ್ಯಾಲಯಗಳಿಗೆ ಮತ್ತು ದಲಿತ ಹಿಂದುಳಿದ, ಬುಡಕಟ್ಟು ಸಮುದಾಯಗಳಿಗೆ ಭವಿಷ್ಯವಿಲ್ಲ. ಎಸ್ಸಿ, ಎಸ್ಟಿ ವಿದ್ಯಾರ್ಥಿಗಳು ಮೇಲೆ ವಿಶ್ವವಿದ್ಯಾಲಯಗಳಲ್ಲಿ ಧರ್ಮ-ಜಾತಿ ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳ ದೌರ್ಜನ್ಯಗಳನ್ನು ತಡೆಟ್ಟಲು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ತಂದಿರುವ ನಿಯಮಗಳನ್ನು ದಸಂಸ ಸ್ವಾಗತಿಸುತ್ತದೆ ಎಂದರು.

ಬಹುತ್ವ ಭಾರತದ ಮೌಲ್ಯಾಧಾರಿತ ವಾತಾವರಣದಲ್ಲಿ ಎಲ್ಲ ಜಾತಿ ಸಮುದಾಯದ ವಿದ್ಯಾರ್ಥಿಗಳು ಜಾತಿ ದೌರ್ಜನ್ಯ ಮುಕ್ತವಾಗಿ ವಿದ್ಯೆಯನ್ನು ಕಲಿಯುವುದಕ್ಕೆ ಅವಕಾಶ ಕಲ್ಪಿಸಲು ಹಾಗೂ ಬಹುಪ್ರಧಾನವಾಗಿ ಈ ದೇಶದ ಎಸ್ಸಿ, ಎಸ್ಟಿ ಸಮುದಾಯದ ವಿದ್ಯಾರ್ಥಿಗಳು ನಿರ್ಭಯವಾದ ಶೈಕ್ಷಣಿಕ ವಾತಾವರಣವನ್ನು ವಿಶ್ವವಿದ್ಯಾಲಯಗಳಲ್ಲಿ ನಿರ್ಮಿಸಬೇಕಾದರೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ರೋಹಿತ್ ವೇಮುಲ ಕಾಯ್ದೆಯನ್ನು ತಡಮಾಡದೇ ಕಡ್ಡಾಯವಾಗಿ ಜಾರಿ ಮಾಡಲೇಬೇಕು ಎಂದು ಒತ್ತಾಯಿಸಿದರು.

ಸಂಘಟನೆಯ ಜಿಲ್ಲಾ ಪ್ರಮುಖರಾದ ಎಚ್.ಬಿ.ಎಚ್. ಆಂಜನೇಯ, ಕೊಳಗಲ್ಲು ಮಲ್ಲಯ್ಯ, ಬಿ.ರಮೇಶ್ ಬಿಸಿಲಹಳ್ಳಿ, ಟಿ.ಎಂ.ಎ. ಸ್ವಾಮಿ, ಬೆಳಗಲ್ಲು ಹುಲುಗಪ್ಪ, ಜಿ.ಪಂಪಾಪತಿ ಕುಡುತಿನಿ, ಮಹೇಶ್, ಕಾಂಗ್ರೆಸ್ ಮುಖಂಡರಾದ ಪಿ.ಗಾದಿ ಲಿಂಗನಗೌಡ, ಕೆ.ಬಸಪ್ಪ, ದೇವದಾಸ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಪ್ರಧಾನಿ, ಕೇಂದ್ರ ಮಾನವ ಸಂಪನ್ಮೂಲ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವರಿಗೆ ಬರೆದ ಮನವಿಯನ್ನು ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು.