ಮಾತಾನುಗ್ರಹ ಧ್ಯಾನಕೇಂದ್ರದಿಂದ ಯಕ್ಷಸಿರಿ ಪ್ರಶಸ್ತಿ ಪ್ರದಾನ
ಕನ್ನಡಪ್ರಭ ವಾರ್ತೆ, ಕೊಪ್ಪಭಾರತ ಒಂದು ಯೋಗ ಭೂಮಿ, ನಿರಂತರ ಕಲಿಕೆಯ ಅಭ್ಯಾಸ ಮುಂದುವರಿದಾಗ ಜೀವನ ಸಾರ್ಥಕತೆ ಹೊಂದಲು ಸಾಧ್ಯ ಎಂದು ಹರಿಹರಪುರ ಶ್ರೀಮಠದ ಶ್ರೀಗಳ ಆಪ್ತ ಕಾರ್ಯದರ್ಶಿ ರಘುನಾಥ ಶಾಸ್ತ್ರಿ ಹೇಳಿದರು. ಕಸಾಪ ಹರಿಹರಪುರ ಘಟಕ ಮತ್ತು ಭಂಡಿಗಡಿ ಮಾತಾನುಗ್ರಹ ಧ್ಯಾನಕೇಂದ್ರ ಇವರ ಸಂಯುಕ್ತ ಆಶ್ರಯದಲ್ಲಿ ಭಾನುವಾರ ಭಂಡಿಗಡಿಯಲ್ಲಿ ನಡೆದ ಕಸಾಪ ನಡಿಗೆ ಹಳ್ಳಿ ಕಡೆಗೆ ಮತ್ತು ಗಾನವೈಭವ ಕಾರ್ಯಕ್ರಮ ಮಲೆನಾಡ ಯಕ್ಷಸಿರಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಕ್ಷಗಾನದಂತಹ ಕಲೆ ಕಾಪಾಡಿಕೊಂಡು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮದು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ಹರಿಹರಪುರ ಹೋಬಳಿ ಘಟಕದ ಕಾರ್ಯ ಶ್ಲಾಘನೀಯ ಎಂದರು. ಕಸಾಪ ತಾಲೂಕು ಅಧ್ಯಕ್ಷ ಜೆ.ಎಂ. ಶ್ರೀಹರ್ಷ ಮಾತನಾಡಿ ಕಸಾಪ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮದ ಮೂಲಕ ಸಾಹಿತ್ಯ ಪರಿಷತ್ತಿನ ಕಾರ್ಯಕ್ರಮ ಜನಮಾನಸದಲ್ಲಿ ಉಳಿಯುತ್ತಿದೆ ಎಂದರು. ಕರ್ನಾಟಕ ಜಾನಪದ ಪರಿಷತ್ ಕೊಪ್ಪ ತಾಲೂಕು ಅಧ್ಯಕ್ಷ ಬಿ.ಎಚ್. ದಿವಾಕರ್ ಭಟ್ ಭಂಡಿಗಡಿ ಮಾತನಾಡಿ ಯುವಕರು ಸಾಹಿತ್ಯದ ಕುರಿತು ಆಸಕ್ತಿ ಹೊಂದುವಂತೆ ಮಾಡುವುದು ಎಲ್ಲರ ಕರ್ತವ್ಯ. ಯಕ್ಷಗಾನದಂತಹ ತರಬೇತಿ ಕಾರ್ಯಕ್ರಮ ನಿರಂತರವಾಗಿ ನಡೆದಾಗ ಕಲೆಗಳನ್ನು ಸಾಹಿತ್ಯವನ್ನು ಉಳಿಸಿ ಬೆಳೆಸಲು ಸಾಧ್ಯ ಎಂದರು.ಕಸಾಪ ಹರಿಹರಪುರ ಹೋಬಳಿ ಘಟಕದ ಅಧ್ಯಕ್ಷ ವೈದ್ಯ ಬಿ.ಆರ್. ಅಂಬರೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನ ತರಬೇತಿ ಶಿಬಿರ ಯಶಸ್ವಿಯಾಗಿ ನೆರವೇರಿದ್ದು ಮುಂದಿನ ದಿನಗಳಲ್ಲಿ ನಿರಂತರವಾಗಿ ತರಬೇತಿಗಳು ನಡೆಯಲಿವೆ. ಸಾಹಿತ್ಯ, ಕಲೆ, ಜಾನಪದ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಮುಖ್ಯ. ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸಲು ವೇದಿಕೆಯನ್ನು ಕಲ್ಪಿಸುವ ಉದ್ದೇಶ ಕಸಾಪ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಗಣೇಶ ಮೂರ್ತಿ ಹುಲುಗಾರು, ಹಾಗೂ ವೆಂಕಟರಮಣ ಮೂರ್ತಿ ಕೊಪ್ಪ ಇವರಿಗೆ ಮಲೆನಾಡ ಯಕ್ಷ ಸಿರಿ ಪ್ರಶಸ್ತಿ ನೀಡಿ ಪುರಸ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತಾನುಗ್ರಹ ಯಕ್ಷಗಾನ ತರಬೇತಿ ಕೇಂದ್ರ ವಿದ್ಯಾರ್ಥಿಗಳಾದ ಮಧುರ, ಅನನ್ಯ, ಕೃತ್ತಿಕಾ, ಮಹಿಮಾ, ದಿಶಾನ್, ದಿಹಾನ್, ಅಕ್ಷಯ್, ಹೇಮಂತ್, ಶ್ರೀಪುಣ್ಯ, ಮನ್ವಿತ್ ಹಿರಣ್ಯ, ಅದ್ವಿಕಾ, ಸಾನ್ವಿ ತರಬೇತಿಯಲ್ಲಿ ಕಲಿತ ಯಕ್ಷಗಾನದ ತಾಳವನ್ನು ಪ್ರದರ್ಶಿಸಿದರು. ಕಸಾಪ ಭಂಡಿಗಡಿ ಗ್ರಾಮ ಘಟಕದ ಅಧ್ಯಕ್ಷ ಅಸ್ಮಾ, ಕಸಾಪ ಪರಿಷತ್ ಹರಿಹರಪುರ ಘಟಕದ ಹೋಬಳಿ ಕೋಶಾಧ್ಯಕ್ಷ ಎ.ಒ. ವೆಂಕಟೇಶ್, ಗೌರವ ಕಾರ್ಯದರ್ಶಿ ಸುಮಿತ್ರಾ ನಾರಾಯಣ, ಪ್ರಧಾನ ಸಂಚಾಲಕ ಲಕ್ಷ್ಮಿ ನಾರಾಯಣ, ಶುಕುರ್ ಅಹಮ್ಮದ್, ಶಶಿಶೇಖರ್ ಹೊರಕೊಡಿಗೆ, ಬಿ.ಆರ್. ರವಿಪ್ರಸಾದ್, ಯಕ್ಷಗಾನ ಕಲಾವಿದರಾದ ಅಶೋಕ್ ಸಿಗದಾಳು, ಪೈರೋಜ್, ಭಾಸ್ಕರ ಭಂಡಾರಿ, ಶಿವರಾಜ್, ಗಾಯತ್ರಿ, ಸುನೀತಾ, ಆಶಾ, ಚಂದ್ರಮೌಳಿ ಮುಂತಾದವರಿದ್ದರು.