ಬ್ಯಾಂಕಗಳಿಂದ ಲಿಲಾವ್ ನೋಟಿಸ್‌: ಸಂಸದರ ಎದುರು ಅಳಲು ತೋಡಿಕೊಂಡ ರೈತರು

KannadaprabhaNewsNetwork |  
Published : Feb 17, 2026, 02:45 AM IST
ಮುಧೋಳದಲ್ಲಿ ಕೆನರಾ ಬ್ಯಾಂಕಿನ ರೈತರು ಪಡೆದಿರುವ ಸಾಲ ಮರುಪಾವತಿ ವಿಚಾರವಾಗಿ ಬ್ಯಾಂಕ್‌ಗಳಿಂದ ಬಂದ ನೋಟಿಸ್‌ ಗಳನ್ನು ಪ್ರದರ್ಶಿಸಿದ ರೈತರು | Kannada Prabha

ಸಾರಾಂಶ

ಬಾಗಲಕೋಟೆ: ಸಾಲ ಮರುಪಾವತಿಯಲ್ಲಿ ವಿಳಂಬ ಮಾಡಿರುವ ರೈತರಿಗೆ ಬ್ಯಾಂಕ್‌ ಗಳಿಂದ ಲಿಲಾವ್ ನೋಟಿಸ್ ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಧೋಳ ರೈತರು ಸೋಮವಾರ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದ ಪಿ.ಸಿ. ಗದ್ದಿಗೌಡರ ಕಚೇರಿಗೆ ಆಗಮಿಸಿ ಸಂಸದರ ಎದುರು ತಮ್ಮ ಸಂಕಷ್ಟ ತೋಡಿಕೊಂಡರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಸಾಲ ಮರುಪಾವತಿಯಲ್ಲಿ ವಿಳಂಬ ಮಾಡಿರುವ ರೈತರಿಗೆ ಬ್ಯಾಂಕ್‌ ಗಳಿಂದ ಲಿಲಾವ್ ನೋಟಿಸ್ ಜಾರಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಧೋಳ ರೈತರು ಸೋಮವಾರ ನಗರದ ಜಿಲ್ಲಾಡಳಿತ ಭವನದಲ್ಲಿರುವ ಸಂಸದ ಪಿ.ಸಿ. ಗದ್ದಿಗೌಡರ ಕಚೇರಿಗೆ ಆಗಮಿಸಿ ಸಂಸದರ ಎದುರು ತಮ್ಮ ಸಂಕಷ್ಟ ತೋಡಿಕೊಂಡರು.

ಮುಧೋಳದಲ್ಲಿ ಕೆನರಾ ಬ್ಯಾಂಕಿನಲ್ಲಿ ರೈತರು ಪಡೆದಿರುವ ಸಾಲ ಮರುಪಾವತಿ ವಿಚಾರವಾಗಿ ಬ್ಯಾಂಕ್‌ಗಳಿಂದ ನೋಟಿಸ್, ಆಸ್ತಿ ಜಪ್ತಿ ನೋಟಿಸ್ ಬರುತ್ತಿವೆ. ಇದರಿಂದ ರೈತರು ಮಾನಸಿಕ ಕಿರುಕುಳ ಅನುಭವಿಸುತ್ತಿದ್ದಾರೆ. ನ್ಯಾಯಾಲಯದಿಂದ ಆಸ್ತಿ ಜಪ್ತಿ ನೋಟಿಸ್ ಜಾರಿ ಮಾಡಿದರೆ ರೈತರು ತುಂಬಾ ತೊಂದರೆ ಅನುಭವಿಸಬೇಕಾಗುತ್ತದೆ. ಹೀಗಾಗಿ ರೈತರಿಗೆ ಒನ್ ಟೈಮ್ ಸೆಟಲ್ ಮೆಂಟ್‌ ನಲ್ಲಿ ಕಡಿಮೆ ಹಣ ಪಾವತಿಗೆ ಅವಕಾಶ ಕಲ್ಪಿಸಿಕೊಡಬೇಕು. ರೈತರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಬೇಕು. ಇಲ್ಲವಾದಲ್ಲಿ ರೈತರು ಉಗ್ರ ಹೋರಾಟ ಮಾಡುವುದಾಗಿ ಸಂಸದರಿಗೆ ತಿಳಿಸಿದರು.

ಅನೇಕ ರೈತರ ಸಾಲವೂ ಕಟಬಾಕಿ ಇದ್ದು, ಸಾಲಕ್ಕಿಂತ ಹಲವು ಪಟ್ಟು ಬಡ್ಡಿ ಹೆಚ್ಚಳ ಆಗಿದೆ. ರೈತರು ಸಂಕಷ್ಟದಲ್ಲಿದ್ದು, ಬಡ್ಡಿ ಸಂಪೂರ್ಣ ಕೈಬಿಡಬೇಕು. ಜೊತೆಗೆ ಸಾಲದ ಮೊತ್ತದಲ್ಲೂ ರಿಯಾಯಿತಿ ಮಾಡಿ ಸಾಲ ಪಾವತಿಗೆ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಈ ಬಗ್ಗೆ ಸಂಸದ ಪಿ.ಸಿ. ಗದ್ದಿಗೌಡರ ಅವರು ಜಿಲ್ಲಾ ಪಂಚಾಯಿತಿ ಸಿಇಒ ಶಶಿಧರ ಕುರೇರ ಹಾಗೂ ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್‌ ಸೇರಿದಂತೆ ಕೆಲ ಬ್ಯಾಂಕ್ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಮಾಹಿತಿ ಪಡೆದುಕೊಂಡರು.

ರೈತರು ಪಡೆದಿರುವ ಸಾಲ ಮರುಪಾವತಿ ಮತ್ತು ಒನ್ ಟೈಮ್ ಸೆಟಲ್ ಮೆಂಟ್ ಕುರಿತು ಚರ್ಚಿಸಲು ಬ್ಯಾಂಕ್ ಅಧಿಕಾರಿಗಳ ಜೊತೆಗೆ ಫೆ.24ರಂದು ಸಭೆ ನಡೆಸಲಾಗುವುದು. ಬ್ಯಾಂಕ್ ನಿಯಮಾವಳಿ ಏನಿದೆ ಹಾಗೂ ತಮ್ಮ ಬೇಡಿಕೆ ಬಗ್ಗೆ ಚರ್ಚಿಸೋಣ ಎಂದು ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದಕ್ಷಿಣ ಕನ್ನಡ ಜಿಲ್ಲಾದ್ಯಂತ ಶಿವರಾತ್ರಿ ಸಡಗರ
ಪೊಲೀಸ್‌ ಗೃಹ ಯೋಜನೆ 2030ರವರೆಗೆ ಮುಂದುವರಿಕೆ: ಪರಮೇಶ್ವರ್‌