ನೂತನ ಪದಾಧಿಕಾರಿಗಳ ಪದಗ್ರಹಣ
ಲಯನ್ಸ್ ಸಂಸ್ಥೆ ತನ್ನ ಮಾನವೀಯತೆಯ ಸೇವಾಮುಖಿ ಚಟುವಟಿಕೆಗಳನ್ನು ಪ್ರಪಂಚದ 210 ಕಡೆಗಳಲ್ಲಿ ಮಾಡಲಾಗುತ್ತಿದೆ ಎಂದು ಸಂಸ್ಥೆಯ 317 ಜಿಲ್ಲೆಯ 2 ನೇ ಗವರ್ನರ್ ಮತ್ತಿದೇವ್ ಕುಮಾರ್ ಹೇಳಿದರು.
ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಸ್ಥೆಯ ಸೇವಾ ಮುಖಿ ಚಟುವಟಿಕೆಗಳನ್ನು ನೂತನ ಪದಾಧಿಕಾರಿಗಳು ಮುಂದುವರಿಸುವ ಜತೆಗೆ ಜನಸಾಮಾನ್ಯರ ಸಂಕಷ್ಟಕ್ಕೂ ಸ್ಪಂದಿಸುವಂತಾಗಬೇಕು ಎಂದು ಹೇಳಿದರು.ಕೊಳ್ಳೇಗಾಲದ ಲಯನ್ಸ್ ಸಂಸ್ಥೆ ಪ್ರಾರಂಭವಾದ 48 ವರ್ಷಗಳಿಂದ ಅನೇಕ ಸೇವಾಮುಖಿ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಿದೆ. ಕಣ್ಣಿನ ಚಿಕಿತ್ಸೆಗೆ ಹೆಚ್ಚಿನ ಆದ್ಯತೆ ನೀಡಿ ಇದುವರೆಗೆ 11 ಸಾವಿರಕ್ಕೂ ಅಧಿಕ ಮಂದಿಗೆ ಶಸ್ತ್ರ ಚಿಕಿತ್ಸೆ ಮಾಡಿ ಲಕ್ಷಾಂತರ ಜನರಿಗೆ ಉಚಿತ ಕಣ್ಣಿನ ತಪಾಸಣೆ ಮಾಡಿ ಹಾಗೂ ಶಾಲೆಯನ್ನು ಉತ್ತಮವಾಗಿ ನಡೆಸುತ್ತ ಬಂದಿದೆ. ನಮ್ಮ 317 ಜಿ ಕ್ಲಬ್ನಲ್ಲಿ ಕೊಳ್ಳೇಗಾಲ ಲಯನ್ಸ್ ಕ್ಲಬ್ ಉತ್ತಮವಾದ ಸೇವಾಕಾರ್ಯಗಳನ್ನು ಮಾಡುತ್ತ ಬಂದಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ನೂತನ ಅಧ್ಯಕ್ಷ ಚಿಕ್ಕಬಸವಯ್ಯ ಮಾತನಾಡಿ, ಲಯನ್ಸ್ ಸಂಸ್ಥೆಯ ಮೂಲಕ ಬಡಜನರ ಸೇವೆ ಮಾಡುವ ಅವಕಾಶ ದೊರಕಿರುವುದು ನನ್ನ ಸೌಭಾಗ್ಯ, ಲಯನ್ಸ್ ಸಂಸ್ಥೆಯ ಹಿರಿಯ ಮಾರ್ಗದಶನದಲ್ಲಿ ಸೇವಾಕಾರ್ಯಗಳನ್ನು ಮುಂದುವರಿಸುವುದಾಗಿ ಹೇಳಿದರು.
ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಲಯನ್ಸ್ ಶಾಲೆಯ ಮಕ್ಕಳಿಗೆ ಸನ್ಮಾನಿಸಲಾಯಿತು. ಹೊಸಮಾಲಂಗಿ ಶಾಲೆಗೆ ಸೂಚನಾ ಫಲಕ ವಿತರಣೆ, ಹೊಂಡರಬಾಳು ಶಾಲೆಯ ಎಲ್ಲಾ ಮಕ್ಕಳಿಗೆ ಪುಸ್ತಕ ವಿತರಣೆ ಮಾಡಲಾಯಿತು.