ಡಿ.ಕಗ್ಗಲ್ ಶ್ರೀಚಾಣಕ್ಯ ಶಾಲೆಯಲ್ಲಿ ಅಕ್ಷರಾಭ್ಯಾಸ; ಸಸಿಗಳ ವಿತರಣೆ

KannadaprabhaNewsNetwork | Published : Jun 25, 2024 12:34 AM

ಸಾರಾಂಶ

ಮನುಷ್ಯ ಬರೀ ವಿದ್ಯೆ ಕಲಿತು, ಬದುಕು ರೂಪಿಸಿಕೊಂಡರೆ ಸಾಲದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಹೊಣೆಗಾರಿಕೆ ಇರಬೇಕು.

ಬಳ್ಳಾರಿ: ಪರಿಸರ ರಕ್ಷಣೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಕೆಲಸ ಬಾಲ್ಯದಲ್ಲಿಯೇ ಆಗಬೇಕು ಎಂದು ಪಾಲ್ತೂರು ಮಠದ ಶ್ರೀಚನ್ನವೀರಶಾಂತ ಶಿವಾಚಾರ್ಯರು ಹೇಳಿದರು.

ತಾಲೂಕಿನ ಡಿ.ಕಗ್ಗಲ್ ಗ್ರಾಮದಲ್ಲಿ ಶ್ರೀಚಾಣಕ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಜರುಗಿದ ಅಕ್ಷರಾಭ್ಯಾಸ ಹಾಗೂ ಸಸಿಗಳ ವಿತರಣೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಮನುಷ್ಯ ಬರೀ ವಿದ್ಯೆ ಕಲಿತು, ಬದುಕು ರೂಪಿಸಿಕೊಂಡರೆ ಸಾಲದು. ನಮ್ಮ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುವ ಹೊಣೆಗಾರಿಕೆ ಇರಬೇಕು. ಭಗವಂತ ನೀಡಿದ ಪ್ರಕೃತಿಯನ್ನು ರಕ್ಷಿಸುವ ಬದಲು ನಾಶ ಮಾಡುತ್ತಿದ್ದಾನೆ. ಇದರಿಂದ ಮನುಷ್ಯ ಜೀವನ ಅವನತಿಯತ್ತ ಸಾಗುತ್ತಿದೆ. ಇದನ್ನು ತಪ್ಪಿಸಲು ಮಕ್ಕಳಲ್ಲಿ ಪರಿಸರದ ಅರಿವು ಮೂಡಿಸಬೇಕು. ಮರಗಿಡಗಳನ್ನು ನೆಟ್ಟು ಪೋಷಿಸುವ ಜವಾಬ್ದಾರಿಯನ್ನು ಮಕ್ಕಳಿಗೆ ತಿಳಿಸಿಕೊಡಬೇಕು ಎಂದರು.

ಅಕ್ಷರಾಭ್ಯಾಸಕ್ಕೆ ಅತ್ಯಂತ ಪ್ರಾಚೀನ ಹಿನ್ನಲೆಯಿದೆ. ಗುರುಕುಲ ಪದ್ಧತಿಯಲ್ಲೂ ಈ ಪದ್ಧತಿಯಿತ್ತು. ಅದನ್ನು ಮುಂದುವರಿಸಿಕೊಂಡು ಹೊಗುತ್ತಿರುವುದು ಅತ್ಯಂತ ಶ್ಲಾಘನೀಯ ಕಾರ್ಯ. ಮಕ್ಕಳಿಗೆ ಬಾಲ್ಯದಲ್ಲಿಯೇ ಅಕ್ಷರ ಸಂಸ್ಕಾರ ನೀಡುವ ಮೂಲಕ ಅವರನ್ನು ಅಕ್ಷರದ ಅಕ್ಷಯವನ್ನಾಗಿ ಮಾಡುವುದೇ ಅಕ್ಷರಾಭ್ಯಾಸದ ಮೂಲ ಆಶಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಲೆಕ್ಕ ಪರಿಶೋಧಕ ಹಾಗೂ ಪರಿಸರ ಪ್ರೇಮಿ ಸಿದ್ಧರಾಮೇಶ್ವರಗೌಡ ಕರೂರು, ಪರಿಸರ ರಕ್ಷಣೆಯಿಂದಾಗುವ ಅನುಕೂಲಗಳು, ಮರಗಿಡಗಳನ್ನು ನೆಟ್ಟು ಪೋಷಿಸುವುದರಿಂದಾಗುವ ಪ್ರಯೋಜನಗಳು ಕುರಿತು ತಿಳಿಸಿದರು.

ಪ್ರಾಸ್ತಾವಿಕ ಮಾತನಾಡಿದ ಶಾಲೆಯ ಮುಖ್ಯಸ್ಥ ಶಿವಾಚಾರಿ ವಿ., ಪ್ರತಿವರ್ಷ ಅಕ್ಷರಾಭ್ಯಾಸ ವೇಳೆ ಪೋಷಕರಿಗೆ ನೂರಾರು ಸಸಿಗಳನ್ನು ವಿತರಣೆ ಮಾಡುವ ಮೂಲಕ ಗ್ರಾಮದಲ್ಲಿ ಮರಗಿಡಗಳನ್ನು ಬೆಳೆಸಿ, ಪರಿಸರ ಕಾಪಾಡುವ ಕಾಳಜಿಯ ಕೆಲಸವಾಗುತ್ತಿದೆ. ಪೋಷಕರು ಹಾಗೂ ಪರಿಸರ ಪ್ರಿಯರ ಸಹಕಾರದಿಂದ ಮುಂದುವರಿಯಲಿದೆ ಎಂದರು.

ಶಾಲೆಯ ಮುಖ್ಯಗುರು ಎನ್.ಭಾರತಿ, ಶಾಲೆಯ ಶಿಕ್ಷಕಿಯರಾದ ಮಂಜುಳಾ, ರೂಪಾ, ವಿಶಾಲಾಕ್ಷಿ, ಮುನಿಸ್ವಾಮಿ, ಪ್ರೀತಿ, ಪುಷ್ಪಾವತಿ ಇದ್ದರು. ಶಿಕ್ಷಕಿಯರಾದ ಪಲ್ಲವಿ, ಭವಾನಿ, ಅಶ್ವಿನಿ ಕಾರ್ಯಕ್ರಮ ನಿರ್ವಹಿಸಿದರು.

ಪಾಲ್ತೂರು ಶ್ರೀಗಳು, ಲೆಕ್ಕ ಪರಿಶೋಧಕ ಸಿದ್ಧರಾಮೇಶ್ವರ ಗೌಡ ಕರೂರು ಪೋಷಕರಿಗೆ ಸಸಿಗಳನ್ನು ವಿತರಣೆ ಮಾಡಿದರು.

Share this article