ಕಪ್ಪತ್ತಗುಡ್ಡದಲ್ಲಿ ಸಾಹಿತ್ಯೋತ್ಸವ, ಸಮಾನ ಮನಸ್ಕರಿಂದ ಪರಿಸರ ಸಂರಕ್ಷಣೆಯ ಸಂಕಲ್ಪ

KannadaprabhaNewsNetwork |  
Published : Jun 29, 2026, 02:15 AM IST
28ಎಂಡಿಜಿ2, ಮುಂಡರಗಿ ತಾಲೂಕಿನ ಕಪ್ಪತ್ತಗುಡ್ಡದಲ್ಲಿ ಸಮಾನ ಮನಸ್ಕರಿಂದ ಪರಿಸರ ಸಂರಕ್ಷಣೆಯ ಸಂಕಲ್ಪ, ಕಪ್ಪತ್ತಗಿರಿ ಸಾಹಿತ್ಯೋತ್ಸವ ಜರುಗಿತು. | Kannada Prabha

ಸಾರಾಂಶ

ಯುವ ಸಾಹಿತಿ ಸಿದ್ದು ಸತ್ಯಣ್ಣವರ ಪರಿಕಲ್ಪನೆಯಲ್ಲಿ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಸಾಹಿತ್ಯೋತ್ಸವಕ್ಕೆ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾರ್ಗದರ್ಶನ ನೀಡಿದರು.

ಮುಂಡರಗಿ: ಮುಂಗಾರು ಮಳೆ ಕೊರತೆ ಮಧ್ಯದಲ್ಲಿಯೂ ಹಸಿರು ಹೊದಿಕೆಯಿಂದ ಕಂಗೊಳಿಸುತ್ತಿರುವ ಕಪ್ಪತ್ತಗಿರಿಯ ಮಡಿಲಲ್ಲಿ ಶನಿವಾರ ನಡೆದ ಕಪ್ಪತ್ತಗಿರಿ ಸಾಹಿತ್ಯೋತ್ಸವದಲ್ಲಿ 40ಕ್ಕೂ ಹೆಚ್ಚು ಸಮಾನ ಮನಸ್ಕರು ಒಂದೆಡೆ ಸೇರಿ ಪರಿಸರ ಸಂರಕ್ಷಣೆಯ ಸಂಕಲ್ಪ ಮಾಡಿದರು. ಪ್ರಕೃತಿಯೊಂದಿಗೆ ಸಾಹಿತ್ಯ, ಪರಿಸರ ಜಾಗೃತಿ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಬೆಸೆಯುವ ಅಪರೂಪದ ಪ್ರಯತ್ನ ಇದಾಗಿತ್ತು.ಯುವ ಸಾಹಿತಿ ಸಿದ್ದು ಸತ್ಯಣ್ಣವರ ಪರಿಕಲ್ಪನೆಯಲ್ಲಿ ಹಾಗೂ ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಸಾಹಿತ್ಯೋತ್ಸವಕ್ಕೆ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಳಮನಿ ಮಾರ್ಗದರ್ಶನ ನೀಡಿದರು. ಡೋಣಿ ಗ್ರಾಮದ ಅರಣ್ಯ ಪರಿಸರ ಶಿಬಿರದಿಂದ ಆರಂಭವಾದ ಚಾರಣವು ಕಪ್ಪತ್ತಗಿರಿಯ ಪ್ರಮುಖ ತಾಣಗಳಾದ ಬಂಗಾರಕೊಳ್ಳ, ನವಣಿ ರಾಶಿ, ನೈಸರ್ಗಿಕ ಧ್ಯಾನ ಮಂದಿರ, ಸಿದ್ದರಾಮೇಶ್ವರ ಪಡಿ, ಉಪ್ಪಿನ ಪಡಿ, ಗಾಳಿಗುಂಡಿ ಬಸವಣ್ಣ ಹಾಗೂ ಮಂಜಿನದೋಣಿ ಕಣಿವೆ, ಅಡಿಕೆ ಕಣಿವೆ ಸೇರಿದಂತೆ ಹಲವು ಪ್ರಕೃತಿ ವೈವಿಧ್ಯಮಯ ಸ್ಥಳಗಳಲ್ಲಿ ಸಾಗಿತು.ಸಿದ್ದು ಸತ್ಯಣ್ಣವರ ಮಾತನಾಡಿ, ಶುದ್ಧಗಾಳಿಗೆ ಹೆಸರಾದ ಕಪ್ಪತ್ತಗುಡ್ಡದ ಮೇಲೆ ಸುರಿಯುವ ಮಳೆ ಬಂಗಾರಕೊಳ್ಳದಂತಹ ಇನ್ನಿತರ ಜಾಗಗಳ ಮೂಲಕ ಹರಿದು ಸುತ್ತಮುತ್ತಲ ಹಳ್ಳಿಗಳ ಕೆರೆಕೊಳ್ಳಗಳನ್ನು ತುಂಬಿಸಿ, ಕೃಷಿಗೂ ನೆರವಾಗುತ್ತದೆ. ನೂರಾರು ಎಕರೆ ಅಧಿಕ ಕೃಷಿಭೂಮಿಗೂ ನೀರಾವರಿ ಒದಗಿಸುತ್ತದೆ. ಆದ್ದರಿಂದ ಕಪ್ಪತ್ತಗಿರಿಯನ್ನು ಉಳಿಸುವುದು ಕೇವಲ ಅರಣ್ಯ ಸಂರಕ್ಷಣೆಯಲ್ಲ, ಕೃಷಿ ಮತ್ತು ಗ್ರಾಮೀಣ ಬದುಕಿನ ರಕ್ಷಣೆಯೂ ಆಗಿದೆ ಎಂದರು.

ಜಾನಪದ ಕಲಾವಿದ ಗವಿಸಿದ್ದಯ್ಯ ಹಳ್ಳಿಕೇರಿಮಠ ಅವರ ಗಾಯನದೊಂದಿಗೆ ಗುಡ್ಡದ ನೈಸರ್ಗಿಕ ಧ್ಯಾನ ಮಂದಿರದಲ್ಲಿ ನಡೆದ ಚಿಂತನ-ಮಂಥನದಲ್ಲಿ ಮಾತನಾಡಿದ ವಲಯ ಅರಣ್ಯಾಧಿಕಾರಿ ಮಂಜುನಾಥ ಮೇಗಲಮನಿ, ಕಪ್ಪತ್ತಗಿರಿಯನ್ನು 2019ರಲ್ಲಿ ವನ್ಯಜೀವಿಧಾಮವಾಗಿ ಘೋಷಣೆ ಮಾಡಲಾಯಿತು. 24,400 ಹೆಕ್ಟೇರ್ ಪ್ರದೇಶದ ವನ್ಯಜೀವಿಧಾಮವಾಗಿ ಘೋಷಿಸಿದ ನಂತರ ಇಲ್ಲಿನ ಅರಣ್ಯ ಸಂಪತ್ತು ಮತ್ತು ಜೀವವೈವಿಧ್ಯ ಗಮನಾರ್ಹವಾಗಿ ವೃದ್ಧಿಯಾಗಿದೆ ಎಂದರು.ಪರಿಸರವೆಂಬ ನೀತಿಶಾಸ್ತ್ರ ವಿಷಯವಾಗಿ ಮಾತನಾಡಿದ ವಿ. ಹರಿನಾಥಬಾಬು, ಮನುಷ್ಯ ತನ್ನ ದುರಾಸೆಯಿಂದ ಪ್ರಕೃತಿಗೆ ಅಪಾರ ಹಾನಿ ಮಾಡಿದ್ದಾನೆ. ನದಿಗಳು ಮಲಿನಗೊಂಡಿವೆ, ಕಾಡುಗಳು ನಾಶವಾಗಿವೆ, ಜೀವವೈವಿಧ್ಯಕ್ಕೆ ಧಕ್ಕೆಯಾಗಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪರಿಸರವನ್ನು ಹಾಳು ಮಾಡುವ ಬದಲು, ಮುಂದಿನ ಪೀಳಿಗೆಗೆ ಶುದ್ಧವಾದ ಪರಿಸರವನ್ನು ಉಳಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.''''''''ಅನ್ನದ ತಟ್ಟೆಯಲ್ಲಿ ವಿಷ'''''''' ವಿಷಯವಾಗಿ ಮಾತನಾಡಿದ ಸಾವಯವ ಕೃಷಿಕ ಆನಂದತೀರ್ಥ ಪ್ಯಾಟಿ ಅವರು, ಅತಿಯಾದ ರಾಸಾಯನಿಕ ಕೃಷಿಯ ಪರಿಣಾಮ ಮಾನವ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಹಸಿರುಕ್ರಾಂತಿಯ ನೆಲೆಯಾಗಿದ್ದ ಪಂಜಾಬ್‌ನಲ್ಲಿ ಕ್ಯಾನ್ಸರ್ ಪ್ರಕರಣಗಳು ವ್ಯಾಪಕವಾಗಿವೆ ಎಂದರು.

ಸಾಹಿತ್ಯೋತ್ಸವದ ಅಧ್ಯಕ್ಷತೆಯನ್ನು ಸಾಹಿತಿ ಸನತಕುಮಾರ ಬೆಳಗಲಿ ದಂಪತಿ ವಹಿಸಿದ್ದರು. ಮಹಾಂತೇಶ ಖೋತ, ಉದಯ ರಾಯರೆಡ್ಡಿ, ಸಂಗಮೇಶ ಮೆಣಸಿನಕಾಯಿ, ಶಿವಲಿಂಗಪ್ಪ ಹಂದಿಹಾಳು, ವೀರೇಂದ್ರ ರಾವಿಹಾಳ್, ರಾಹುಲ ಬೆಳಗಲಿ, ಜೆ. ಕುಮಾರ್, ತುಕಾರಾಂ ನಾಯ್ಕ್, ವಿನೋದ ಪಾಟೀಲ, ಬದರೀ ಪ್ರಸಾದ್, ಟಿ.ಎಸ್. ಗೊರವರ, ಆರೀಫ ರಾಜಾ, ಕಿರಣ ಅಕ್ಕಿ, ವಿ. ಹರಿನಾಥಬಾಬು, ಶ್ರೀಪಾದರಾಜ ಮುರುಡಿ, ಕಳಕೇಶ ಗುಡ್ಲಾನೂರ, ಸಿಕಂದರ ಮೀರಾನಾಯ್ಕ, ದೇವೇಂದ್ರ ಜಿರ್ಲಿ, ಅನಿಲ ಗುನ್ನಾಪುರ, ಎಲ್. ತಿಪ್ಪಾನಾಯ್ಕ್, ರವಿ ಹಂಪಿ, ಭೂಪೇಶ, ಸಲೀಮ್ ಬಳಬಟ್ಟಿ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಮೈಲಾರಪ್ಪ ಮಡಿವಾಳರ, ತೋಟಯ್ಯ ಬಾಳಿಹಳ್ಳಿಮಠ, ರವಿ ದೊಡ್ಡಮನಿ ಹಾಗೂ ಇತರರು ಚಾರಣದಲ್ಲಿ ಹೆಜ್ಜೆ ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಾವೇರಿ ಜಿಲ್ಲಾಸ್ಪತ್ರೆಗೆ ಇರುವುದು ಒಂದೇ ಆ್ಯಂಬುಲೆನ್ಸ್
ಹೊರಗುತ್ತಿಗೆ ನೌಕರರ ನೂತನ ಕನಿಷ್ಠ ವೇತನ ಆದೇಶ ತಕ್ಷಣ ಜಾರಿಗೊಳಿಸಲು ಆಗ್ರಹ