ಕನ್ನಡಪ್ರಭ ವಾರ್ತೆ ಶಿವಮೊಗ್ಗ
ವ್ಯಕ್ತಿತ್ವವನ್ನು ಸೃಜನಶೀಲತೆಯೊಂದಿಗೆ ಉನ್ನತಿಕರಿಸುವ ಶಕ್ತಿ ಸಾಹಿತ್ಯಕ್ಕಿದೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಅಭಿಪ್ರಾಯಪಟ್ಟರು.ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಗೋಪಾಳದ ದ್ರೌಪದಮ್ಮ ವೃತ್ತದಲ್ಲಿರುವ ದ್ರೌಪದಮ್ಮ ದೇವಸ್ಥಾನ ಸೇವಾ ಸಮಿತಿ ಸಹಯೋಗದಲ್ಲಿ ಏರ್ಪಡಿಸಿದ್ದ ಆಷಾಢ ಸಾಹಿತ್ಯ ಸಂಭ್ರಮ 277ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಹಾಗೂ ಜನಪ್ರತಿನಿಧಿಗಳಿಗೆ ಅಭಿನಂದನಾ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಹುಣ್ಣಿಮೆ ಶಿವಮೊಗ್ಗದ ಅಸ್ಮಿತೆಯಾಗಿ ರೂಪಗೊಳ್ಳುತ್ತಿದೆ. ಜನರ ಬಳಿಗೆ ಸಾಹಿತ್ಯ ಸಾಂಸ್ಕೃತಿಕ ವಾತಾವರಣ ತಲುಪಿಸುವ ಕಾರ್ಯ ಕಳೆದ ಎರಡು ದಶಕಗಳಿಂದ ನಡೆಸಿಕೊಂಡು ಬರುತ್ತಿರುವ ರೀತಿ ನಿಬ್ಬೆರಗಾಗುವಂತೆ ಮಾಡುತ್ತಿದೆ ಎಂದು ಹೇಳಿದರು.
ಸೂಡಾ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಮಾತನಾಡಿ, ಜನ ಪ್ರತಿನಿಧಿಗಳನ್ನು ಆಗಾಗ್ಗೆ ಜಾಗೃತಿಗೊಳಿಸುವ ಕಾರ್ಯ ಸಾಹಿತ್ಯಾತ್ಮಕ ಕಾರ್ಯಕ್ರಮಗಳಿಂದ ಸಾಧ್ಯ. ಸದಾ ಕ್ರಿಯಾಶೀಲ ಚಟುವಟಿಕೆ ನಡೆಸುವಂತಹ ಸಾಹಿತ್ಯ ಗ್ರಾಮದಂತಹ ಯೋಜನೆ ಅಭಿವೃದ್ಧಿಗೆ ನಾವೆಲ್ಲರೂ ಬದ್ಧ ಎಂದರು.ಡಿ.ಸಿ.ಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ.ಮರಿಯಪ್ಪ ಮಾತನಾಡಿದರು. ಅರಣ್ಯಾ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿ ಮುಖ್ಯಮಂತ್ರಿ ಸೇವಾ ಪದಕ ಪಡೆದ ಮಂಡಗದ್ದೆ ವಲಯ ಅರಣ್ಯಾಧಿಕಾರಿ ಎಂ.ಪಿ.ಆದರ್ಶರನ್ನು ಸನ್ಮಾನಿಸಲಾಯಿತು.
ಜಿಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಅಧ್ಯಕ್ಷರಾದ ಡಿ.ಮಂಜುನಾಥ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ವೇದಮೂರ್ತಿ ಮಹಾಲಿಂಗಶಾಸ್ತ್ರೀ, ದೇವಸ್ಥಾನ ಸಮಿತಿ ಅಧ್ಯಕ್ಷರಾದ ಬಿ. ಚನ್ನಬಸಪ್ಪ, ವಿ.ಟಿ.ಅರುಣ್ ಉಪಸ್ಥಿತರಿದ್ದರು.ಇದೇ ವೇಳೆ ಸಾಹಿತ್ಯ ಗ್ರಾಮದ ಅಭಿವೃದ್ಧಿಗಾಗಿ ಮಲೆನಾಡು ಅಭಿವೃದ್ಧಿ ಮಂಡಳಿಯಿಂದ ಅಗತ್ಯ ನೆರವು ನೀಡುವಂತೆ ಕೋರಿ ಅಧ್ಯಕ್ಷ ಡಿ.ಮಂಜುನಾಥ ಆರ್.ಎಂ.ಮಂಜುನಾಥ ಗೌಡಗೆ ಮನವಿ ಪತ್ರ ಸಲ್ಲಿಸಿದರು.
ಸುಗಂಧರಾಣಿ ಮತ್ತು ತಂಡದವರಿಂದ ಭಜನೆ, ಬಿ.ಟಿ.ಅಂಬಿಕಾ, ಸಿ.ಪೂಜಾ ಚನ್ನಬಸಪ್ಪ, ಕೆ.ಎಸ್.ದಾಕ್ಷಾಯಿಣಿ ರಾಜ್ ಕುಮಾರ್, ಸುಪ್ರಿಯಾ ಸಂತೋಷ ಕುಮಾರ್ ಭಾವಗೀತೆ ಹಾಡಿದರು. ಶ್ರೀ ಆದಿಚುಂಚನಗಿರಿ ಪ್ರೌಢಶಾಲಾ ಕನ್ನಡ ಶಿಕ್ಷಕಿ ವಿ.ಎಸ್. ಸುಜಾತ ಕಥೆ ವಾಚಿಸಿದರು. ಕವಿಗಳಾದ ಎಸ್. ಹೇಮಲತಾ, ಶುಭ ಪ್ರಕಾಶ್ ಕುಸ್ಕೂರು, ಉಮಾ ಎಸ್ ಎಸ್. ಹಿರೇಮಠ, ನಾರಾಯಣ ಮೂರ್ತಿ, ವಿಜಯಲಕ್ಷ್ಮಿ ಪಂಡಿತ್, ಅನ್ನಪೂರ್ಣ ಕವನ ವಾಚಿಸಿದರು. ಬಾಲರಾಜ್ ಚುರ್ಚುಗುಂಡಿ ಹನಿಗವನ ವಾಚಿಸಿದರು. ಪೂಜಾ ಚನ್ನಬಸಪ್ಪ ಪ್ರಾರ್ಥಿಸಿ ಎಂ.ನವೀನ್ ಕುಮಾರ್ ಸ್ವಾಗತಿಸಿ, ಡಿ.ಗಣೇಶ್ ವಂದಿಸಿ, ಕೆ.ಎಂ ಮಂಜಪ್ಪ ನಿರೂಪಿಸಿದರು.