ಕನ್ನಡಪ್ರಭ ವಾರ್ತೆ ಭದ್ರಾವತಿನಾವು ಎಷ್ಟೇ ಎತ್ತರಕ್ಕೆ ಏರಿದರೂ ನೀತಿ ಶಿಕ್ಷಣ ಅತ್ಯಂತ ಮುಖ್ಯ. ಮನುಷ್ಯನ ಮನಸ್ಸಿನ ಸಾಮಾಜಿಕ ಹಾಗೂ ಬೌದ್ಧಿಕ ಬೆಳವಣಿಗೆಗೆ ಸಾಹಿತ್ಯ ದಾರಿ ತೋರಿಸುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ.ಜ್ಯೋತಿ ಶಂಕರ್ ಹೇಳಿದರು.
ಬದುಕಿಗೂ ಸಾಹಿತ್ಯಕ್ಕೂ ಅವಿನಾಭಾವ ಸಂಬಂಧವಿದೆ. ನಾವು ನಮ್ಮ ನಮ್ಮ ಕಾಯಕಕ್ಕೆ ಗೌರವ ನೀಡಿಕೊಳ್ಳಬೇಕು. ಮನಸ್ಸಿನಲ್ಲಿ ಕ್ಲೇಶವನ್ನು ಇಟ್ಟುಕೊಳ್ಳಬಾರದು. ಬದುಕು ಸುಂದರವಾಗಿರಬೇಕೆಂದರೆ ನಮ್ಮ ಸುತ್ತಮುತ್ತಲಿನವರೊಂದಿಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳಬೇಕು. ಕಲಿಕೆ ಎಂಬುದು ಶಾಲೆ-ಕಾಲೇಜುಗಳಲ್ಲಿ ಮಾತ್ರ ಸೀಮಿತವಾಗದೆ ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಮನೆಗಳಲ್ಲಿ ನಡೆಯುವ ಉತ್ತಮ ಚಟುವಟಿಕೆಗಳಿಂದಲೂ ನಾವು ಬಹಳಷ್ಟು ಕಲಿಯಬಹುದು. ಶಿಕ್ಷಣ ಯಶಸ್ವಿಯಾಗಲು ಗುರು ಮತ್ತು ಗುರಿ ಎರಡೂ ಅಗತ್ಯ ಎಂದರು.
ಕುವೆಂಪು ವಿಶ್ವವಿದ್ಯಾಲಯ ಕನ್ನಡ ಭಾರತಿ ಪ್ರಾಧ್ಯಾಪಕ ಡಾ.ಜಿ.ಪ್ರಶಾಂತ್ ನಾಯಕ ಉಪನ್ಯಾಸ ನೀಡಿ, ಶಿಕ್ಷಣ, ಅರಿವು ಮತ್ತು ಜ್ಞಾನ ಎಲ್ಲವೂ ಸಾಹಿತ್ಯದಿಂದಲೇ ಉದ್ಭವವಾಗಿವೆ. ಇಂದಿನ ದಿನಗಳಲ್ಲಿ ಶಿಕ್ಷಣ ವ್ಯಾಪಾರೀಕರಣವಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.ಶಿಕ್ಷಣ ಎಂದರೆ ವ್ಯಕ್ತಿನಿಷ್ಠತೆಯನ್ನು ಸ್ವತಃ ಅರಿತುಕೊಳ್ಳುವುದಾಗಿದೆ. ಮೊದಲು ಮನುಷ್ಯನಾಗು ಎಂದು ಕಲಿಸುವ ಶಿಕ್ಷಣ ಅಗತ್ಯವಿದೆ. ಇಂದಿನ ಮಕ್ಕಳ ಮೇಲೆ `ನೀನು ಡಾಕ್ಟರ್, ಎಂಜಿನಿಯರ್ ಆಗಬೇಕು'''''''''''''''' ಎಂಬ ಒತ್ತಡವನ್ನು ನಾವು ಹೇರುತ್ತಿದ್ದೇವೆ. ಆದರೆ ಅವರ ಬುದ್ಧಿಮತ್ತೆ ಮತ್ತು ಆಸಕ್ತಿಗೆ ತಕ್ಕಂತೆ ಕಲಿಕೆಯ ಅಭ್ಯಾಸವನ್ನು ರೂಪಿಸುವ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಚನಕಾರರ ಚಿಕ್ಕ ಚಿಕ್ಕ ಅಂಶಗಳನ್ನಾದರೂ ಸರಳವಾಗಿ ಅರ್ಥಮಾಡಿಕೊಳ್ಳುವ ಮೂಲಕ ಉತ್ತಮ ಮನಸ್ಸುಗಳನ್ನು ಕಟ್ಟುವ ಜವಾಬ್ದಾರಿ ನಮ್ಮ ಮೇಲೆ ಇದೆ ಎಂದರು.
ಉಪವಿಭಾಗದ ಪೋಲಿಸ್ ಉಪಾಧೀಕ್ಷಕ ಪ್ರಕಾಶ್ ರಾಥೋಡ್ ಮಾತನಾಡಿದರು. ಶಿವಮೊಗ್ಗ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ, ಆನಂದಪುರಂ ಬೆಕ್ಕಿನಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಉಪಸ್ಥಿತರಿದ್ದು ಆಶೀರ್ವಚನ ನೀಡಿದರು. ಸಿರಿಗೆರೆ ತರಳಬಾಳು ಜಗದ್ಗುರುಗಳು ದಿವ್ಯಸಾನ್ನಿಧ್ಯ ವಹಿಸಿದ್ದರು.
- - -
ಭದ್ರಾವತಿಯಲ್ಲಿ ನಡೆಯುತ್ತಿರು ತರಳಬಾಳು ಹುಣ್ಣಿಮೆ ಮಹೋತ್ಸವದ ನಾಲ್ಕನೇ ದಿನದ ಸಂಜೆ ಕಾರ್ಯಕ್ರಮದಲ್ಲಿ ಶಿವಮೊಗ್ಗ ಮುರುಘರಾಜೇಂದ್ರ ಮಹಾಸಂಸ್ಥಾನ ಮಠ, ಆನಂದಪುರ ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀ, ಸಿರಿಗೆರೆ ತರಳಬಾಳು ಜಗದ್ಗುರು ಭಾಗವಹಿಸಿದ್ದರು.